KSLU Exams postponed
KSLU Exams postponed 
ದಾವೆ

ರಾಜ್ಯ ಕಾನೂನು ವಿವಿ ಮಧ್ಯಂತರ ಪರೀಕ್ಷೆ ಮುಂದೂಡಿಕೆ; ಆನ್‌ಲೈನ್‌ನಲ್ಲಿ ಅಂತಿಮ ವರ್ಷದ ಪರೀಕ್ಷೆ ನಡೆಸಲು ನಿರ್ಧಾರ: ಸಚಿವ

Bar & Bench

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ಮಧ್ಯಂತರ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.

ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ನಿರ್ದೇಶನದಂತೆ ಅಂತಿಮ ವರ್ಷದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಈ ಪರೀಕ್ಷೆಗಳನ್ನೂ ಅಕ್ಟೋಬರ್ ಗೆ ಮುಂದೂಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

“ಇನ್ನೂ ಮೂರು ತಿಂಗಳ ತರಗತಿಗಳು ಬಾಕಿ ಇವೆ. ಈಗ ಆನ್‌ಲೈನ್ ತರಗತಿ ನಡೆಸುವುದು ಕಷ್ಟಕರವಾಗಿರುವುದರಿಂದ ಅಂತಿಮ ವರ್ಷದ ಪರೀಕ್ಷೆಗಳನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆ. ಸೆಪ್ಟೆಂಬರ್ ವೇಳೆಗೆ ಆನ್‌ಲೈನ್ ಅಥವಾ ಸಾಮಾನ್ಯ ತರಗತಿಗಳನ್ನು ಆರಂಭಿಸಲಾಗುವುದು. ತರಗತಿಗಳು ಆರಂಭವಾದ ಒಂದು ಅಥವಾ ಒಂದೂವರೆ ತಿಂಗಳ ಬಳಿಕ ಗ್ರಂಥಾಲಯಗಳನ್ನು ತೆರೆಯಲಾಗುವುದು ಆನಂತರ ಈ ಪರೀಕ್ಷೆಗಳನ್ನು ನಡೆಸಲಾಗುವುದು” ಎಂದು ಮಾಧುಸ್ವಾಮಿ ವಿವರಿಸಿದರು.

ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಸೆಪ್ಟೆಂಬರ್ 21ರಿಂದ ಆರಂಭಿಸಲು ಹಾಗೂ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆಗಳನ್ನು ಅಕ್ಟೋಬರ್ 5ರಂದು ಆರಂಭಿಸಲು ಹಿಂದೆ ಉದ್ದೇಶಿಸಲಾಗಿತ್ತು. ಮಾಧ್ಯಮಗೋಷ್ಠಿಯಲ್ಲಿ ಕೆಎಸ್‌ಎಲ್‌ಯು ಪರೀಕ್ಷಾ ಅಧಿಸೂಚನೆಯನ್ನು ಹಿಂಪಡೆದ ಮಾಧುಸ್ವಾಮಿ ಅವರು ಭೌತಿಕ ತರಗತಿಗಳು ಆರಂಭವಾದ ಬಳಿಕ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದರು.

ಆನಂತರ, 45 ದಿನಗಳಿಂದ 2 ತಿಂಗಳ ವರೆಗೆ ಭೌತಿಕ ತರಗತಿಗಳನ್ನು ನಡೆಸಿ ತದನಂತರ ಮಧ್ಯಂತರ ಪರೀಕ್ಷೆಗಳನ್ನು ನಡೆಸಲಾಗುವುದು. ಪಠ್ಯೇತರ ಅಂಕಗಳನ್ನು ಆಧರಿಸಿ ತಾತ್ಕಾಲಿಕವಾಗಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುವುದು. ಆದರೆ, ಕಡ್ಡಾಯವಾಗಿ ಪರೀಕ್ಷೆ ನಡೆಸಲಾಗುವುದು ಎಂಬುದನ್ನು ಮಾಧುಸ್ವಾಮಿ ಪುನರುಚ್ಚರಿಸಿದರು. “ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದೇವೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು” ಎಂದು ಮಾಧುಸ್ವಾಮಿ ಹೇಳಿದರು.

ಅಕ್ಟೋಬರ್ 5ರಿಂದ ಮಧ್ಯಂತರ ಸೆಮಿಸ್ಟರ್ ಆರಂಭಿಸಲು ಉದ್ದೇಶಿಸಿರುವ ಕೆಎಸ್‌ಎಲ್‌ಯು ನಿರ್ಧಾರವನ್ನು ವಿದ್ಯಾರ್ಥಿಯೊಬ್ಬರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸದರಿ ನಿರ್ಧಾರವು ವಿದ್ಯಾರ್ಥಿಗಳ ಮೂಲಭೂತ ಹಕ್ಕಿಗೆ ಚ್ಯುತಿಯಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ವಿಭಾಗೀಯ ಪೀಠದಲ್ಲಿದ್ದ ನ್ಯಾ. ಬಿ ವಿ ನಾಗರತ್ನ ಹಾಗೂ ನ್ಯಾ. ರವಿ ಹೊಸಮನಿ ಅವರು ಅರ್ಜಿ ಊರ್ಜಿತಗೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಮನವಿ ಹಿಂಪಡೆದ ನಂತರ ಅರ್ಜಿಯನ್ನು ವಜಾಗೊಳಿಸಲಾಗಿತ್ತು.