KSLSA 
ಸುದ್ದಿಗಳು

ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಕ್ಕೆ ಕೆಎಸ್‌ಎಲ್‌ಎಸ್‌ಎದಿಂದ ಅರ್ಜಿ ಆಹ್ವಾನ; ಅ.20 ಅರ್ಜಿ ಸಲ್ಲಿಕೆಗೆ ಕೊನೆ ದಿನ

ಆಯ್ಕೆಯಾದವರನ್ನು ಕಾನೂನು ಸೇವೆಗಳ ಕೇಂದ್ರಗಳ ಫ್ರಂಟ್ ಆಫೀಸ್, ಜಾಗೃತಿ ಕಾರ್ಯಕ್ರಮ, ವಿವಿಧ ಕಾನೂನು ಚಟುವಟಿಕೆಗಳಿಗೂ ಬಳಸಿಕೊಳ್ಳಲಾಗುವುದು. ಇವರಿಗೆ ದಿನಕ್ಕೆ ರೂ.750 ಗೌರವಧನ  ನೀಡಲಾಗುವುದು ಎಂದು ತಿಳಿಸಲಾಗಿದೆ.

Bar & Bench

"ಕಾನೂನು ಸೇವೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರಿಗೆ ನೆರವಾಗಲು ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು (ಅಧಿಕಾರ ಮಿತ್ರರು) ರಾಜ್ಯಾದ್ಯಂತ ನೇಮಿಸಲು ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ತೀರ್ಮಾನಿಸಿದೆ ಎಂದು  ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್‌ ಶಶಿಧರ ಶೆಟ್ಟಿ ತಿಳಿಸಿದ್ದಾರೆ.

ಕೆಎಸ್‌ಎಲ್‌ಎಸ್‌ಎದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಯೋಜನೆಯಡಿ ಈ ಕಾನೂನು ಸ್ವಯಂ ಸೇವಕರ ನೇಮಕ ಹಾಗೂ ಅವರಿಗೆ ತರಬೇತಿ ನೀಡುವುದು ಯೋಜನೆಯ ಮುಖ್ಯ ಗುರಿಯಾಗಿದೆ. ಅರೆಕಾಲಿಕ ಕಾನೂನು ಸ್ವಯಂ ಸೇವಕರು ಸಾಮಾನ್ಯ ಜನರು ಮತ್ತು ಸೇವಾ ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಮಧ್ಯವರ್ತಿಗಳಂತೆ ಸಂಪರ್ಕ ಕೊಂಡಿಗಳಾಗಿ ಕೆಲಸ ನಿರ್ವಹಿಸುತ್ತಾರೆ” ಎಂದರು.

“ಈ ಸಂಬಂಧ ಪ್ರತಿಯೊಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಗರಿಷ್ಠ 25-50 ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ 50-100 ಸಕ್ರಿಯ ಅರೆಕಾಲಿಕ ಕಾನೂನು ಸ್ವಯಂ ಸೇವಕರುಗಳನ್ನು ಹೊಂದಬಹುದಾಗಿರುತ್ತದೆ.  ರಾಜ್ಯದಲ್ಲಿ 2024ನೇ ಸಾಲಿನಲ್ಲಿ ಒಟ್ಟು 5,343 ಅರೆಕಾಲಿಕ ಕಾನೂನು ಸೇವಕರುಗಳನ್ನು ಒಂದು ವರ್ಷದ ಅವಧಿಗೆ ನೇಮಿಸಲಾಗಿದ್ದು, ಇವರ ಅವಧಿ 20-11-2025ಕ್ಕೆ ಮುಕ್ತಾಯಗೊಳ್ಳುತ್ತದೆ” ಎಂದರು.

“ಈ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ಹೊಸದಾಗಿ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು 20-10-2025ರೊಳಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು.  ಇವರು ಕಾರ್ಯನಿರ್ವಹಿಸಲು ಕನಿಷ್ಠ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿರಬೇಕು. ಯಾವುದೇ ರೀತಿಯ ಆದಾಯ ನಿರೀಕ್ಷಿಸದೆ ಎಲ್ಲಾ ವರ್ಗದ ದುರ್ಬಲರಿಗೆ ಸಹಾನುಭೂತಿಯಿಂದ ಸಹಾಯ ಮಾಡುವ ಮನಸ್ಥಿತಿ ಹೊಂದಿರಬೇಕು” ಎಂದರು.

