Supreme Court, Jail
Supreme Court, Jail 
ಸುದ್ದಿಗಳು

ಪೂರ್ಣಗೊಳ್ಳದ ವಿಚಾರಣೆ: 8.5 ವರ್ಷದಿಂದ ಸೆರೆವಾಸ ಅನುಭವಿಸುತ್ತಿದ್ದ ಕೈದಿಗೆ ಸುಪ್ರೀಂ ಕೋರ್ಟ್ ಜಾಮೀನು

Bar & Bench

ವಿಚಾರಣೆ ಪೂರ್ಣಗೊಳ್ಳದ ಕಾರಣ, ಕೊಲೆ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿ ಎಂಟು ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆ. [ನೀರಜ್‌ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].

ಜಾಮೀನಿನ ಮೇಲೆ ಬಿಡುಗಡೆಯಾಗುವುದು ವಿಚಾರಣಾ ನ್ಯಾಯಾಲಯ ನಿಗದಿಪಡಿಸಿದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ವಿಕ್ರಮ್‌ ನಾಥ್‌ ಅವರಿದ್ದ ಪೀಠ ಇದೇ ವೇಳೆ ತಿಳಿಸಿದೆ,

"ಅರ್ಜಿದಾರರು ಸುಮಾರು ಎಂಟೂವರೆ ವರ್ಷ ಕಾಲ ಜೈಲುವಾಸ ಅನುಭವಿಸಿದ್ದು ವಿಚಾರಣೆ ಇನ್ನೂ ಮುಕ್ತಾಯವಾಗದ ಕಾರಣ, ನಾವು ಅವರಿಗೆ ಜಾಮೀನು ನೀಡಲು ಒಲವು ತೋರುತ್ತಿದ್ದೇವೆ” ಎಂದು ಜನವರಿ 16ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.

ಅಲಾಹಾಬಾದ್ ಹೈಕೋರ್ಟ್, ಜನವರಿ 2018 ರಲ್ಲಿ, ಅರ್ಜಿದಾರರ ಜಾಮೀನು ಅರ್ಜಿಯನ್ನು ಎರಡನೇ ಬಾರಿಗೆ ತಿರಸ್ಕರಿಸಿತ್ತು. ಹೀಗಾಗಿ ಆರೋಪಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಎರಡನೇ ಜಾಮೀನು ಅರ್ಜಿ ವಿಲೇವಾರಿಯಾಗುವ ಮುನ್ನ ಪ್ರಕರಣ ಐದು ವರ್ಷಗಳ ಕಾಲ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿತ್ತು.

ಕೊಲೆ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಚಿಕ್ಕಮ್ಮ ನೀಡಿದ್ದ ದೂರನ್ನು ಆಧರಿಸಿ ಆತನ ವಿರುದ್ಧ 2014ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.