Madras High Court
Madras High Court 
ಸುದ್ದಿಗಳು

ಪಳನಿ ದೇವಸ್ಥಾನ ವಿವಾದ: ಶನಿವಾರವೂ ಕಲಾಪ ನಡೆಸಿದ ಮದ್ರಾಸ್ ಹೈಕೋರ್ಟ್

Bar & Bench

ತಮಿಳುನಾಡಿನ ಪಳನಿ ದಂಡಾಯುಧಪಾಣಿಸ್ವಾಮಿ ದೇವಸ್ಥಾನದಲ್ಲಿ ನಿಗದಿತ ಧಾರ್ಮಿಕ ವಿಧಿ ವಿಧಾನಗಳಿಗೆೆ ಸರ್ಕಾರದ ಅಧಿಕಾರಿಗಳು ತಡೆ ಒಡ್ಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಮತ್ತು ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ವಿರುದ್ಧ ಸಲ್ಲಿಸಲಾಗಿದ್ದ  ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಶನಿವಾರ ನಡೆಸಿತು.

ಕಕ್ಷಿದಾರರು ಒಮ್ಮತಕ್ಕೆ ಬಂದ ನಂತರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಮತ್ತು ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರಿದ್ದ ಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು. ನಿಗದಿತ ಆಚರಣೆಗಳು ನಡೆಯಲಿದ್ದು ವಿಶೇಷವಾಗಿ 48 ದಿನಗಳ ಕಾಲ ದೇವರ ವಿಗ್ರಹದ ಹಣೆ ಭಾಗಕ್ಕೆ ಶ್ರೀಗಂಧ ಮತ್ತಿತರ ಪವಿತ್ರ ಮಿಶ್ರಣ ಲೇಪಿಸುವ ಆಚರಣೆಗೆ ಅನುವು ಮಾಡಿಕೊಡುವುದಾಗಿ ಇಲಾಖೆ ನ್ಯಾಯಾಲಯಕ್ಕೆ ಭರವಸೆ ನೀಡಿತು.

ʼಮಂಡಲಾಭಿಷೇಕ ಅಥವಾ ಶ್ರೀಗಂಧ ಹಚ್ಚುವ ಆಚರಣೆಯನ್ನು ಕೇವಲ ಮೂರು ದಿನಗಳಿಗೆ ಸೀಮಿತಗೊಳಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ ವಕೀಲ ಟಿ ಆರ್ ರಮೇಶ್ ಹೈಕೋರ್ಟ್‌ ತುರ್ತು ವಿಚಾರಣೆ ನಡೆಸುವಂತೆ ಕೋರಿದರು.

ಹೀಗೆ ಧಾರ್ಮಿಕ ಆಚರಣೆ ಮೊಟಕುಗೊಳಿಸುವುದು ಆಗಮಗಳು ಅಥವಾ ದೇವಾಲಯದ ನಿಗದಿತ ಆಚರಣೆಗಳಿಗೆ ವಿರುದ್ಧವಾಗಿದೆ ಎಂದು ರಮೇಶ್‌ ವಾದಿಸಿದರು.

ಆದರೆ ತಮಗೆ ಆಗಮಗಳ ವಿರುದ್ಧ ಹೋಗುವ ಉದ್ದೇಶ ಇಲ್ಲ ಎಂದು ಸರ್ಕಾರ ಮತ್ತು ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದವು. ಆದರೆ ಫೆಬ್ರವರಿ 5 ರಂದು ನಡೆಯಲಿರುವ ಪಳನಿ ಉತ್ಸವಕ್ಕೆ ಬರುವವರ ಸಂಖ್ಯೆ ಹೆಚ್ಚುವುದರಿಂದ ಆಚರಣೆಯ ಪ್ರಮಾಣವನ್ನಷ್ಟೇ ಪ್ರಶ್ನಿಸಿರುವುದಾಗಿ ವಿವರಿಸಿದವು.

ಪ್ರಸ್ತುತ ಪ್ರಕರಣದಲ್ಲಿ ಒಮ್ಮತ ಮೂಡಿದೆ ಎಂಬ ಇಲಾಖೆಯ ಹೇಳಿಕೆಯನ್ನು ಹೈಕೋರ್ಟ್‌ ತನ್ನ ಆದೇಶದಲ್ಲಿ ದಾಖಲಿಸಿಕೊಂಡಿತು.