ಸುದ್ದಿಗಳು

ಮಹಾರಾಷ್ಟ್ರ ಬಿಕ್ಕಟ್ಟು: ಹೀಗಿತ್ತು ವಕೀಲರ ಪರ- ವಿರೋಧದ ವಾದ ಸರಣಿ

Bar & Bench

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ನಡೆದ ವಾದ ಸರಣಿ ಹಲವು ವಿಶೇಷಗಳಿಂದ ಕೂಡಿತ್ತು. 15 ಬಂಡಾಯ ಶಾಸಕರ ಪರವಾಗಿ ನೀರಜ್‌ ಕಿಶನ್‌ ಕೌಲ್‌ ವಾದ ಮಂಡಿಸಿದರೆ ಅತ್ತ ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಅಜಯ್‌ ಚೌಧರಿ, ಉಪ ಸ್ಪೀಕರ್‌, ಮಹಾರಾಷ್ಟ್ರ ಸರ್ಕಾರದ ಪರವಾಗಿ ಕ್ರಮವಾಗಿ ಹಿರಿಯ ನ್ಯಾಯವಾದಿಗಳಾದ ಅಭಿಷೇಕ್‌ ಮನು ಸಿಂಘ್ವಿ, ರಾಜೀವ್‌ ಧವನ್‌, ಹಾಗೂ ದೇವದತ್‌ ಕಾಮತ್‌ ವಾದ ಮಂಡಿಸಿದರು.

ಉಪಸಭಾಪತಿ ವಿರುದ್ಧದ ಅವಿಶ್ವಾಸ ಗೊತ್ತುವಳಿ ಇತ್ಯರ್ಥವಾಗುವವರೆಗೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಕುರಿತು ಉಪಸಭಾಪತಿ ತೀರ್ಮಾನಿಸುವಂತಿಲ್ಲ. ಎಂದು ನಬಮ್‌ ರೆಬಿಯಾ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ಉಲ್ಲೇಖಿಸಿ ವಕೀಲ ಕೌಲ್‌ ವಾದ ಮಂಡಿಸಿದರು. ಹೈಕೋರ್ಟ್‌ ಸಂಪರ್ಕಿಸುವ ಬದಲು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೇಕೆ ಎಂದು ನ್ಯಾಯಾಲಯ ಪ್ರಶ್ನಿಸಿದಾಗ ಕೌಲ್‌ ಅವರು “26ನೇ ವಿಧಿಯ ಅಸ್ತಿತ್ವ ವಿವೇಚನಾಧಿಕಾರಕ್ಕೆ ಸಂಬಂಧಿಸಿದ್ದು. ಆದರೆ ಮೇಲ್ಮನವಿ ಪುರಸ್ಕರಿಸಲು ಸುಪ್ರೀಂ ಕೋರ್ಟ್‌ಗೆ ಯಾವುದೇ ನಿರ್ಬಂಧ ಇಲ್ಲ. ಅಲ್ಪಸಂಖ್ಯೆಗೆ ಕುಸಿದ ಶಾಸಕರ ಬಣ ನಿರ್ಧಾರ ತೆಗೆದುಕೊಳ್ಳುತ್ತಿದೆ. ನಮ್ಮ ಸದನಗಳಿಗೆ ಬೆಂಕಿ ಹಚ್ಚಲಾಗುತ್ತಿದೆ” ಎಂದರು.

ಶಾಸಕಾಂಗ ಪಕ್ಷದ ಅನೇಕರು ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. 19 ಶಾಸಕರಿರುವ ಅಲ್ಪಸಂಖ್ಯಾತ ಸದಸ್ಯರ ಬಣ ಮೂಕ ಸಭೆಯಲ್ಲಿ ಅಜಯ್ ಚೌಧರಿ ಅವರನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥರನ್ನಾಗಿ ಮಾಡಿದೆ. ಡೆಪ್ಯೂಟಿ ಸ್ಪೀಕರ್‌ಗೆ ತಿಳಿಸಿ ನಂತರ ಚೌಧರಿ ಅವರ ಹೆಸರನ್ನು ಘೋಷಿಸಲಾಗಿದೆ ಎಂದರು. ಜೊತೆಗೆ ತನ್ನ ವಿರುದ್ಧದ ಅವಿಶ್ವಾಸ ಗೊತ್ತುವಳಿ ನಿರ್ಣಯವಾಗುವವರೆಗೆ ಅನರ್ಹತೆ ಅರ್ಜಿಯ ಬಗ್ಗೆ ಉಪಸಭಾಪತಿ ತೀರ್ಮಾನಿಸಲು ಅನುಮತಿಯಿಲ್ಲ ಎಂದು ಸುಪ್ರೀಂ ಕೋರ್ಟ್ (ಈಗಾಗಲೇ) ಹೇಳಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ಇದನ್ನು ನೀವೇಕೆ ಉಪಸಭಾಪತಿಯವರ ಮುಂದೆ ಪ್ರಸ್ತಾಪಿಸಬಾರದು ಎಂದು ಪೀಠ ಪ್ರಶ್ನಿಸಿತು.

ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಅಜಯ್ ಚೌಧರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, ಕಿಹೊಟೊ ಹೊಲೊಹಾನ್ ಮತ್ತು ಜಚಿಲ್ಹು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನಲ್ಲಿ ಸ್ಪೀಕರ್ ಯಾವುದೇ ತೀರ್ಪು ನೀಡುವವರೆಗೆ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದರು. ನಬಮ್ ರಾಬಿಯಾ ಪ್ರಕರಣ ಅನ್ವಯಿಸಿದರೆ ಉಂಟಾಗುವ ಪರಿಣಾಮಗಳನ್ನು ನ್ಯಾಯಾಲಯಕ್ಕೆ ವಿವರಿಸಿದರು.

ಒಂದು ಹಂತದಲ್ಲಿ ನ್ಯಾ. ಸೂರ್ಯ ಕಾಂತ್‌ ಅವರು, "ಇಲ್ಲಿ ಪ್ರಕರಣವು ಸೀಮಿತವಾಗಿದೆ. ಸಂವಿಧಾನದ 179ನೇ ವಿಧಿಯನ್ವಯ ಉಪಸಭಾಧ್ಯಕ್ಷರನ್ನು ಪದಚ್ಯುತಗೊಳಿಸಲು 34 ಶಾಸಕರು ನೋಟಿಸ್‌ ನೀಡಿರುವಾಗ ಹತ್ತನೇ ಶೆಡ್ಯೂಲ್‌ ಅನ್ವಯ ಡೆಪ್ಯೂಟಿ ಸ್ಪೀಕರ್‌ ಅವರಿಗೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವಿರುತ್ತದೆಯೇ" ಎಂದು ಪ್ರಶ್ನೆಯನ್ನು ನಿರ್ದಿಷ್ಟಗೊಳಿಸಿದರು. ಮುಂದೆ ಉಪಸ್ಪೀಕರ್‌ ಪರ ವಾದ ಮಂಡಿಸುವ ವೇಳೆ ಹಿರಿಯ ವಕೀಲ ರಾಜೀವ್‌ ಧವನ್‌ ಅವರು, "ನೋಂದಾಯಿತ ಇಮೇಲ್ ಐಡಿಗೆ ಈ ನೋಟಿಸ್‌ ಕಳುಹಿಸಲಾಗಿಲ್ಲ ಮತ್ತು ಇದು ಸರಿಯಾದ ಇಮೇಲ್ ಐಡಿಗಳಿಂದ ಬಂದಿಲ್ಲ. ಇದು ಗಂಭೀರ ವಿಷಯವಾಗಿದೆ. ಇವುಗಳ (ಇಮೇಲ್‌ಗಳ) ಅಧಿಕೃತತೆಯನ್ನು ಪರಿಶೀಲಿಸಲು ಸಾಧ್ಯವಾಗದೆ, ಅವುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಡೆಪ್ಯೂಟಿ ಉತ್ತರಿಸಿದ್ದಾರೆ” ಎಂದರು. "ಹಾಗಾದರೆ ಪ್ರಧಾನ ಕಾರ್ಯದರ್ಶಿಯವರು ಇದನ್ನೆಲ್ಲ ದಾಖಲೆಯಲ್ಲಿ ಸಲ್ಲಿಸಬೇಕು. ನೈಜತೆಯನ್ನು ಪರಿಗಣಿಸಲು ಏನೆಲ್ಲಾ ಮಾಡಲಾಗಿದೆ ಎಂಬುದನ್ನು ತಿಳಿಸಬೇಕು" ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.

ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್‌ ಕಾಮತ್ ಅವರು ಅರ್ಜಿಗಳ ವಿಚಾರಣಾರ್ಹತೆಯನ್ನು ಪ್ರಶ್ನಿಸಿದರು. "ಎರಡು ಬಣಗಳಿವೆ ಎಂದು ಸ್ಪೀಕರ್‌ ಹೇಳುತ್ತಾರೆ. ನೋಟಿಸ್ ಶಿವಸೇನೆ ಲೆಟರ್ ಹೆಡ್‌ನಲ್ಲಿದೆ. ಶಿವಸೇನೆ ಲೆಟರ್ ಹೆಡ್ ಆಧರಿಸಿ ನಮ್ಮ ಪಕ್ಷದ ನಾಯಕನ ನೇಮಕಾತಿಗೆ ಸ್ಪೀಕರ್ ಸಮ್ಮತಿಸಿದ್ದಾರೆ. ಈಗ ಈ ಶಾಸಕರು (ಬಂಡಾಯಗಾರರು) ತಮ್ಮ ನಾಯಕನನ್ನು ಆರಿಸಬೇಕೆಂದು ಬಯಸಿ ಶಿವಸೇನೆಯದೆಂದು ಹೇಳಲಾದ ಲೆಟರ್‌ಹೆಡ್‌ನಲ್ಲಿ ತಿಳಿಸಿದ್ದಾರೆ” ಎಂದು ಕಾಮತ್‌ ಬಂಡಾಯ ಬಣದ ಲೆಟರ್‌ಹೆಡ್‌ನ ಅಧಿಕೃತತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.