Senthil Balaji, Madras High Court
Senthil Balaji, Madras High Court  
ಸುದ್ದಿಗಳು

ಸಚಿವ ಸೆಂಥಿಲ್‌ ಬಿಡುಗಡೆ ವಿರುದ್ಧ ಮದ್ರಾಸ್ ಹೈಕೋರ್ಟ್‌ನ ಮೂರನೇ ನ್ಯಾಯಮೂರ್ತಿ ತೀರ್ಪು; ಸಿಜೆಯಿಂದ ಅಂತಿಮ ಆದೇಶ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯದಿಂದ (ಇ ಡಿ) ಬಂಧಿತರಾಗಿದ್ದ ಡಿಎಂಕೆ ಸಚಿವ ವಿ ಸೆಂಥಿಲ್ ಬಾಲಾಜಿ ಬಿಡುಗಡೆ ವಿರುದ್ಧ ಮದ್ರಾಸ್ ಹೈಕೋರ್ಟ್ ಇಂದು ತೀರ್ಪು ನೀಡಿದೆ.

ಈ ಹಿಂದೆ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಪ್ರಕರಣದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಚಾರಣೆಗೆ ನೇಮಕಗೊಂಡಿದ್ದ ನ್ಯಾಯಮೂರ್ತಿ ಸಿ ವಿ ಕಾರ್ತಿಕೇಯನ್ ಅವರು ಇಂದು ಮಧ್ಯಾಹ್ನ ಈ ತೀರ್ಪು ನೀಡಿದರು.

ಸೆಂಥಿಲ್‌ ಅವರನ್ನು ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯ ಅರ್ಹವಾಗಿದೆ ಎಂದು ನ್ಯಾ. ಕಾರ್ತಿಕೇಯನ್‌ ಅವರ ಪೀಠ ಅಭಿಪ್ರಾಯಪಟ್ಟಿದ್ದು ಆ ಮೂಲಕ ಈ ಹಿಂದೆ ನ್ಯಾ. ಭರತ್‌ ಚಕ್ರವರ್ತಿ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಸಹಮತ ಸೂಚಿಸಿದೆ.

"ಒಮ್ಮೆ ಬಂಧನ ಕಾನೂನುಬದ್ಧವಾಗಿದ್ದು ರಿಮ್ಯಾಂಡ್‌ ಸಕ್ರಮವಾಗಿದ್ದರೆ, ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ನಿರ್ವಹಿಸಬಹುದಾದರೂ ಅನುಮತಿಸಲಾಗುವುದಿಲ್ಲ ಎಂಬ ಡಿಬಿಸಿಜೆ (ಭರತ್‌ ಚಕ್ರವರ್ತಿ) ಅವರ ನಿಲುವನ್ನು ನಾನು ಒಪ್ಪಿಕೊಳ್ಳಬೇಕು" ಎಂದು ನ್ಯಾಯಮೂರ್ತಿ ಕಾರ್ತಿಕೇಯನ್ ಹೇಳಿದ್ದಾರೆ.

ಆದೇಶದಲ್ಲಿ "ತನಿಖೆ ನಡೆಸಲು (ಆರೋಪಿಯ) ಕಸ್ಟಡಿ ಅಗತ್ಯವಿದ್ದಲ್ಲಿ ಕಸ್ಟಡಿಯನ್ನು ಹಕ್ಕಿನ ವಿಷಯವಾಗಿ ನೀಡಬೇಕು... ಆದರೆ ಯಾವುದೇ ಆರೋಪಿಗೆ ವಿಚಾರಣೆಯನ್ನು ನಿರಾಶೆಗೊಳಿಸುವ ಹಕ್ಕಿಲ್ಲ. ತಮ್ಮ ಅನಾರೋಗ್ಯಕ್ಕೂ  ಮೊದಲು, ಆರೋಪಿಯು ಬಂಧನದ ಕಾರಣಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿ ನಂತರ ತನಗೆ ಬಂಧನದ ಕಾರಣಗಳನ್ನು ವಿವರಿಸಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದನ್ನು ಈ ನ್ಯಾಯಾಲಯ ಒಪ್ಪಲು ಸಾಧ್ಯವಿಲ್ಲ. ಇದನ್ನು ಸುಳ್ಳು ಎಂದೇ ಘೋಷಿಸಬೇಕಾಗುತ್ತದೆ… ಬಂಧನಕ್ಕೆ ಆಸ್ಪದವಿದ್ದಾಗ ನಂತರ ಕಸ್ಟಡಿಗೆ ನೀಡುವುದಕ್ಕೂ ಅನುಮತಿ ಇರುತ್ತದೆ” ಎಂದು ನ್ಯಾಯಾಲಯ ನುಡಿದಿದೆ.  

ಇದೇ ವೇಳೆ ತಮ್ಮ ಅಭಿಪ್ರಾಯವನ್ನು ಪರಿಗಣಿಸಿದ ನಂತರ ಮುಖ್ಯ ನ್ಯಾಯಮೂರ್ತಿಗಳು ಅಂತಿಮ ಆದೇಶ ಹೊರಡಿಸಲು ಅನುವಾಗುವಂತೆ ಪ್ರಕರಣವನ್ನು ಅವರ ಪೀಠದ ಮುಂದಿರಿಸುವಂತೆ ನ್ಯಾ. ಕಾರ್ತಿಕೇಯನ್‌ ಹೈಕೋರ್ಟ್‌ ರಿಜಿಸ್ಟ್ರಿಗೆ ಸೂಚಿಸಿದ್ದಾರೆ.