“ಅರೆಕಾಲಿಕ ಕಾನೂನು ಸ್ವಯಂ ಸೇವಕರಾಗಿ ಶಿಕ್ಷಕರು, ನಿವೃತ್ತ ಶಿಕ್ಷಕರು, ಹಿರಿಯ ನಾಗರಿಕರು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ಕಾನೂನು ವಿದ್ಯಾರ್ಥಿಗಳು, ಸ್ವಸಹಾಯ ಗುಂಪಿನವರು, ನಿವೃತ್ತ ಸೈನಿಕರು ಹೀಗೆ ಎಲ್ಲಾ ಕ್ಷೇತ್ರದ ಜನರು ನೇಮಕಗೊಳ್ಳಬಹುದು. ಇವರ ಆಯ್ಕೆಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಹಂತದಲ್ಲಿ ಆಯಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ" ಎಂದು ತಿಳಿಸಿದರು.

ಮುಂದುವರೆದು, "ಸ್ಥಳೀಯ ನಿವಾಸಿಗಳಿಂದ ಅರ್ಜಿಗಳನ್ನು ಆಯಾ ಜಿಲ್ಲೆ / ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನಿಸಿ, ಸ್ವೀಕರಿಸಿ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ.  ಆಯ್ಕೆ ಸಮಿತಿಯು ತನ್ನ ವಿವೇಚನಾಧಿಕಾರವನ್ನು ಬಳಸಿ ಸೂಕ್ತ ಅಭ್ಯರ್ಥಿಗಳನ್ನು ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನಾಗಿ ಆಯ್ಕೆ ಮಾಡುತ್ತದೆ. ಅಲ್ಲದೆ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗದವರಿಗೂ ಆದ್ಯತೆ ನೀಡುತ್ತದೆ. ಆಯ್ಕೆಯಾದವರನ್ನು ರಾಜ್ಯ ಕಾನೂನು ಸೇವೆಗಳ ಕೇಂದ್ರಗಳ ಫ್ರಂಟ್ ಆಫೀಸ್, ಜಾಗೃತಿ ಕಾರ್ಯಕ್ರಮ, ವಿವಿಧ ಕಾನೂನು ಚಟುವಟಿಕೆಗಳಿಗೂ ಬಳಸಿಕೊಳ್ಳಲಾಗುವುದು. ಇವರಿಗೆ ದಿನಕ್ಕೆ ರೂ.750 ಗೌರವಧನ  ನೀಡಲಾಗುವುದು. ಒಂದು ವರ್ಷದ ಅವಧಿಗೆ ಇವರನ್ನು ನೇಮಿಸಿಕೊಳ್ಳಲಾಗುವುದು” ಎಂದು ತಿಳಿಸಿದರು.

“ಆಯ್ಕೆಯಾದ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಜನರಿಗೆ ಕಾನೂನು ಅರಿವು ಮೂಡಿಸುವುದು, ಬಾಲ್ಯ ವಿವಾಹ ತಡೆ, ಮಾದಕ ವಸ್ತು ಕಳ್ಳ ಸಾಗಣೆ ತಡೆ, ಮಾಹಿತಿ ಸಂಗ್ರಹ, ಲೋಕ ಅದಾಲತ್ ಮಧ್ಯಸ್ಥಿಕೆ ಮಾಹಿತಿ, ಜೀತಪದ್ಧತಿ ನಿವಾರಣೆ.. ಹೀಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇವರನ್ನು ಜಿಲ್ಲೆ, ತಾಲ್ಲೂಕು, ಹಳ್ಳಿಗಳಲ್ಲಿ ನೇಮಕ ಮಾಡಿಕೊಳ್ಳುವುದರಿಂದ ಜನರ ಕಾನೂನು ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಬಹುದು.  ಆಯ್ಕೆಯಾದ ಇವರಿಗೆ ತರಬೇತಿ ನೀಡಲು ಔಟ್ ಲಾಡ್ ಇಂಡಿಯಾ ಹಾಗೂ ನ್ಯಾಯ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದಿವೆ” ಎಂದರು.

ಕೆಎಸ್‌ಎಲ್‌ಎಸ್‌ಎ ಉಪಕಾರ್ಯದರ್ಶಿ ಎಂ ಶ್ರೀಧರ, ಸಾರ್ವಜನಿಕ ಸಂಪರ್ಕಾಧಿಕಾರಿ ಬಾಲಸುಬ್ರಮಣಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.