Justice Vinay Joshi and Nagpur Bench
Justice Vinay Joshi and Nagpur Bench  
ಸುದ್ದಿಗಳು

ಎಫ್ಐಆರ್ ಮಾಹಿತಿ, ಬಂಧನ, ಕೋರ್ಟ್‌ ಪ್ರಕರಣಗಳ ಕುರಿತು ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಇದೆ: ಬಾಂಬೆ ಹೈಕೋರ್ಟ್

Bar & Bench

ಎಫ್‌ಐಆರ್‌ ದಾಖಲಾಗಿರುವ ಬಗ್ಗೆ, ವ್ಯಕ್ತಿಗಳ ಬಂಧನ, ನ್ಯಾಯಾಲಯಗಳಲ್ಲಿ ದಾಖಾಲಾಗುವ ಪ್ರಕರಣಗಳು ಹಾಗೂ ಮಾನನಷ್ಟ ಪ್ರಕರಣಗಳ ಕುರಿತಾಗಿ ವರದಿ ಮಾಡುವ ಹಕ್ಕು ಮಾಧ್ಯಮಗಳಿಗೆ ಇದೆ ಎಂದು ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಇತ್ತೀಚೆಗೆ ತೀರ್ಪು ನೀಡಿದೆ [ವಿಜಯ್ ದರ್ದಾ ಮತ್ತಿತರರು ಹಾಗೂ. ರವೀಂದ್ರ ಗುಪ್ತ ನಡುವಣ ಪ್ರಕರಣ].

ದಿನಪತ್ರಿಕೆಯ ಮಾಲೀಕರೊಬ್ಬರ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವ ವೇಳೆ ನ್ಯಾ. ವಿನಯ್ ಜೋಶಿ ಅವರು ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾಧ್ಯಮ ಒದಗಿಸುವ ಮಾಹಿತಿಯ ಪ್ರಾಮುಖ್ಯತೆ ಕುರಿತು ಒತ್ತಿ ಹೇಳಿದರು.

“ದಿನಪತ್ರಿಕೆಗಳಲ್ಲಿ ಅಪರಾಧಗಳ ದಾಖಲಾದ ಬಗ್ಗೆ, ವ್ಯಕ್ತಿಗಳ ಬಂಧನ ಇತ್ಯಾದಿ ಸುದ್ದಿಗಳಿಗೆ ಸ್ವಲ್ಪವಾದರೂ ಸ್ಥಳ ಮೀಸಲಿಟ್ಟಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸಾರ್ವಜನಿಕರು ತಿಳಿಯುವ ಹಕ್ಕುಹೊಂದಿರುವ ಸುದ್ದಿ, ವಿಷಯಗಳನ್ನು ಇದು ಹೊಂದಿರುತ್ತದೆ," ಎಂದು ನ್ಯಾಯಾಲಯ ಹೇಳಿದೆ.

“ನೈಜ ಮತ್ತು ವಿಶ್ವಾಸಾರ್ಹ ವರದಿ ಬಗ್ಗೆ ಮಾನನಷ್ಟ ಕ್ರಮ ಕೈಗೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನಾರೋಗ್ಯಕರ” ಎಂದು ಕೂಡ ಅದು ಇದೇ ಸಂದರ್ಭದಲ್ಲಿ ಹೇಳಿತು. ಮಾನನಷ್ಟ ಪ್ರಕರಣವೊಂದರಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿರುವುದನ್ನು ಪ್ರಶ್ನಿಸಿ ಲೋಕಮತ ಮೀಡಿಯಾ ಪ್ರೈ ಲಿಮಿಟೆಡ್‌ನ ಅಧ್ಯಕ್ಷ ವಿಜಯ್‌ ದಾದ್ರಾ ಮತ್ತು ಮುಖ್ಯ ಸಂಪಾದಕ ರಾಜೇಂದ್ರ ದಾದ್ರ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.