ಸುದ್ದಿಗಳು

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ: ತಮಿಳುನಾಡಿನಲ್ಲಿ ಬಾಲಾಪರಾಧಿ ಸೇರಿದಂತೆ ಐವರ ಬಂಧನ

Bar & Bench

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಗುಡ್ಡದಲ್ಲಿ ಮಂಗಳವಾರ ಸಂಜೆ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರು ಬಾಲಾಪರಾಧಿ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಒಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ.

“ಆರೋಪಿಗಳನ್ನು ತಮಿಳುನಾಡಿನಲ್ಲಿ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳೆಲ್ಲರೂ ದುಡಿಯುವ ವರ್ಗಕ್ಕೆ ಸೇರಿದ್ದಾರೆ. ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನಿಂದ ಮೂರು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು” ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ವಿವರಿಸಿದರು.

“ಬಂಧಿತರ ಪೈಕಿ ಕೆಲವರು ಏಳು, ಎಂಟನೇ ತರಗತಿ ಓದಿದ್ದು, ಒಬ್ಬರು ಅನಕ್ಷರಸ್ಥರಾಗಿದ್ದಾರೆ. ವೈರಿಂಗ್‌, ಕಾರು ಚಾಲನೆ, ಮರಗೆಲಸ ಮಾಡುವವರಾಗಿದ್ದಾರೆ. ಆರೋಪಿಗಳ ಪೈಕಿ ಒಬ್ಬರು ಬಾಲಾಪರಾಧಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಇನ್ನೂ ವಿಸ್ತೃತವಾದ ತನಿಖೆ ನಡೆಸಬೇಕಿದೆ. ನಿರ್ಭಯಾ ಪ್ರಕರಣದಲ್ಲಿ ಬಾಲಾಪರಾಧಿ ವಯೋಮಿತಿಯಲ್ಲಿ ಬದಲಾವಣೆ ಮಾಡಲಾಗಿದೆ. ಹೀಗಾಗಿ, ಆರೋಪಿಯ ವಯಸ್ಸು ಸೇರಿದಂತೆ ನಾನಾ ವಿಚಾರಗಳ ಕುರಿತು ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ ” ಎಂದು ಸೂದ್‌ ತಿಳಿಸಿದ್ದಾರೆ.

“ಸಂತ್ರಸ್ತೆಯ ಗೆಳೆಯ ಅಲ್ಪಸ್ವಲ್ಪ ಮಾಹಿತಿ ನೀಡಿದ್ದಾರೆ. ಘಟನೆಯಿಂದ ಸಂತ್ರಸ್ತೆ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಅವರಿಂದ ಮುಂದೆ ಮಾಹಿತಿ ಸಿಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇವೆ” ಎಂದು ತಿಳಿಸಿದರು.

ಆರೋಪಿಗಳನ್ನು ಪತ್ತೆ ಹಚ್ಚಲು ಮೈಸೂರು ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ದಕ್ಷಿಣ ವಲಯ ಐಜಿಪಿ ಪ್ರತಾಪ್‌ ರೆಡ್ಡಿ, ಪೊಲೀಸ್‌ ವರಿಷ್ಠಾಧಿಕಾರಿ ಆರ್‌ ಚೇತನ್‌ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳ ಪತ್ತೆಗೆ ಶ್ರಮಿಸಿದ ಪೊಲೀಸರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚನೆಯಂತೆ ಐದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಸೂದ್‌ ಮಾಹಿತಿ ನೀಡಿದರು. ಮೈಸೂರಿನ ಆಲನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

(ಮತ್ತಷ್ಟು ಮಾಹಿತಿಯೊಂದಿಗೆ ವರದಿಯನ್ನು ಪರಿಷ್ಕರಿಸಲಾಗುವುದು.)