ಸುದ್ದಿಗಳು

ಆರ್ಯನ್ ಹಾಗೂ 7 ಮಂದಿಯನ್ನು ಎನ್‌ಸಿಬಿ ವಶಕ್ಕೆ ಒಪ್ಪಿಸಲು ನಕಾರ: ನ್ಯಾಯಾಂಗ ಬಂಧನ ವಿಧಿಸಿದ ಮುಂಬೈ ನ್ಯಾಯಾಲಯ

Bar & Bench

ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌, ಹಾಗೂ ಏಳು ಆರೋಪಿಗಳನ್ನು ಮತ್ತೆ ಎನ್‌ಸಿಬಿ ತನಿಖೆಗೆ ಒಪ್ಪಿಸಲು ಮುಂಬೈನ ನ್ಯಾಯಾಲಯವೊಂದು ನಿರಾಕರಿಸಿದೆ.

ತನಿಖೆಗಾಗಿ ಎನ್‌ಸಿಬಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದರಿಂದ ಕಸ್ಟಡಿ ವಿಚಾರಣೆ ಅಗತ್ಯವಿಲ್ಲ. ಹೀಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮುಂಬೈ ನ್ಯಾಯಾಲಯ ತಿಳಿಸಿದೆ. ಇದೇ ವೇಳೆ ಆರ್ಯನ್‌ ಮತ್ತು ಅರ್ಬಾಜ್‌ಗೆ ಮಾದಕ ವಸ್ತು ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಂಧಿಸಲಾಗಿರುವ ಮತ್ತೊಬ್ಬ ಆರೋಪಿ ಅಚಿತ್‌ ಕುಮಾರ್‌ನನ್ನು ಅಕ್ಟೋಬರ್‌ 9ರವರೆಗೆ ಎನ್‌ಸಿಬಿ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.

ಮಾಹಿತಿ ಸಂಗ್ರಹಿಸಬೇಕಿರುವ ಹಿನ್ನೆಲೆಯಲ್ಲಿ ಆರ್ಯನ್‌ ಖಾನ್‌ ಮತ್ತು ಅರ್ಬಾಜ್‌ ಮರ್ಚೆಂಟ್‌ ಅವರನ್ನು ಅ. 11ರವರೆಗೆ ಎನ್‌ಸಿಬಿ ವಶಕ್ಕೆ ಒಪ್ಪಿಸಬೇಕು ಎಂದು ಎನ್‌ಸಿಬಿ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ತಿಳಿಸಿದರು. ತನಿಖೆಯಲ್ಲಿ ಪ್ರಗತಿ ಸಾಧಿಸಿದ್ದು ಸಂಘಟಕರು, ಮಾದಕವಸ್ತು ಸರಬರಾಜುದಾರರ ತನಿಖೆ ನಡೆಸಿದ್ದೇವೆ. ಗುಂಪೊಂದು ಇದನ್ನು ಮಾಡುತ್ತಿತ್ತು ಎಂದು ನಿರೂಪಿಸಲು ಆರೋಪಿಗಳನ್ನು ವಶಕ್ಕೆ ಪಡೆಯುವ ಅಗತ್ಯವಿದೆ ಎಂದು ಅವರು ಹೇಳಿದರು.

ಆದರೆ ಈ ವಾದಸರಣಿಗೆ ಆಕ್ಷೇಪ ವ್ಯಕ್ತಪಡಿಸಿದ ಆರ್ಯನ್‌ ಪರ ನ್ಯಾಯವಾದಿ ಸತೀಶ್‌ ಮಾನೆಶಿಂಧೆ ಆರ್ಯನ್‌ ವಿರುದ್ಧ ಯಾವುದೇ ಆರೋಪವಿಲ್ಲ. ಮಾದಕ ವಸ್ತು ಪೂರೈಕೆಯ ಬಗ್ಗೆ ಆರೋಪ ಇದ್ದರೂ ಸಹ ಆರ್ಯನ್‌ ಮತ್ತೊಬ್ಬ ಆರೋಪಿಯಿಂದ ಏನನ್ನೂ ಖರೀದಿಸಿಲ್ಲ ಎಂದರು. ಇದೇ ವೇಳೆ
ಆರೋಪಿಗಳಾದ ಮೂನ್‌ಮೂನ್‌ ಧಮೇಚಾ, ವಿಕ್ರಾಂತ್‌, ಮೋಹಕ್‌ ಜಸ್ವಾಲ್‌, ಗೋಮಿತ್‌ ಛೋಪ್ರಾ, ಇಶ್ಮೀತ್‌ ಹಾಗೂ ನೂಪುರ್‌ ಪರವಾಗಿ ವಿವಿಧ ನ್ಯಾಯವಾದಿಗಳು ವಾದ ಮಂಡಿಸಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ “ಆರೋಪಿಗಳ ನಡುವಿನ ಸಂಬಂಧವನ್ನು ಸ್ಥಾಪಿಸಲಾಗಿಲ್ಲ ಎಂದು ರಿಮ್ಯಾಂಡ್‌ ಅರ್ಜಿ ಹೇಳುತ್ತದೆ. ಯಾವುದೇ ಪ್ರಗತಿ ಕಂಡುಬಂದಿಲ್ಲ. ಯಾವುದೇ ರಿಕವರಿ ಸಾಧ್ಯವಾಗಿಲ್ಲ. ಆಪಾದಿಸಲಾದುದದನ್ನು ವಶಪಡಿಸಿಕೊಳ್ಳಲಾಗಿದೆ. ಇಂತಹ ಸನ್ನಿವೇಶದಲ್ಲಿ ಹೆಚ್ಚಿನ ಬಂಧನ ಸೂಕ್ತವಲ್ಲ. ಆದರೆ ನ್ಯಾಯಾಂಗ ಬಂಧನವನ್ನು ಮಾತ್ರ ವಿಧಿಸಬಹುದು” ಎಂದು ಹೇಳಿತು.

ಇದೇ ವೇಳೆ ಆರ್ಯನ್‌, ಮೂನ್‌ಮೂನ್‌ ಹಾಗೂ ಅರ್ಬಾಜ್‌ ಮತ್ತಿತರರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಾಳೆ ನಡೆಯಲಿದೆ.