Karnataka HC and Rahul Gandhi, Jairam Ramesh, Supriya Shrinate
Karnataka HC and Rahul Gandhi, Jairam Ramesh, Supriya Shrinate 
ಸುದ್ದಿಗಳು

ಕೆಜಿಎಫ್‌-2 ಕೃತಿಸ್ವಾಮ್ಯ ಉಲ್ಲಂಘನೆ: ಕಾಂಗ್ರೆಸ್‌ ನಾಯಕರ ವಿರುದ್ಧದ ಎಫ್‌ಐಆರ್‌; ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Bar & Bench

ಭಾರತ್ ಜೋಡೋ ಯಾತ್ರೆಯ ಪ್ರಚಾರ ವಿಡಿಯೋಗೆ ಕೆಜಿಎಫ್‌-2 ಕನ್ನಡ ಸಿನಿಮಾದ ಮುದ್ರಿತ ಸಂಗೀತವನ್ನು ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಜೈರಾಮ್‌ ರಮೇಶ್‌ ಮತ್ತು ಸುಪ್ರಿಯಾ ಶ್ರೀನಾಥೆ ಅವರ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಕಾಯ್ದಿರಿಸಿದೆ.

ಕಾಂಗ್ರೆಸ್‌ ನಾಯಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ವಾದ-ಪ್ರತಿವಾದವನ್ನು ಸುಮಾರು ಒಂದು ತಾಸು ಆಲಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಲಾಗಿದ್ದು, ಪ್ರಕರಣ ಇತ್ಯರ್ಥವಾಗುವವರೆಗೆ ಮಧ್ಯಂತರ ತಡೆ ಮುಂದುವರಿಯಲಿದೆ ಎಂದು ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರವಾಗಿ ವಕಾಲತ್ತು ಹಾಕಿರುವ ವಕೀಲೆ ಲೀಲಾ ದೇವಾಡಿಗ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು “ಕೃತಿಸ್ವಾಮ್ಯ ಕಾಯಿದೆ ಸೆಕ್ಷನ್‌ 63ರ ಅಡಿ ಅಪರಾಧ ಎನಿಸಲು ಆರೋಪಿಯು ಉದ್ದೇಶಪೂರ್ವಕವಾಗಿ ಹಕ್ಕುಸ್ವಾಮ್ಯ ಉಲ್ಲಂಘಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಆ ಉದ್ದೇಶವಿಲ್ಲ. ಇದಲ್ಲದೇ ಅರ್ಜಿದಾರರು ಯಾವುದೇ ರೀತಿಯಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಿಂದ ಆರ್ಥಿಕ ಲಾಭ ಪಡೆದಿಲ್ಲ” ಎಂದು ವಾದಿಸಿದರು.

“ನಾನು ಹಕ್ಕುಸ್ವಾಮ್ಯ ಉಲ್ಲಂಘಿಸಿ ನಗದು ಸಂಪಾದಿಸಿದ್ದೇನೆ ಎಂಬುದು ಆರೋಪವಲ್ಲ. ಹಕ್ಕುಸ್ವಾಮ್ಯ ಕಾಯಿದೆಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅದರಿಂದ ನನಗೆ ಯಾವುದೇ ಲಾಭವಾಗಿಲ್ಲ” ಎಂದರು.

ವಾದದ ನಡುವೆ ವಿಕ್ರಂ ಅವರು ಕಾಂಗ್ರೆಸ್‌ ಭಾರತ್‌ ಜೋಡೊ ಯಾತ್ರೆಯನ್ನು ಸಂಘಟಿಸಿದ್ದು, ಅದರಲ್ಲಿ ರಾಹುಲ್‌ ಗಾಂಧಿ ನಡಿಗೆಯಲ್ಲಿ ಭಾಗವಹಿಸಿದ್ದಾರೆ. “ಒಂದೊಮ್ಮೆ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯ ನಡೆದು, ಅದರಲ್ಲಿ ವಿರಾಟ್‌ ಕೊಹ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ಮಾಡಿದರೆ, ಆ ದೃಶ್ಯದ ಜೊತೆ ಶಾರುಖ್‌ ಖಾನ್ ಅವರ ಚಿತ್ರದ ಗೀತೆ ಬಳಕೆ ಮಾಡಿ ವಿಡಿಯೊ ಮಾಡಿದರೆ ಅಲ್ಲಿ ವಿರಾಟ್‌ ಕೊಹ್ಲಿ ಹಕ್ಕು ಸ್ವಾಮ್ಯ ಉಲ್ಲಂಘಿಸಿದ್ದಾರೆ ಎನ್ನಬಹುದೇ?” ಎಂದು ಸಮರ್ಥಿಸಿದರು.

