ಸುದ್ದಿಗಳು

ಪ್ರಕರಣ ನಿರ್ಧರಿಸಲು 11 ವರ್ಷಗಳ ಸುದೀರ್ಘ ವಿಳಂಬ: ಸಂವಿಧಾನ ದಿನದಂದು ಸಂತ್ರಸ್ತನ ಕುಟುಂಬದ ಕ್ಷಮೆ ಕೋರಿದ ಎಂಎಸಿಟಿ

Bar & Bench

ಅಪಘಾತವೊಂದರಲ್ಲಿ ಸಾವಿಗೀಡಾದ ವ್ಯಕ್ತಿಯ ಕುಟುಂಬವೊಂದು ಪರಿಹಾರ ಕೋರಿದ್ದ ಅರ್ಜಿಯನ್ನು ಇತ್ಯರ್ಥಪಡಿಸಲು ಸುದೀರ್ಘ 11 ವರ್ಷಗಳ ಕಾಲ ವಿಳಂಬ ಮಾಡಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಸಿಎಟಿ) ಕ್ಷಮೆ ಕೇಳಿದೆ. (ನಸೀರ್‌ ಬೇಗಂ ಹಾಗೂ ಇತರರು ಮತ್ತು ಮೊಹಮ್ಮದ್‌ ರಂಜಾನ್‌ದಾರ್‌ ಮತ್ತಿತರರ ನಡುವಣ ಪ್ರಕರಣ).

ವಿಚಾರಣೆ ವೇಳೆ ಸಂತ್ರಸ್ತೆಯ ಕುಟುಂಬಕ್ಕೆ ಶೇ 8ರಷ್ಟು ಬಡ್ಡಿಯೊಂದಿಗೆ ₹ 12 ಲಕ್ಷ ಪರಿಹಾರ ನೀಡುವಂತೆ ಕುಲ್ಗಾಮ್‌ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ತಾಹಿರ್ ಖುರ್ಷಿದ್ ರೈನಾ ಅಧ್ಯಕ್ಷತೆಯಲ್ಲಿ ನಡೆದ ನ್ಯಾಯಮಂಡಳಿ ಸೂಚಿಸಿದೆ. ಅಲ್ಲದೆ ಆದೇಶ ದಿನಾಂಕದಿಂದ ಎರಡು ತಿಂಗಳ ಒಳಗೆ ಪರಿಹಾರ ಧನ ವಿತರಿಸುವಂತೆ ವಿಮಾದಾರರಾದ ಬಜಾಜ್ ಅಲಿಯಾನ್ಸ್ ಲಿಮಿಟೆಡ್‌ಗೆ ಅದು ನಿರ್ದೇಶಿಸಿದೆ.

ಅರ್ಜಿಯನ್ನು ವಿಲೇವಾರಿ ಮಾಡಲು ಉಂಟಾದ ವಿಳಂಬವನ್ನು ಸಮರ್ಥಿಸುವ ಯಾವುದೇ ಪ್ರಯತ್ನ ಮಾಡದೆ ನ್ಯಾಯಮಂಡಳಿ ಸಂತ್ರಸ್ತನ ಕುಟುಂಬಸ್ಥರು ಎದುರಿಸಿದ ಸುದೀರ್ಘ ಸಂಕಟಕ್ಕಾಗಿ ನ್ಯಾಯಮಂಡಳಿ ಅವರ ಕ್ಷಮೆ ಯಾಚಿಸುತ್ತದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕುತೂಹಲಕರ ಅಂಶವೆಂದರೆ ತನ್ನ ಆದೇಶದಲ್ಲಿ ನ್ಯಾಯಮಂಡಳಿ “ತನ್ನ ಪ್ರಜೆಗಳಿಗೆ ತ್ವರಿತ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸುವ ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸ್ಮರಣಾರ್ಥ ಆಚರಿಸಲಾಗುವ ಸಂವಿಧಾನದ ದಿನದಂದೇ ಪೂರ್ಣ ಕಾಕತಾಳೀಯವಾಗಿ ಈ ಪ್ರಕರಣವನ್ನು ನಿರ್ಧರಿಸಲಾಗುತ್ತಿದೆ” ಎಂದು ಹೇಳಿದೆ.

ಕಾರ್ಮಿಕ ಬಷೀರ್‌ 2009ರಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಫೆಬ್ರವರಿ 2011ರಲ್ಲಿ ಮೋಟಾರು ವಾಹನ ಕಾಯಿದೆಯ ಸೆಕ್ಷನ್ 166 ರ ಅಡಿಯಲ್ಲಿ ಆತನ ಕುಟುಂಬ ಸದಸ್ಯರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.

ಕುಟುಂಬದ ಆಧಾರ ಸ್ತಂಭವಾಗಿರುವವರು ಮರಣವನ್ನಪ್ಪಿದಾಗ ಕುಟುಂಬ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಕುಸಿಯುತ್ತದೆ. ನಿರ್ಲಕ್ಷ್ಯದಿಂದಾದ ಸಾವಿನ ಕುರಿತ ಸರಳ ಪ್ರಕರಣವನ್ನು ಸೂಕ್ತ ಸಮಯದಲ್ಲಿ ಇತ್ಯರ್ಥಪಡಿಸಲಾಗಲಿಲ್ಲ. ಇದರಿಂದ ಮೃತರ ಕುಟುಂಬ 11 ವರ್ಷಗಳ ಕಾಲ ಯಾತನೆ ಅನುಭವಿಸುವಂತಾಯಿತು. ವಿಮಾ ಕಂಪೆನಿ ಕಾನೂನಿನ ಜಟಿಲತೆಯ ಜಾಲ ರೂಪಿಸಿ ಸಂತ್ರಸ್ತರು ಇನ್ನಷ್ಟು ಕಾಲ ಕಾಯುವಂತೆ ಮಾಡಲು ಹೊರಟಿದೆ. ಆದರೆ ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ನ್ಯಾಯಮಂಡಳಿ ಹೇಳಿತು.