Vineet Saran Indira Banerjee Arun Mishra MR Shah Aniruddha Bose
Vineet Saran Indira Banerjee Arun Mishra MR Shah Aniruddha Bose 
ದಾವೆ

ಒಳಮೀಸಲಾತಿ: ಉಪಜಾತಿಗಳಿಗೆ ಆದ್ಯತೆ ಮೀಸಲಾತಿಯನ್ನು ರಾಜ್ಯ ಶಾಸನ ಸಭೆಗಳು ಕಲ್ಪಿಸಬಹುದು ಎಂದ ಸುಪ್ರೀಂಕೋರ್ಟ್‌

Bar & Bench

ರಾಜ್ಯ ಶಾಸನಸಭೆಗಳು ವಿವಿಧ ವರ್ಗಗಳಡಿ ಬರುವ ಉಪಜಾತಿಗಳಿಗೆ ಆದ್ಯತೆಯ ಮೀಸಲಾತಿಯನ್ನು ಕಾನೂನಿನ ಮೂಲಕ ಕಲ್ಪಿಸಬಹುದು ಎನ್ನುವ ಮಹತ್ವದ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ‌ ನೀಡಿದೆ. ಆ ಮೂಲಕ ಇದೇ ವಿಚಾರವಾಗಿ ಈ ಹಿಂದೆ ಸುಪ್ರೀಂಕೋರ್ಟಿನ ಇನ್ನೊಂದು ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿಗಿಂತ ಭಿನ್ನವಾದ ನಿಲುವುನ್ನು ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಇಂದಿರಾ ಬ್ಯಾನರ್ಜಿ, ವಿನೀತ್ ಶರಣ್, ಎಂ ಆರ್ ಷಾ ಮತ್ತು ಅನಿರುದ್ಧ ಬೋಸ್ ಒಳಗೊಂಡ ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು ಹೊರಬಿದ್ದಿದೆ.

ಕಳೆದ ಒಂದೂವರೆ ದಶಕಗಳಿಂದ ಹಲವು ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳಿಗೆ ಆದ್ಯತೆ ಮೀಸಲಾತಿಯನ್ನು ಕಲ್ಪಿಸುವ ಈ ಒಳಮೀಸಲಾತಿ ವಿಚಾರವು ಕೆಂಡದ ಮೇಲಿನ ನಡಿಗೆಯಾಗಿ ಪರಿಣಮಿಸಿತ್ತು.

ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ:

  1. ನಿರ್ದಿಷ್ಟ ವರ್ಗಗಳಲ್ಲಿನ ಉಪಜಾತಿಗಳಿಗೆ ಆದ್ಯತೆಯ ಮೀಸಲಾತಿ ಕಲ್ಪಿಸಲು ರಾಜ್ಯ ಶಾಸನ ಸಭೆ ಕಾನೂನು ರೂಪಿಸಬಹುದು

  2. ಈ ಆದೇಶ ಹೊರಡಿಸುವ ಮೂಲಕ 2004ರಲ್ಲಿನ ಸಾಂವಿಧಾನಿಕ ಪೀಠದ ತೀರ್ಪಿಗೆ ವಿರುದ್ಧವಾದ ನಿಲುವು ತಳೆದಿರುವ ನ್ಯಾಯಪೀಠ

  3. ಇ ವಿ ಚನ್ನಯ್ಯ v. ಸ್ಟೇಟ್ ಆಫ್ ಆಂಧ್ರ ಪ್ರದೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2004ರಲ್ಲಿ ಪ್ರಕಟಿಸಿದ್ದ ತೀರ್ಪನ್ನು ಮರುಪರಿಶೀಲಿಸುವ ಪ್ರಶ್ನೆ ನ್ಯಾಯಪೀಠದ ಮುಂದಿತ್ತು.

  4. ರಾಜ್ಯ ಶಾಸನ ಸಭೆಯು ‌ಪರಿಶಿಷ್ಟ ಜಾತಿ (ಎಸ್‌ ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ ಟಿ) ಸಮುದಾಯಗಳಲ್ಲಿ ಮತ್ತೆ ಉಪ ವರ್ಗೀಕರಣ ಮಾಡುವುದು ಅಸಾಂವಿಧಾನಿಕ ಎಂದು ಈ ಹಿಂದೆ ಸಾಂವಿಧಾನಿಕ ಪೀಠವು ತೀರ್ಪು ನೀಡಿತ್ತು.

