ಸುದ್ದಿಗಳು

ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ನ್ಯಾಯಾಲಯ ಕಲಾಪ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ

Ramesh DK

“ಕೋವಿಡ್ ನಿರ್ಬಂಧದ ಬಳಿಕ ಇದೇ ಮೊದಲ ಬಾರಿಗೆ ಮುಂದಿನ ಸೋಮವಾರದಿಂದ ರಾಜ್ಯದ ಎಲ್ಲ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ” ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ಹೇಳಿದರು.

ಶನಿವಾರ ಮಂಗಳೂರು ವಕೀಲರ ಸಂಘದೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು "ರಾಜ್ಯದ ನ್ಯಾಯಾಲಯಗಳಲ್ಲಿ ಕಕ್ಷಿದಾರರ ಅಗತ್ಯವಿದ್ದರೆ ಮಾತ್ರ ಅವರ ಹಾಜರಾತಿಗೆ ಅವಕಾಶ ಕಲ್ಪಿಸಿ" ಎಂದು ವಕೀಲರಿಗೆ ಕರೆ ನೀಡಿದರು.

“ವೃತ್ತಿಬದುಕಿನಲ್ಲಿ ನಾನು ಕೂಡ ಕೆಳ ಹಂತದ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಿದ್ದೆ. ಅದೊಂದು ಉತ್ತಮ ಅನುಭವ. ಕೆಳ ಹಂತದ ನ್ಯಾಯಾಲಯಗಳಲ್ಲಿ ವಕೀಲ ವೃತ್ತಿ ನಿರ್ವಹಿಸುವುದು ಒಂದು ಸವಾಲು. ಹೈಕೋರ್ಟ್‌ಗಳಲ್ಲಿ ಅದು ಅಷ್ಟೇನೂ ದೊಡ್ಡ ಸಂಗತಿಯಲ್ಲ. ಸಿವಿಲ್ ಪ್ರಕರಣಗಳನ್ನು ಅಧೀನ ನ್ಯಾಯಾಲಯದಲ್ಲಿ ನಡೆಸುವುದು ವಕೀಲರ ಬಹು ದೊಡ್ಡ ಸವಾಲಿನ ವಿಷಯವಾಗಿದೆ. ಈ ಸವಾಲನ್ನು ನಿಭಾಯಿಸಲು ವಕೀಲರು ಮುಂದಾಗಬೇಕು. ಈ ಮೂಲಕ ನ್ಯಾಯದಾನ ವ್ಯವಸ್ಥೆ ಬಲಪಡಿಸಬೇಕು ಎಂದು ಅವರು ಹೇಳಿದರು.

ಮಂಗಳೂರಿನ ವಕೀಲರ ಸಂಘ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಇದೊಂದು ಉತ್ತಮ ಕಾರ್ಯವಾಗಿದ್ದು, ಇದಕ್ಕೆ ಸರ್ವ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ನ್ಯಾಯಾಲಯ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಕೀಲರ ಸಂಘದ ಕಟ್ಟಡದ ನಿವೇಶನ ಪರಿಶೀಲಿಸಿದ ನ್ಯಾಯಮೂರ್ತಿಗಳು, ಪಾಳು ಬಿದ್ದಿರುವ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕಟ್ಟಡದ ಬಗ್ಗೆ ವರದಿ ನೀಡುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಲಯಗಳ ಆಡಳಿತಾತ್ಮಕ ನ್ಯಾಯಮೂರ್ತಿ ದಿನೇಶ್ ಕುಮಾರ್ ಭಾಗವಹಿಸಿದ್ದರು. ಸಭೆಯಲ್ಲಿ ನ್ಯಾಯಾಲಯಗಳ ಕುಂದುಕೊರತೆಗಳು ಮತ್ತು ವಕೀಲರ ಅಹವಾಲುಗಳನ್ನು ಅವರು ಸ್ವೀಕರಿಸಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್ ನರಸಿಂಹ ಹೆಗ್ಡೆ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್ ವಿ ರಾಘವೇಂದ್ರ ಸ್ವಾಗತಿಸಿ ಖಜಾಂಚಿ ಅರುಣಾ ಬಿ ಪಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.