Lawyers
Lawyers Image for representational purposes
ಸುದ್ದಿಗಳು

ವಕೀಲರು ಅಸಹಾಯಕರೇನಲ್ಲ, ತಮ್ಮ ಕುಂದುಕೊರತೆಗಳನ್ನು ಚರ್ಚಿಸಲು ಸಶಕ್ತರು: ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

Bar & Bench

ವಕೀಲರು ಅಸಹಾಯಕರೇನಲ್ಲ ಎಂದಿರುವ ಹೈಕೋರ್ಟ್ ಶುಕ್ರವಾರ ದೇಶದ ವಕೀಲರ ಪರವಾಗಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಜಾಗೊಳಿಸಿದೆ.

ಜುಲೈ 24ರಂದು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಬಿಡುಗಡೆ ಮಾಡಿರುವ ಹೇಳಿಕೆ ಕುರಿತು ಅರ್ಜಿದಾರರು ತಗಾದೆ ಎತ್ತಿದ್ದಾರೆ. 15 ದಿನಗೊಳಗೆ ಸುಪ್ರೀಂ ಕೋರ್ಟ್‌ನ ಇ-ಸಮಿತಿ ಮಾದರಿಯಲ್ಲಿ ತಮ್ಮ ಪರಿಷತ್ತುಗಳಲ್ಲಿ ನೋಂದಾಯಿತರಾದ ಎಲ್ಲಾ ವಕೀಲರ ವಿವರಗಳನ್ನು ಸಲ್ಲಿಸುವಂತೆ ದೇಶದ ಎಲ್ಲಾ ವಕೀಲರ ಪರಿಷತ್ತಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಬಿಸಿಐ ಸೂಚಿಸಿದೆ.

ನಿರ್ದಿಷ್ಟ ವಕೀಲರ ಪರಿಷತ್ತಿನಲ್ಲಿ ನೋಂದಾಯಿತರಾಗಿರುವ, ವಕೀಲಿಕೆಯಲ್ಲಿ ತೊಡಗಿರುವ ವಕೀಲರ ದತ್ತಾಂಶವನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ. ದತ್ತಾಂಶ ಸಂಗ್ರಹಿಸಿದ ಮೇಲೆ ಬಿಸಿಐ ಮಾದರಿಯಲ್ಲಿದೆಯೇ ಎಂಬುದನ್ನು ವಕೀಲರ ಪರಿಷತ್ತುಗಳು ಮರುಪರಿಶೀಲಿಸಬೇಕು ಎಂದು ವಿವರಿಸಲಾಗಿದೆ.

"ವಕೀಲ ಪರಿಷತ್ತಿನ ಸದಸ್ಯತ್ವ ಹೊಂದಿಲ್ಲದವರು ವಕೀಲಿಕೆ ಮಾಡದ ವಕೀಲರು ಎಂದು ಘೋಷಿಸುವುದಾಗಿ ಬಿಸಿಐ ಹೇಳಿದೆ. ಆದರೆ, ಬಿಸಿಐಗೆ ಆ ಅಧಿಕಾರವಿಲ್ಲ" ಎಂದು ಅರ್ಜಿದಾರರು ವಾದಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ಇ ಎಸ್ ಇಂದ್ರೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜುಲೈ 24ರ ಬಿಸಿಐ ಹೇಳಿಕೆಯಿಂದ ಸಮಸ್ಯೆಯಾದರೆ ಅವರು ನ್ಯಾಯಾಲಯವನ್ನು ಸಂಪರ್ಕಿಸಿ ತಮ್ಮ ಅಹವಾಲು ದಾಖಲಿಸಬಹುದು ಎಂದಿದೆ.

“ಬಾಧಿತರು ಯಾರಾದರೂ ಇದ್ದರೆ, ಕಾನೂನಿನ ಅನ್ವಯ ವಕೀಲರ ಪರಿಷತ್ತಿನಲ್ಲಿ ಸದಸ್ಯರಾಗಿರುವವರು, ತಮ್ಮ ಅಹವಾಲನ್ನು ಹೇಳಿಕೊಳ್ಳಲು ಸಶಕ್ತರಾಗಿರುವವರು ಅರ್ಜಿ ಸಲ್ಲಿಸಬಹುದು. ಬಾಧಿತರು ಅಸಹಾಯಕರೇನಲ್ಲ ಮತ್ತು ತಮ್ಮ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡುವುದನ್ನು ಯಾರೂ ತಡೆಯುವುದಿಲ್ಲ. ಆದ್ದರಿಂದ ಪಿಐಎಲ್ ವಿಚಾರಣೆಗೆ ನಿರಾಕರಿಸುತ್ತಿದ್ದು, ಅದನ್ನು ವಿಲೇವಾರಿ ಮಾಡಲಾಗಿದೆ.”
ಕರ್ನಾಟಕ ಹೈಕೋರ್ಟ್‌

“ಪಿಐಎಲ್ ಯಾಕೆ? ಬಾಧೆಗೆ ಒಳಗಾಗಿರುವವರು, ಬೀದಿ ಬದಿಯಲ್ಲಿರುವ ಬಡವರೇನಲ್ಲ. ಅಂಥವರು ಕಾನೂನಿನಲ್ಲಿ ಪರಿಹಾರ ಕೋರಬಹುದು. ಬಾಧಿತರು ವಕೀಲರು. ನ್ಯಾಯಾಲಯಕ್ಕೆ ಅವರೇಕೆ ಬರಬಾರದು? ಪಿಐಎಲ್ ಅನ್ನು ಏಕೆ ಒಪ್ಪಿಕೊಳ್ಳಬೇಕು?… ತಮ್ಮ ಪ್ರಕರಣಗಳನ್ನು ಹಿಡಿದು ನ್ಯಾಯಾಲಯದ ಮೆಟ್ಟಿಲೇರಲು ವಕೀಲರು ಸಮರ್ಥರು” ಎಂದು ನ್ಯಾಯಾಲಯ ಹೇಳಿತು.

ಪಿಐಎಲ್ ಸಲ್ಲಿಸುವುದಕ್ಕೂ ಮುನ್ನ ಬಿಸಿಐಗೆ ಯಾವುದೇ ತೆರೆನಾದ ಮನವಿ ಸಲ್ಲಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ನ್ಯಾಯಾಲಯ ಹೇಳಿತು.