Justice Shalini Joshi, Justice Gita Mittal, Justice Asha Menon
Justice Shalini Joshi, Justice Gita Mittal, Justice Asha Menon 
ಸುದ್ದಿಗಳು

ಮಣಿಪುರ ಹಿಂಸಾಚಾರ: ತನಿಖೆ ಮತ್ತು ಪರಿಹಾರಕ್ಕಾಗಿ ಮೂವರು ನಿವೃತ್ತ ಮಹಿಳಾ ನ್ಯಾಯಮೂರ್ತಿಗಳ ಸಮಿತಿ ರಚಿಸಿದ ಸುಪ್ರೀಂ

Bar & Bench

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ರಾಜ್ಯ ಪೊಲೀಸರು ವಿವಿಧ ಪ್ರಕರಗಣಗಳಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ತನಿಖೆಯ ಪರಿಶೀಲನೆಗಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ನೇತೃತ್ವದ ತ್ರಿಸದಸ್ಯ ಪೀಠವನ್ನು ಸುಪ್ರೀಂ ಕೋರ್ಟ್‌ ಸೋಮವಾರ ರಚಿಸಿದೆ.

ನಿವೃತ್ತ ನ್ಯಾಯಮೂರ್ತಿಗಳಾದ ಶಾಲಿನಿ ಜೋಶಿ ಮತ್ತು ಆಶಾ ಮೆನನ್ ಸಮಿತಿಯ ಇತರ ಸದಸ್ಯರು. ಮಣಿಪುರದ ಹಿಂಸಾಚಾರದ ಕುರಿತಾದ ತನಿಖೆಯ ಪರಿಶೀಲನೆ, ಪರಿಹಾರ ಕ್ರಮ, ಪುನರ್ವಸತಿ ಮುಂತಾದ ವಿಷಯಗಳ ಕುರಿತಾದ ವಿಶಾಲ ಕಾರ್ಯನಿರ್ವಹಣಾ ವ್ಯಾಪ್ತಿಯನ್ನು ಸಮಿತಿ ಹೊಂದಿರಲಿದೆ.

ಸಮಿತಿಯನ್ನು ಸಿಬಿಐಗೆ ಪರ್ಯಾಯವಾಗಿ ರಚಿಸಿಲ್ಲ, ಬದಲಿಗೆ ಕಾನೂನಾತ್ಮಕ ಆಡಳಿತದಲ್ಲಿ ವಿಶ್ವಾಸವನ್ನು ಉಳಿಸುವ ಸಲುವಾಗಿ ನಮ್ಮ ಅಧಿಕಾರವ್ಯಾಪ್ತಿಯಲ್ಲಿ ಏನೆಲ್ಲ ಇದೆಯೋ ಅದೆಲ್ಲವನ್ನೂ ಮಾಡುವ ವಿಸ್ತಾರ ಉದ್ದೇಶದಿಂದ ರಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ  (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ. ಸಿಬಿಐ ಮೇಲೆ ಯಾವುದೇ ಆಗ್ರಹ ನ್ಯಾಯಾಲಯದ ಕಡೆಯಿಂದ ಇರುವುದಿಲ್ಲ ಎಂದು ಕೂಡ ಪೀಠ ಇದೇ ವೇಳೆ ತಿಳಿಸಿದೆ.

ಆದರೆ ಪ್ರಕರಣಗಳ ವಿಚಾರಣೆಯನ್ನು ಮಣಿಪುರ ಹೊರತಾದ ರಾಜ್ಯಕ್ಕೆ ವರ್ಗಾಯಿಸಲು ನ್ಯಾಯಾಲಯ ನಿರಾಕರಿಸಿತು.

ಅಲ್ಲದೆ ತನಿಖಾ ಸಂಸ್ಥೆಗಳು ನಡೆಸುವ ತನಿಖೆಯನ್ನು ಮಹಾರಾಷ್ಟ್ರದ ನಿವೃತ್ತ ಡಿಜಿಪಿ ಮತ್ತು ಎನ್ಐಎ ಅಧಿಕಾರಿ ದತ್ತಾತ್ರೇಯ ಪಡಸಾಲಗೀಕರ್ ಅವರು ವಿಶೇಷವಾಗಿ ಪರಿಶೀಲಿಸಲಿದ್ದಾರೆ. ಅವರು ನ್ಯಾಯಾಲಯಕ್ಕೆ ತನಿಖೆಯ ಕುರಿತಾದ ಮತ್ತೊಂದು ಹಂತದ ಮೇಲ್ವಿಚಾರಣೆಯ ಮುಖ್ಯಸ್ಥರಾಗಿರುತ್ತಾರೆ ಎಂದು ಪೀಠ ತಿಳಿಸಿದೆ. ನ್ಯಾಯಾಂಗ ಸಮಿತಿ ಮತ್ತು ದತ್ತಾತ್ರೇಯ ಪಡಸಾಲಗೀಕರ್ ಇಬ್ಬರೂ ಪ್ರತ್ಯೇಕ ವರದಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ. ಅಲ್ಲದೆ ಸಿಬಿಐ ಮತ್ತು ರಾಜ್ಯ ಸರ್ಕಾರ ನಡೆಸುವ ತನಿಖೆಗೆ ಸಂಬಂಧಿಸಿದಂತೆ ಪೀಠ ಪ್ರತ್ಯೇಕ ಸೂಚನೆಗಳನ್ನು ನೀಡಿದೆ.   

ಸಾರ್ವಜನಿಕವಾಗಿ ಬೆತ್ತಲೆ ಮೆರವಣಿಗೆಗೆ ಈಡಾಗಿದ್ದ ಕುಕಿ-ಜೋಮಿ ಸಮುದಾಯದ ಇಬ್ಬರು ಮಹಿಳೆಯರು ಸೇರಿದಂತೆ ಮಣಿಪುರ ಹಿಂಸಾಚಾರ ಪ್ರಕರಣ ಕುರಿತು ಸಲ್ಲಿಸಲಾದ ಅರ್ಜಿಗಳಿಗೆ ಕುರಿತ ಪ್ರಕರಣಗಳ ವಿಚಾರಣೆ ನ್ಯಾಯಾಲಯಲ್ಲಿ ನಡೆಯಿತು.  

ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ವಕೀಲೆ ವೃಂದಾ ಗ್ರೋವರ್‌, ಹಿರಿಯ ನ್ಯಾಯವಾದಿ ಕೊಲಿನ್‌ ಗೊನ್ಸಾಲ್ವೇಸ್, ವಕೀಲರಾದ ಪ್ರಶಾಂತ್‌ ಭೂಷಣ್‌, ಕೊಲಿನ್‌ ಗೊನ್ಸಾಲ್ವೆಸ್‌,  ವಿಶಾಲ್‌ ತಿವಾರಿ, ನಿಜಾಂ ಪಾಷಾ ವಿಚಾರಣೆ ವೇಳೆ ವಾದ ಮಂಡಿಸಿದರು.