ಸುದ್ದಿಗಳು

ಭಾರತೀಯ ಸ್ಪರ್ಧಾ ಆಯೋಗದೊಂದಿಗೆ ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರದ ವಿಲೀನ ಸಾಧ್ಯತೆ

Bar & Bench

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ನಿಗಾ ಸಂಸ್ಥೆಯಾಗಿರುವ ರಾಷ್ಟ್ರೀಯ ಲಾಭಕೋರತನ ವಿರೋಧಿ ಪ್ರಾಧಿಕಾರವನ್ನು (ಎನ್‌ಎಎ) ವರ್ಷಾಂತ್ಯದ ಹೊತ್ತಿಗೆ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಜೊತೆ ಕೇಂದ್ರ ಸರ್ಕಾರ ವಿಲೀನಗೊಳಿಸುವ ಸಾಧ್ಯತೆ ಇದೆ.

ತೆರಿಗೆ ಕಡಿತದ ಪ್ರಯೋಜನಗಳನ್ನು ಪಡೆಯದಿರುವ ಗ್ರಾಹಕರ ದೂರುಗಳಿಗೆ ಸಂಬಂಧಿಸಿದ 400 ಪ್ರಕರಣಗಳು ಇನ್ನೂ ಬಾಕಿ ಉಳಿದಿರುವಂತೆಯೇ ಎನ್ಎಎಯ ಅವಧಿಯು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಈ ಸುದ್ದಿ ಬಂದಿದೆ.

ವಿಲೀನ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ ಸಿಸಿಐ ಅಧಿಕಾರಿಯೊಬ್ಬರು “ಪ್ರಸಕ್ತ ಇರುವ ಶಾಸನಬದ್ಧ ಸಂಸ್ಥೆಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರ ಕಲ್ಯಾಣವನ್ನು ವೃದ್ಧಿಸುವ ಹಿನ್ನೆಲೆಯಲ್ಲಿ ಸರ್ಕಾರದ ಪ್ರಯತ್ನ ಈ ವಿಲೀನವಾಗಿದೆ ಎಂದು ʼಬಾರ್ & ಬೆಂಚ್‌ʼಗೆ ತಿಳಿಸಿದರು. ಎನ್‌ಎಎಯಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ವಿಲೀನದ ಬಳಿಕ ಸಿಸಿಐ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಜಿಎಸ್‌ಟಿ ಹೆಸರಿನಲ್ಲಿ ಸ್ವಹಿತಾಸಕ್ತಿಗಾಗಿ ಬೆಲೆ ಏರಿಕೆ ಮಾಡುವ ಪ್ರವೃತ್ತಿಗೆ ಕಡಿವಾಣ ಹಾಕುವ ಮೂಲಕ ಗ್ರಾಹಕರನ್ನು ರಕ್ಷಿಸಲು ಕೇಂದ್ರ ಸರ್ಕಾರ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017ರ ಸೆಕ್ಷನ್ 171ರ ಅಡಿಯಲ್ಲಿ ರೂಪಿಸಲಾದ ಸಂಸ್ಥೆ ಇದು. ಸಂಸ್ಥೆ ಲಾಭಕೋರ ಕಂಪೆನಿಗಳ ಬಗ್ಗೆ ದೂರು ಸ್ವೀಕರಿಸುತ್ತಿದ್ದ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌ ಅವರು ನವೆಂಬರ್‌ 2020ರವರೆಗೆ ಅದರ ಅಧಿಕಾರಾವಧಿ ವಿಸ್ತರಿಸಿದ್ದರು.

ಅಧಿಕಾರಿಗಳು ವಿಲೀನದಿಂದ ಉಂಟಾಗುವ ಸಕಾರಾತ್ಮಕ ಅಂಶಗಳನ್ನು ವಿವರಿಸಿದ್ದು ಎನ್‌ಎಎ ಸಾಂವಿಧಾನಕತೆಯನ್ನು ಪ್ರಶ್ನಿಸಿ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಕೇಂದ್ರ ಸರ್ಕಾರಕ್ಕೆ ದಾವೆಯ ಹೊರೆಯನ್ನು ಈ ಯತ್ನ ತಗ್ಗಿಸಲಿದೆ ಎಂದಿದ್ದಾರೆ.

ಎನ್‌ಎಎ ಬಗ್ಗೆ ಆಗಾಗ್ಗೆ ಟೀಕೆಗಳು ಕೇಳಿ ಬಂದಿದ್ದರೂ ಕೋವಿಡ್‌ ಸಾಂಕ್ರಾಮಿಕ ಹರಡಿದ್ದ ವೇಳೆ ಗ್ರಾಹಕರಿಗೆ ಅಗತ್ಯವಾದ ಜೀವರಕ್ಷಕ ಔಷಧ ಮತ್ತು ಸಲಕರಣೆಗಳ ಮೇಲೆ ಜಿಎಸ್‌ಟಿ ಕಡಿತ ಮಾಡಲು ವಿಫಲವಾಗಿದ್ದ ಔಷಧ ತಯಾರಕ ಕಂಪೆನಿಗಳು, ಔಷಧಾಲಯಗಳು ಹಾಗೂ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಂಡು ಅದು ಸುದ್ದಿಯಲ್ಲಿತ್ತು.