ಸುದ್ದಿಗಳು

ಶಿಲಾಯುಗದಲ್ಲೇ ಉಳಿಯುವುದು ಅರ್ಜಿದಾರರಿಗೆ ಬಿಟ್ಟ ವಿಚಾರ: ಸೆನ್ಸಾರ್‌ ಅರ್ಜಿ ವಿಚಾರಣೆಗೆ ಮದ್ರಾಸ್‌ ಹೈಕೋರ್ಟ್‌ ನಕಾರ

Bar & Bench

ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯದ ನಿಯಂತ್ರಣ ಮತ್ತು ಪ್ರಸಾರದ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಮದ್ರಾಸ್‌ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ (ಎಸ್‌ ಉಮಾಮೇಶ್ವರನ್‌ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು).

ಸರ್ಕಾರದ ನೀತಿಗೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ಅರ್ಜಿದಾರರು ಎತ್ತಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಆರ್‌ ಹೇಮಲತಾ ಅವರಿದ್ದ ವಿಭಾಗೀಯ ಪೀಠ ಹೇಳಿದ್ದು, ಶಿಲಾಯುಗದಲ್ಲಿ ಉಳಿಯುವ ವಿಚಾರ ಮನವಿದಾರರಿಗೆ ಬಿಟ್ಟದ್ದು ಎಂದೂ ಹೇಳಿದೆ.

“ತಾಂತ್ರಿಕ ಲೋಕದಲ್ಲಿನ ಆವಿಷ್ಕಾರಗಳಿಗೆ ತೆರೆದುಕೊಳ್ಳದಂತೆ ತನ್ನ ಕುಟುಂಬ ಅಥವಾ ಮಕ್ಕಳನ್ನು ರಕ್ಷಿಸುವ ಸಲುವಾಗಿ ಶಿಲಾಯುಗದಲ್ಲಿ ಉಳಿಯುವ ವಿಚಾರವು ಅರ್ಜಿದಾರರಿಗೆ ಬಿಟ್ಟ ಸಂಗತಿಯಾಗಿದೆ. ನಿರ್ದಿಷ್ಟ ದೂರುಗಳಿಗೆ ಅವಕಾಶ ಕಲ್ಪಿಸಬಹುದಾಗಿದೆ. ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮ ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿಯಮಗಳು ಅಥವಾ ಮಾರ್ಗಸೂಚಿ ರೂಪಿಸಲಾಗದು. ಇದು ಇತರೆ ಸಂಸ್ಥೆಗಳಿಗೆ ಬಿಟ್ಟಿರುವ ವಿಚಾರವಾಗಿದ್ದು ಶಾಸನಸಭೆ ಅಥವಾ ಕಾರ್ಯಾಂಗದ ನೀತಿ ನಿರ್ಧಾರವನ್ನು ಆಧರಿಸಿರಲಿದೆ” ಎಂದು ನ್ಯಾಯಾಲಯ ಹೇಳಿದೆ.

ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರವನ್ನು ಅರ್ಜಿದಾರರು ಸಂಪರ್ಕಿಸಬಹುದಾಗಿದೆ. ಮನವಿದಾರರು ಬಯಸಿದಂತೆ ನ್ಯಾಯಾಲಯವು ಷರತ್ತುಗಳನ್ನು ವಿಧಿಸಲಾಗದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

“ಅರ್ಜಿದಾರರು ಪ್ರತಿನಿಧಿಸಲು ಬಯಸುವ ತತ್ವಗಳನ್ನು ಅವರು ಪ್ರಚುರಪಡಿಸಬಹುದಾಗಿದೆ. ಸಾಂವಿಧಾನಿಕವಾಗಿ ಖಾತರಿಪಡಿಸಲಾಗಿರುವ ಆಯ್ಕೆಯ ಹಕ್ಕುಗಳು ಇದಕ್ಕೆ ಅಡ್ಡಿಯಾಗುವುದಿಲ್ಲ. ಅರ್ಜಿದಾರರು ತಮ್ಮ ಕಲ್ಪನೆಗಳನ್ನು ಸಾಕಾರಗೊಳಿಸಿಕೊಳ್ಳಲು ಸಂಬಂಧಿತ ಶಾಸನಸಭೆ ಅಥವಾ ಕಾರ್ಯಾಂಗವನ್ನು ಎಡತಾಕಬಹುದು. ಆದರೆ, ಮನವಿದಾರರು ಬಯಸಿದಂತೆ ನ್ಯಾಯಾಲಯವು ಷರತ್ತುಗಳನ್ನು ವಿಧಿಸಲಾಗದು” ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.