  5. ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ದೊರೆತಾದ ಮೇಲೆ ಸೌಲಭ್ಯದಿಂದ ವಂಚಿತವಾದ ಉಪಜಾತಿಗಳಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಉಪ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದ ನ್ಯಾ. ಅರುಣ್ ಮಿಶ್ರಾ

  6. ನ್ಯಾಯಮೂರ್ತಿಯವರ ಮುಂದೆ ಈಗ ಪ್ರಕರಣವನ್ನು ಒಯ್ದಿದ್ದು , ಈ ಪ್ರಶ್ನೆಯ ಸಂಬಂಧ ಅಂತಿಮ ತೀರ್ಮಾನಕ್ಕಾಗಿ ವಿಸ್ತೃತ ಪೀಠವನ್ನು ರಚಿಸಲು ಕೋರಲಾಗಿದೆ.

  7. ಪಂಜಾಬ್ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ (ಸೇವೆಯಲ್ಲಿ ಮೀಸಲಾತಿ) ಕಾಯ್ದೆ 2006ರ ಸೆಕ್ಷನ್ 4(5) ಅನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ಧಾರವನ್ನು ಹಲವು ಅರ್ಜಿಗಳ ಮೂಲಕ ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಿಲಾಗಿತ್ತು.

  8. ನೇರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಶೇ.50 ಕೋಟಾದಲ್ಲಿ ಬಾಲ್ಮಿಕಿ ಮತ್ತು ಮಜ್ಹಿಬಿ ಸಿಖ್ಖರಿಗೆ ನಿಬಂಧನೆ ರೂಪಿಸಿ ಅನುಕೂಲವಾಗುವಂತೆ ಆದ್ಯತೆ ಕಲ್ಪಿಸಲಾಗಿತ್ತು.

  9. ಇ ವಿ ಚನ್ನಯ್ಯ ಪ್ರಕರಣವನ್ನು ಮುಂದು ಮಾಡಿ ಹೈಕೋರ್ಟ್‌ ನಿಬಂಧನೆಯನ್ನು ವಜಾಗೊಳಿಸಿತ್ತು. ಸಂವಿಧಾನದ ಪರಿಚ್ಛೇದ 341 (1)ರ ಪ್ರಕಾರ ಪರಿಶಿಷ್ಟ ಜಾತಿ ಅಡಿ ಬರುವ ಎಲ್ಲಾ ಗುಂಪುಗಳು ಒಂದು ಏಕರೂಪ ಸಮೂಹವಾಗಿವೆ. ಈ ಸಮೂಹವನ್ನು ಉಪ ವಿಭಾಗಿಸುವುದು ಅಥವಾ ಉಪ ವರ್ಗೀಕರಿಸಲಾಗದು ಎಂದಿತ್ತು.

  10. ಪರಿಚ್ಛೇದ 338 ಮತ್ತು ಇಂದಿರಾ ಸಹಾನಿ ತೀರ್ಪಿನ ಹಿನ್ನೆಲೆಯಲ್ಲಿ 2014ರಲ್ಲಿ ಸುಪ್ರೀಂ ಕೋರ್ಟ್‌ ನ ತ್ರಿಸದಸ್ಯ ಪೀಠವು ಇ ವಿ ಚನ್ನಯ್ಯ ಪ್ರಕರಣದಲ್ಲಿ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು.

  11. ಪ್ರಶ್ನೆಗಳಿಗೆ ಕಾರಣವಾಗಿದ್ದ ಈ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವ, ಇಂತಹ ನಿಬಂಧನೆಗಳನ್ನು ಕಲ್ಪಿಸುವಲ್ಲಿ ರಾಜ್ಯ ಶಾಸನಸಭೆಗಳಿಗಿರುವ ಅಧಿಕಾರ ಮತ್ತು ಇ ವಿ ಚನ್ನಯ್ಯ ತೀರ್ಪಿನ ಮರು ಪರಿಶೀಲನೆ ಬಗ್ಗೆ ಎಲ್ಲರ ವಾದವನ್ನು ಸವಿಸ್ತಾರವಾಗಿ ಆಲಿಸಿದ ನ್ಯಾಯಪೀಠವು ಆಗಸ್ಟ್‌ 17ರಂದು ತೀರ್ಪನ್ನು ಕಾಯ್ದಿರಿಸಿತ್ತು.