CM Siddaramaiah, MUDA, Bengaluru City Civil Court 
ಸುದ್ದಿಗಳು

ಮುಡಾ ವಿವಾದ: ಸಿಎಂ ಸಿದ್ದು ಸಹಿತ ನಾಲ್ವರ ವಿರುದ್ದದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯಕ್ಕೆ 'ಬಿʼ ರಿಪೋರ್ಟ್‌ ಸಲ್ಲಿಕೆ

ಆರೋಪಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿ ಸಿದ್ಧಪಡಿಸಲಾಗಿರುವ ಒಟ್ಟು 27 ಸಂಪುಟಗಳ ವರದಿಯು ಎಲ್ಲ ದಸ್ತಾವೇಜುಗಳೂ ಸೇರಿದಂತೆ ಒಟ್ಟು 11 ಸಾವಿರ ಪುಟಗಳನ್ನು ಒಳಗೊಂಡಿದೆ.

Bar & Bench

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಅಕ್ರಮದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಪರಾಧ ಸಾಬೀತುಪಡಿಸುವ ಯಾವುದೇ ಅಂಶಗಳಿಲ್ಲ ಎಂಬ ಷರಾ ಬರೆದಿರುವ ಅಂತಿಮ ವರದಿಯ 'ಬಿʼ ರಿಪೋರ್ಟ್‌ ಅನ್ನು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮೈಸೂರಿನ ಸ್ನೇಹಮಯಿ ಕೃಷ್ಣ ನೀಡಿದ್ದ ಖಾಸಗಿ ದೂರನ್ನು ಆಧರಿಸಿ ತನಿಖೆ ನಡೆಸಿದ್ದ ಮೈಸೂರು ಲೋಕಾಯುಕ್ತ ಪೊಲೀಸರು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರಿಗೆ ಗುರುವಾರ 'ಬಿʼ ರಿಪೋರ್ಟ್‌ ಸಲ್ಲಿಸಿದರು.

ಅಂತೆಯೇ, ದೂರಿನಲ್ಲಿ ಆರೋಪಿಸಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ, ಭಾವಮೈದ ಮಲ್ಲಿಕಾರ್ಜುನ ಹಾಗೂ ವಿವಾದಿತ ಜಮೀನಿನ ಮೂಲ ಮಾಲೀಕ ಜೆ ದೇವರಾಜು ಅವರಿಗೆ ನಿರ್ದಿಷ್ಟ ಆರೋಪಗಳಿಂದ ಮುಕ್ತಿ ನೀಡಲಾಗಿದೆ.

ಆರೋಪಕ್ಕೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿ ಸಿದ್ಧಪಡಿಸಲಾಗಿರುವ ಒಟ್ಟು 27 ಸಂಪುಟಗಳ ವರದಿಯು ಎಲ್ಲ ದಸ್ತಾವೇಜುಗಳೂ ಸೇರಿದಂತೆ ಒಟ್ಟು 11 ಸಾವಿರ ಪುಟಗಳನ್ನು ಒಳಗೊಂಡಿದೆ. ದಾಖಲೆಯನ್ನು ತನಿಖಾಧಿಕಾರಿ ಲೋಕಾಯುಕ್ತ ಮೈಸೂರು ಪೊಲೀಸ್‌ ವರಿಷ್ಠಾಧಿಕಾರಿ ಟಿ ಜೆ ಉದೇಶ್‌ ಅವರು ನ್ಯಾಯಾಧೀಶರಿಗೆ ಸಲ್ಲಿಸಿದರು.