ಸುದ್ದಿಗಳು

ಕಲ್ಲಿದ್ದಲು ಗಣಿ (ರಾಷ್ಟ್ರೀಕರಣ) ಕಾಯಿದೆ ಪ್ರಕಾರ 'ಗಣಿ' ಕೇಂದ್ರದ ವ್ಯಾಪ್ತಿಗೆ: ಮಾಲೀಕತ್ವ ಅಪ್ರಸ್ತುತ ಎಂದ ಸುಪ್ರೀಂ

Bar & Bench

ಕಲ್ಲಿದ್ದಲು ಗಣಿಗಳ (ರಾಷ್ಟ್ರೀಕರಣ) ಕಾಯಿದೆ- 1973ರ ಸೆಕ್ಷನ್ 2 (ಎಚ್) ಅಡಿಯಲ್ಲಿ 'ಗಣಿ' ಎಂಬ ಪದದ ವ್ಯಾಪ್ತಿಗೆ ಬರುವ ಯಾವುದೇ ಜಮೀನು ಮಾಲೀಕತ್ವವನ್ನು ಲೆಕ್ಕಿಸದೇ ಸಂಪೂರ್ಣ ಕೇಂದ್ರ ಸರ್ಕಾರದ ಅಧೀನಕ್ಕೆ ಸೇರುತ್ತದೆ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿಳಿಸಿದೆ [ಭಾರತ್‌ ಕೊಕಿಂಗ್‌ ಕೋಲ್‌ ಲಿಮಿಟೆಡ್‌ ಮತ್ತು ಮಹೇಂದ್ರ ಪಾಲ್‌ ಭಾಟಿಯಾ ಇನ್ನಿತರರ ನಡುವಣ ಪ್ರಕರಣ].

ಕಾಯಿದೆಯ ಸೆಕ್ಷನ್ 2(ಎಚ್) ಅಡಿಯಲ್ಲಿ, ನಿರ್ವಹಣಾ ಮಾರಾಟ ಅಥವಾ ಸಂಪರ್ಕ ಕಚೇರಿಗಳ ಸ್ಥಳ ಅಥವಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿವಾಸಕ್ಕಾಗಿಯೇ ಬಳಸುವ ಭೂಮಿ ಮತ್ತು ಕಟ್ಟಡಗಳನ್ನು ಕೂಡ ʼಗಣಿʼ ಒಳಗೊಂಡಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಕಲ್ಲಿದ್ದಲು ಗಣಿಗಳ (ರಾಷ್ಟ್ರೀಕರಣ) ಕಾಯಿದೆ 1973 ರ ಅಡಿಯಲ್ಲಿ ಜಿಲ್ಲಾ ನ್ಯಾಯಾಲಯವು ಹೊರಡಿಸಿದ ತೆರವು ಆದೇಶಗಳನ್ನು ಜಾರ್ಖಂಡ್ ಹೈಕೋರ್ಟ್‌ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆದ ವೇಳೆ ನ್ಯಾಯಾಲಯವು ಮೇಲಿನಂತೆ ಖಚಿತಪಡಿಸಿತು.