A1
A1
ಸುದ್ದಿಗಳು

ಭರತ್ ಗೊಗಾವಲೆ ನೂತನ ಮುಖ್ಯ ಸಚೇತಕ: ಸುಪ್ರೀಂ ಮೊರೆ ಹೋದ ಉದ್ಧವ್ ಠಾಕ್ರೆ ಬಣ

Bar & Bench

ನೂತನವಾಗಿ ಆಯ್ಕೆಯಾಗಿರುವ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಶಿವಸೇನಾ ಬಂಡಾಯ ನಾಯಕ ಏಕನಾಥ್‌ ಶಿಂಧೆ ಬಣಕ್ಕೆ ಸೇರಿದ ಭರತ್‌ ಗೊಗಾವಲೆ ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿರುವುದನ್ನು ಉದ್ಧವ್‌ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠದೆದುರು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣ ಪ್ರಸ್ತಾಪಿಸಿದರು. ಆದರೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಇತರೆ ಅರ್ಜಿಗಳೊಂದಿಗೆ ಜುಲೈ 11ರಂದೇ ಈ ಮನವಿಯ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿತು.

"ಸ್ಪೀಕರ್‌ಗೆ ಮುಖ್ಯ ಸಚೇತಕರನ್ನು ನೇಮಿಸುವ ಅಧಿಕಾರವಿಲ್ಲ. ಇದರಿಂದ ನ್ಯಾಯಾಲಯ ವಿಚಾರಣೆಯ ಯಥಾಸ್ಥಿತಿ ಬದಲಾಗುತ್ತದೆ. ನಿನ್ನೆ ಮಧ್ಯರಾತ್ರಿಯ ವೇಳೆ ಸ್ಪೀಕರ್ ಅವರು ಸಚೇತಕರನ್ನು ಆಯ್ಕೆ ಮಾಡಿದ್ದಾರೆ” ಎಂದು ಸಿಂಘ್ವಿ ಹೇಳಿದರು. ಪ್ರಕರಣದ ಉಳಿದ ದಾಖಲೆಗಳು ಇಲ್ಲದೇ ಇರುವುದರಿಂದ ಜುಲೈ 11ರಂದು ಇತರೆ ಅರ್ಜಿಗಳೊಟ್ಟಿಗೆ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಪೀಠ ತಿಳಿಸಿತು. ಶಿಂಧೆ ಪಾಳಯಕ್ಕೆ ಸೇರಿರುವ ಶಾಸಕರ ಅನರ್ಹತೆಗೆ ಸಂಬಂಧಿಸಿದ ಅರ್ಜಿಯನ್ನು ಜುಲೈ 11ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

ಮಹಾರಾಷ್ಟ್ರ ವಿಧಾನಸಭೆಗೆ ನೂತನವಾಗಿ ಚುನಾಯಿತರಾದ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಭಾನುವಾರ ಗೊಗಾವಲೆ ಅವರನ್ನು ಶಿವಸೇನೆಯ ಹೊಸ ಮುಖ್ಯ ಸಚೇತಕರಾಗಿ ಮತ್ತು ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆ ಮಾಡಿದ್ದರು.

ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತೆಗೆದು ಹಾಕಿದ್ದ ಉದ್ಧವ್‌ ಠಾಕ್ರೆ ಪಾಳೆಯ ಅಜಯ್‌ ಚೌಧರಿ ಅವರನ್ನು ಆ ಸ್ಥಾನಕ್ಕೆ ನೇಮಿಸಿತ್ತು. ಸುನೀಲ್‌ ಪ್ರಭು ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿತ್ತು. ಮಹಾರಾಷ್ಟ್ರ ಶಾಸಕಾಂಗ ಸಚಿವಾಲಯ ಈ ಎರಡೂ ನೇಮಕಾತಿಗಳನ್ನು ರದ್ದುಗೊಳಿಸಿದ್ದರಿಂದ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.