Karnataka Hc and manish maheshwari
Karnataka Hc and manish maheshwari 
ಸುದ್ದಿಗಳು

ಉತ್ತರಪ್ರದೇಶ ಪೊಲೀಸರೇ ನನ್ನ ಬಳಿ ಬರಲಿ: ಕರ್ನಾಟಕ ಹೈಕೋರ್ಟ್‌ನಲ್ಲಿ ಟ್ವಿಟರ್ ಇಂಡಿಯಾ ಉದ್ಯೋಗಿ ಮನೀಶ್ ಪರ ವಾದ

Bar & Bench

ಗಾಜಿಯಾಬಾದ್‌ ಹಲ್ಲೆ ವೀಡಿಯೊ ಟ್ವೀಟ್‌ ಆಗಲು ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆಗೆ ಅಡ್ಡಿಯುಂಟು ಮಾಡಲು ತಮ್ಮ ಕಕ್ಷೀದಾರರು ಇಚ್ಛಿಸುವುದಿಲ್ಲ ಎಂದು ಟ್ವಿಟರ್‌ ಇಂಡಿಯಾ ಉದ್ಯೋಗಿ ಪರ ಹಿರಿಯ ನ್ಯಾಯವಾದಿ ಸಿ ವಿ ನಾಗೇಶ್‌ ವಾದ ಮಂಡಿಸಿದರು.

ಮೊಹಮ್ಮದ್‌ ಬೆಟ್ಟದ ಬಳಿಗೆ ತೆರಳಲು ಸಾಧ್ಯವಾಗದಿದ್ದರೆ ಬೆಟ್ಟವೇ ಮೊಹಮ್ಮದನ ಬಳಿಗೆ ಬರಬೇಕು ಎಂಬ ನಾಣ್ನುಡಿಯಂತೆ ಉತ್ತರಪ್ರದೇಶ ಪೊಲೀಸರೇ ನನ್ನ (ಮನೀಶ್‌) ಬಳಿಗೆ ಬರಲಿ. ತನಿಖೆಗೆ ಅಡ್ಡಿ ಉಂಟು ಮಾಡಲು ನನಗೆ ಯಾವುದೇ ಆಸಕ್ತಿ ಇಲ್ಲ” ಎಂದು ಅವರು ಮನೀಶ್‌ ಪರವಾಗಿ ತಿಳಿಸಿದರು.

ಗಾಜಿಯಾಬಾದ್‌ ದಾಳಿ ವಿಡಿಯೋಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಮನೀಶ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ರಾಜ್ಯದಲ್ಲಿ ವ್ಯಾಜ್ಯ ಕಾರಣ (Cause of Action) ಇರುವುದರಿಂದ ಪ್ರಕರಣವನ್ನು ಆಲಿಸುವ ಅಧಿಕಾರ ಕರ್ನಾಟಕ ಹೈಕೋರ್ಟ್‌ಗೆ ಇದೆ ಎಂದು ನಾಗೇಶ್‌ ಈ ವೇಳೆ ವಾದಿಸಿದರು.

"ನಾನು (ಮನೀಶ್‌) ಬೆಂಗಳೂರಿನ ನಿವಾಸಿಯಾಗಿದ್ದೇನೆ, ನನ್ನ ಕಚೇರಿ ಬೆಂಗಳೂರಿನಲ್ಲಿದೆ, ಬೆಂಗಳೂರು ಮೂಲದ ನನ್ನ ಅಧಿಕೃತ ಇಮೇಲ್ ಐಡಿಗೆ ನೋಟಿಸ್ ನೀಡಲಾಗಿದೆ. ಈ ರಾಜ್ಯದಲ್ಲಿ ವ್ಯಾಜ್ಯ ಕಾರಣದ ಒಂದು ಪಾಲು ಸೃಷ್ಟಿಯಾಗಿದೆ" ಎಂದು ಅವರು ತಿಳಿಸಿದರು.

ಸಿಆರ್‌ಪಿಸಿಯ ಸೆಕ್ಷನ್ 160ರ ಅಡಿಯಲ್ಲಿ [ಸಾಕ್ಷಿಗಳ ಹಾಜರಾತಿಗೆ ಸೂಚಿಸುವ ಪೊಲೀಸ್ ಅಧಿಕಾರಿಯ ಅಧಿಕಾರ], ಪೊಲೀಸ್ ಠಾಣೆಯ ಪ್ರಾದೇಶಿಕ ಸ್ಥಳದ ವ್ಯಾಪ್ತಿಗೊಳಪಟ್ಟ ವ್ಯಕ್ತಿಗೆ ಈ ಕಾನೂನುಬಾಧ್ಯತೆಯು ಅನ್ವಯವಾಗುತ್ತದೆ. ಕಾನೂನಿನಡಿ ನೀಡಿರುವ ರಕ್ಷಣೆ ಇದಾಗಿದೆ. ಇಲ್ಲದಿದ್ದರೆ ಪೊಲೀಸರು ಜನರಿಗೆ ಕಿರುಕುಳ ನೀಡಬಹುದು ಎಂದು ಅವರು ಹೇಳಿದರು.

ಆಗ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿ ನೋಟಿಸ್‌ ನೀಡಿದ ಬಳಿಕ ಸೆಕ್ಷನ್‌ 41ಎ ಪ್ರಕಾರ ನೋಟಿಸ್‌ ನೀಡಲು ಪೊಲೀಸರಿಗೆ ಅಡ್ಡಿಯುಂಟಾಗುತ್ತದೆಯೇ ಎಂದು ಪ್ರಶ್ನಿಸಿತು.

ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಉತ್ತರಿಸಿದ ನಾಗೇಶ್‌ “ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿ ನೋಟಿಸ್‌ ನೀಡದೆ ಸೆಕ್ಷನ್‌ 41 ಎ ಅಡಿ ನೋಟಿಸ್‌ ನೀಡಿದ್ದರೆ ಆಗ ಸನ್ನಿವೇಶ ಭಿನ್ನವಾಗಿರುತ್ತದೆ” ಎಂದರು.

“ಸೆಕ್ಷನ್‌ 41 ಎ ಅಡಿ ಯಾರಿಗೆ ನೋಟಿಸ್‌ ನೀಡಬೇಕು ಎಂಬ ವರ್ಗೀಕರಣಕ್ಕೆ ನಾನು (ಮನೀಶ್‌) ಒಳಪಡದೇ ಇದ್ದರೆ ಆಗ ನೋಟಿಸ್‌ ನೀಡಲು ಕಾನೂನು ಮಂಜೂರಾತಿ (sanction of law) ಇರುವುದಿಲ್ಲ... ಆಗ (ಸಂವಿಧಾನದ) 226 ಎ ಅಡಿ ಹೈಕೋರ್ಟ್‌ ನ್ಯಾಯವ್ಯಾಪ್ತಿಯನ್ನು ಆಹ್ವಾನಿಸಲು ನನಗೆ ಅರ್ಹತೆ ಇದೆ" ಎಂದರು.

ಶುಕ್ರವಾರ (ಜುಲೈ 9) ಪ್ರಕರಣದ ವಿಚಾರಣೆ ಮುಂದುವರೆಯಲಿದೆ.