“ರಾಹುಲ್‌ ಗಾಂಧಿ ಅವರು ಭಾರತ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದರು. ಅವರು ವಿಡಿಯೊವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿಲ್ಲ. ಜೈರಾಮ್‌ ರಮೇಶ್‌ ಅಥವಾ ಸುಪ್ರಿಯಾ ಅವರು ವಿಷಯ (ಕಂಟೆಂಟ್‌) ರೂಪಿಸಿಲ್ಲ. ಆ ಮೂಲಕ ಹಕ್ಕುಸ್ವಾಮ್ಯ ಕಾಯಿದೆ ಉಲ್ಲಂಘಿಸಿಲ್ಲ. ಹಕ್ಕುಸ್ವಾಮ್ಯ ಕಾಯಿದೆ ಸೆಕ್ಷನ್‌ 63ರ ಅಡಿ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ನಡೆಸಲು ಉದ್ದೇಶಪೂರ್ವಕವಾಗಿ ಅದನ್ನು ಉಲ್ಲಂಘಿಸಬೇಕು. ದೂರಿನಲ್ಲಿ ಉದ್ದೇಶಪೂರ್ವಕಾಗಿ ಅರ್ಜಿದಾರರು ಹಕ್ಕುಸ್ವಾಮ್ಯ ಉಲ್ಲಂಘಿಸಿದ್ದಾರೆ ಎಂಬ ಅಂಶ ಎಲ್ಲಿದೆ?" ಎಂದು ವಾದಿಸಿದರು.

ದೂರುದಾರರ ಪರ ವಕಾಲತ್ತು ಹಾಕಿರುವ ವಕೀಲ ಪವನ್‌ ಕುಮಾರ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಶ್ರೀರಂಗ ಅವರು “ಅರ್ಜಿದಾರರು ಕೆಜಿಎಫ್‌ 2 ಹಾಡಿನ ಬಳಕೆ ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾಯಿದೆ ಉಲ್ಲಂಘಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿ, ಪ್ರತಿಬಂಧಕಾದೇಶವನ್ನೂ ಪಡೆದುಕೊಳ್ಳಲಾಗಿದೆ. ಇದು ಕ್ರಿಮಿನಲ್‌ ಅಪರಾಧ ಪ್ರಕರಣವಾಗಿರುವುದರಿಂದ ತನಿಖೆ ನಡೆಯಬೇಕು. ಹಕ್ಕು ಸ್ವಾಮ್ಯ ಕಾಯಿದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿವಿಲ್‌ ಮತ್ತು ಕ್ರಿಮಿನಲ್‌ ಎರಡೂ ರೂಪದಲ್ಲಿ ಪರಿಹಾರ ಪಡೆಯಲು ಅವಕಾಶವಿದೆ" ಎಂದರು.

“ಯಾವುದೇ ಹಣಕಾಸಿನ ಲಾಭವಾಗದಿದ್ದರೂ ಅರ್ಜಿದಾರರು ಇಡೀ ಪ್ರಕ್ರಿಯೆಯ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ” ಎಂದು ಆಕ್ಷೇಪಿಸಿದರು.

ಕೆಜಿಎಫ್‌-2 ಸಿನಿಮಾದ ಮುದ್ರಿತ ಗೀತೆಯನ್ನು ಭಾರತ್‌ ಜೋಡೊ ಯಾತ್ರೆಯಲ್ಲಿ ಬಳಕೆ ಮಾಡುವ ಮೂಲಕ ಕೃತಿಸ್ವಾಮ್ಯ ಮಾಡಲಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್‌ ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯದಲ್ಲಿ ಮೂಲ ವಾಣಿಜ್ಯ ದಾವೆ ಹೂಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯವು ಕಾಂಗ್ರೆಸ್‌ ಅದನ್ನು ಬಳಕೆ ಮಾಡದಂತೆ ನಿರ್ಬಂಧ ಹೇರಿತ್ತು. ಇದರ ಆಧಾರದ ಮೇಲೆ ಯಶವಂತಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 120ಬಿ, 403, 465 ಜೊತೆಗೆ 34ರ ಅಡಿ ಹಾಗೂ ಹಕ್ಕುಸ್ವಾಮ್ಯ ಕಾಯಿದೆ ಸೆಕ್ಷನ್‌ 63 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ 66ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.