Justice Ritu Raj Awasthi
Justice Ritu Raj Awasthi 
ಸುದ್ದಿಗಳು

ನಾಲ್ಕು ವರ್ಷಗಳ ಬಳಿಕ ಕಾನೂನು ಆಯೋಗ ರಚನೆ: ಅಧ್ಯಕ್ಷರಾಗಿ ನ್ಯಾ. ರಿತು ರಾಜ್ ಅವಸ್ಥಿ ನೇಮಕ

Bar & Bench

ನಾಲ್ಕು ವರ್ಷಗಳ ಬಳಿಕ ಭಾರತೀಯ ಕಾನೂನು ಆಯೋಗ ರಚಿಸಿರುವ ಕೇಂದ್ರ ಸರ್ಕಾರ, ಕರ್ನಾಟಕ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿದೆ.

ಕೇರಳ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಟಿ.ಶಂಕರನ್, ಪ್ರೊ. ಆನಂದ್ ಪಲಿವಾಲ್, ಪ್ರೊ.ಡಿ.ಪಿ.ವರ್ಮಾ, ಪ್ರೊ. ರಾಕಾ ಆರ್ಯ ಹಾಗೂ  ಎಂ.ಕರುಣಾನಿಧಿ ಅವರನ್ನು ಕಾನೂನು ಆಯೋಗದ ಸದಸ್ಯರನ್ನಾಗಿ ನೇಮಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ವೇಳೆ ಹಿಜಾಬ್‌ ತೀರ್ಪು ನೀಡುವ ಮೂಲಕ ನ್ಯಾ. ಅವಸ್ಥಿ ಗಮನ ಸೆಳೆದಿದ್ದರು.

ಕಿರು ಪರಿಚಯ:

ಜುಲೈ 3, 1960 ರಂದು ಜನಿಸಿದ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು 1986ರಲ್ಲಿ ಲಖನೌ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ನಂತರ ಅವರು ಫೆಬ್ರವರಿ 1, 1987ರಂದು ವಕೀಲರಾಗಿ ಸೇವೆ ಆರಂಭಿಸಿದರು.

ಅಲಾಹಾಬಾದ್ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಸಿವಿಲ್‌, ಸೇವಾಕ್ಷೇತ್ರ ಹಾಗೂ ಶೈಕ್ಷಣಿಕ ದಾವೆಗಳಿಗೆ ಸಂಬಂಧಿಸಿದಂತೆ ಪ್ರಾಕ್ಟೀಸ್‌ ಮಾಡಿದರು. ನ್ಯಾಯಾಧೀಶರನ್ನಾಗಿ ನೇಮಕಗೊಳ್ಳುವುದಕ್ಕೂ ಮೊದಲು ಭಾರತದ ಸಹಾಯಕ ಸಾಲಿಸಿಟರ್‌ ಜನರಲ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ಅಲಾಹಾಬಾದ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಏಪ್ರಿಲ್ 13, 2009 ರಂದು ಪದೋನ್ನತಿ ಪಡೆದ ಅವರು  ಡಿಸೆಂಬರ್ 24, 2010 ರಂದು ಖಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರನ್ನು ಅಕ್ಟೋಬರ್ 11, 2021 ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಅವರು ಈ ವರ್ಷ ಜುಲೈ 2 ರಂದು ನಿವೃತ್ತರಾದರು.

ಆಗಸ್ಟ್ 2018 ರಲ್ಲಿ 21ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ನಿವೃತ್ತರಾದ ನ್ಯಾಯಮೂರ್ತಿ ಬಿ ಎಸ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ಕೊನೆಯ ಕಾನೂನು ಆಯೋಗ ಕಾರ್ಯನಿರ್ವಹಿಸಿತ್ತು.