krishna janmabhoomi case 
ಸುದ್ದಿಗಳು

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣ: ವೈಜ್ಞಾನಿಕ ಸಮೀಕ್ಷೆಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ಹಿಂದೂ ಪಕ್ಷಕಾರರು

Bar & Bench

ವಿವಾದಿತ ಶಾಹಿ ಈದ್ಗಾ ಮಸೀದಿ - ಕೃಷ್ಣ ಜನ್ಮಭೂಮಿ ಸ್ಥಳದ ವೈಜ್ಞಾನಿಕ ಸಮೀಕ್ಷೆಯನ್ನು ಕೋರಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಮಥುರಾ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿಯ ಜಮೀನಿನಲ್ಲಿ ನಿರ್ಮಿಸಿರುವುದರಿಂದ ಅದನ್ನು ತೆರವುಗೊಳಿಸುವಂತೆ ಹಿಂದೂ ಪಕ್ಷಕಾರರು ಮೊಕದ್ದಮೆ ಹೂಡಿದ್ದರು.

ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯ ಮತ್ತು ಅಲಹಾಬಾದ್ ಹೈಕೋರ್ಟ್ ಈ ವರ್ಷದ ಆರಂಭದಲ್ಲಿ, ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನ ಸಮೀಕ್ಷೆಯ ಮನವಿಯನ್ನು ತಿರಸ್ಕರಿಸಿದ್ದರಿಂದ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ಜಾಗದ ಹಕ್ಕಿಗೆ ಸಂಬಂಧಿಸಿದ ವಿಶ್ವಾಸಾರ್ಹತೆಗಾಗಿ ಆಯುಕ್ತರ ನೇತೃತ್ವದಲ್ಲಿ ವೈಜ್ಞಾನಿಕ ಸಮೀಕ್ಷೆ ಅಗತ್ಯ ಎಂದು ಟ್ರಸ್ಟ್‌ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ.

ಮುಸ್ಲಿಂ ಸಮುದಾಯದವರು ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ, ಆವರಣವನ್ನು ವಿಶ್ರಾಂತಿ ಕೊಠಡಿಗಳಾಗಿ ಬಳಸುತ್ತಿದ್ದಾರೆ. ಪವಿತ್ರ ಅಥವಾ ಪೂಜಾ ಸ್ಥಳವೆಂದು ಟ್ರಸ್ಟ್‌ ಪರಿಗಣಿಸಲಾದ ಸ್ಥಳದಲ್ಲಿ ಉಪದ್ರವ ಉಂಟುಮಾಡುತ್ತಿದ್ದಾರೆ. ಹಿಂದೂ ಚಿಹ್ನೆಗಳು, ಕಂಬಗಳು ಮತ್ತಿತರ ದೇವಾಲಯದ ಪ್ರಮುಖ ಭಾಗಗಳನ್ನು ನಿರಂತರವಾಗಿ ಅಗೆದು ನಾಶಪಡಿಸಲಾಗಿದೆ. ಇದೆಲ್ಲವೂ ಸ್ಥಳದ ಪಾವಿತ್ರ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ತಂದಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಜನರೇಟರ್‌ನಿಂದ ಉತ್ಪತ್ತಿಯಾಗುವ ಶಬ್ದ ಮತ್ತು ಕಂಪನಗಳಿಂದಾಗಿ ಪೂಜಾ ಸ್ಥಳದ ಗೋಡೆಯ ಮೇಲೆ ಬಿರುಕುಗಳು ಮೂಡಿವೆ. ಜಾಗ ಗುರುತಿಸುವಿಕೆಗೆ ಸಂಬಂಧಿಸಿದ ವಿವಾದವಿರುವುದರಿಂದ ಆಯುಕ್ತರನ್ನು ನೇಮಿಸುವುದನ್ನು ಕೆಳ ನ್ಯಾಯಾಲಯ ಪರಿಗಣಿಸಬೇಕು ಎಂದು ಅದು ಹೇಳಿದೆ.