Mohammed Zubair and Allahabad High Court 
ಸುದ್ದಿಗಳು

ಪತ್ರಕರ್ತ ಜುಬೈರ್ ವಿರುದ್ಧ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ: ಅಲಾಹಾಬಾದ್ ಹೈಕೋರ್ಟ್‌ಗೆ ಮಾಹಿತಿ

ಪ್ರವಾದಿ ಮುಹಮ್ಮದ್ ಅವರನ್ನು ಟೀಕಿಸಿದ್ದ ಯತಿ ನರಸಿಂಹಾನಂದ ವಿರುದ್ಧ ಮಾಡಿದ್ದ ಟ್ಟೀಟ್‌ಗೆ ಸಂಬಂಧಿಸಿದಂತೆ ಪತ್ರಕರ್ತ ಜುಬೈರ್ ಅವರ ವಿರುದ್ಧ ಗಾಜಿಯಾಬಾದ್ ಪೊಲೀಸರು ಎಪ್ಐಆರ್ ದಾಖಲಿಸಿದ್ದರು.

Bar & Bench

ದ್ವೇಷಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಬೆಂಬಲಿಗರು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮತ್ತು  ಪತ್ರಕರ್ತ ಮೊಹಮ್ಮದ್ ಜುಬೈರ್‌ ಅವರ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಬಿಎನ್‌ಎಸ್‌ ಸೆಕ್ಷನ್‌ 152ರ ಅಡಿ ದೇಶದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತಂದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ಅಲಾಹಾಬಾದ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಿಂದ ರಕ್ಷಣೆ ಕೋರಿ ಜುಬೈರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜುಬೈರ್‌ ಅವರ ವಿರುದ್ಧ ಯಾವ ಸೆಕ್ಷನ್‌ ಅಡಿ ಆರೋಪ ಮಾಡಲಾಗಿದೆ ಎಂದು ಅಫಿಡವಿಟ್‌ ಸಲ್ಲಿಸುವಂತೆ ತನಿಖಾಧಿಕಾರಿಗೆ ನವೆಂಬರ್ 25ರಂದು ಹೈಕೋರ್ಟ್‌ ಸೂಚಿಸಿತ್ತು.

ಬುಧವಾರ ತನಿಖಾಧಿಕಾರಿ ಈ ಸಂಬಂಧ ಅಫಿಡವಿಟ್‌ ಸಲ್ಲಿಸಿದ್ದು ಎಫ್‌ಐಆರ್‌ನಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಮತ್ತು ಬಿಎನ್‌ಎಸ್‌ನ ಸೆಕ್ಷನ್ 152 ಹೀಗೆ ಎರಡು ಹೊಸ ಸೆಕ್ಷನ್‌ಗಳನ್ನು ಸೇರಿಸಲಾಗಿದೆ ಎಂದು ವಿವರಿಸಿದ್ದಾರೆ. ಹೊಸ ಸೆಕ್ಷನ್‌ಗಳನ್ನು ಸೇರಿಸಲು ಅನುಮತಿ ನೀಡಿರುವ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ನಿಗದಿಪಡಿಸಿದೆ.

ಯಾರಾದರೂ ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದೂ, ಪದಗಳಿಂದ, ಮಾತಿನ ಮೂಲಕ ಅಥವಾ ಬರವಣಿಗೆಯಲ್ಲಿ, ಇಲ್ಲವೇ ಚಿಹ್ನೆಗಳ ಮೂಲಕ, ಅಥವಾ ಕಣ್ಣಿಗೆ ಕಾಣುವಂತೆ, ಇಲ್ಲವೇ ಎಲೆಕ್ಟ್ರಾನಿಕ್ ಸಂವಹನದಿಂದ ಅಥವಾ ಆರ್ಥಿಕತೆ ಬಳಸಿ ಇಲ್ಲವೇ ಇತರ ರೀತಿಯಲ್ಲಿ, ಪ್ರಚೋದಿಸುವ ಅಥವಾ ಪ್ರಚೋದಿಸಲು ಯತ್ನಿಸುವ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಇಲ್ಲವೇ ವಿಧ್ವಂಸಕ ಚಟುವಟಿಕೆಗಳನ್ನು , ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳಿಗೆ ಕುಮ್ಮಕ್ಕು ನೀಡುವ ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ; ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೂ ವಿಸ್ತರಿಸಬಹುದಾದ ಜೈಲು ಶಿಕ್ಷೆ   ಮತ್ತು ದಂಡ ವಿಧಿಸಬಹುದಾಗಿದೆ ಎಂದು ಬಿಎನ್‌ಎಸ್‌ ಸೆಕ್ಷನ್‌ 152 ಹೇಳುತ್ತದೆ.

ಅನೇಕ ಸಂದರ್ಭಗಳಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪ ಹೊತ್ತಿರುವ ನರಸಿಂಹಾನಂದ ಅವರು ಸೆಪ್ಟೆಂಬರ್ 29 ರಂದು ಸಾರ್ವಜನಿಕ ಭಾಷಣವೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಭಾಷಣವನ್ನುಅವಹೇಳನಕರ ಮತ್ತು ದ್ವೇಷಪೂರಿತ ಎಂದು ಜುಬೈರ್ ತಮ್ಮ ಎಕ್ಸ್‌ ಖಾತೆಯಲ್ಲಿ ಜರೆದಿದ್ದರು.

ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ನರಸಿಂಹಾನಂದ್ ವಿರುದ್ಧ ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡಿದ ಮಾತ್ತು ಧಾರ್ಮಿಕ ಭಾವನೆಗೆ ಘಾಸಿ ತಂದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಪೊಲೀಸರು ನರಸಿಂಹಾನಂದರನ್ನು ಬಂಧಿಸದಿದ್ದರೂ ಅವರನ್ನು ಪೊಲೀಸರು ಕರೆದೊಯ್ದಿದ್ದರು ಎಂದು ಅವರ ಅನುಯಾಯಿಗಳು ತಿಳಿಸಿದ್ದರು. ನಂತರ ದಾಸ್ನಾದೇವಿ ದೇವಸ್ಥಾನದಲ್ಲಿ ಪ್ರತಿಭಟನೆ ನಡೆದಿತ್ತು.

ದಾಸ್ನಾ ದೇವಿ ಮಂಡಿಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಜುಬೈರ್, ಅರ್ಷದ್ ಮದನಿ ಮತ್ತು ಅಸಾದುದ್ದೀನ್ ಓವೈಸಿ ಅವರನ್ನು ದೂಷಿಸಿ ಯತಿ ನರಸಿಂಹಾನಂದ್ ಅವರ ಆಪ್ತ ಸಹಾಯಕ ಡಾ. ಉದಿತಾ ತ್ಯಾಗಿ ಅವರು ನಂತರ ದೂರು ದಾಖಲಿಸಿದರು.

ಜುಬೈರ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 (ಧರ್ಮಾಧಾರಿತ ದ್ವೇಷಕ್ಕೆ ಕುಮ್ಮಕ್ಕು), 228 (ಸುಳ್ಳು ಪುರಾವೆ ಸೃಷ್ಟಿ) , 299 (ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆ ಕೆರಳಿಸುವುದು) , 356(3) (ಮಾನಹಾನಿ) , ಮತ್ತು 351(2) (ಕ್ರಿಮಿನಲ್‌ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.