<div class="paragraphs"><p>NEET PG Counselling</p></div>

NEET PG Counselling

 
ಸುದ್ದಿಗಳು

[ನೀಟ್‌ ಸ್ನಾತಕೋತ್ತರ ಕೌನ್ಸೆಲಿಂಗ್‌ 2021-22] ಪ್ರಸಕ್ತ ಇರುವ ಮೀಸಲಾತಿ ಮಾನದಂಡಗಳ ಅನ್ವಯವೇ ಆರಂಭ: ಸುಪ್ರೀಂ ಕೋರ್ಟ್‌

Bar & Bench

ಸರ್ವೋಚ್ಚ ನ್ಯಾಯಾಲಯವು 2021ನೇ ಸಾಲಿನ ನೀಟ್‌ ಸ್ನಾತಕೋತ್ತರ ಕೋರ್ಸ್‌ಗಳ ಕೌನ್ಸೆಲಿಂಗ್‌ ನಡೆಸಲು ಶುಕ್ರವಾರ ಮಧ್ಯಂತರ ಆದೇಶ ಹೊರಡಿಸುವ ಮೂಲಕ ಹಸಿರು ನಿಶಾನೆ ತೋರಿದೆ.

ಅಖಿಲ ಭಾರತ ಕೋಟಾ (ಎಐಕ್ಯು) ಸೀಟುಗಳಡಿ ರಾಜ್ಯ ಸರ್ಕಾರದ ವೈದ್ಯಕೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 27 ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ ಕಲ್ಪಿಸಲಾಗಿರುವ ಪ್ರಸಕ್ತ ಇರುವ ಮಾನದಂಡಗಳ ಅನ್ವಯವೇ ಕೌನ್ಸೆಲಿಂಗ್‌ ನಡೆಸಲು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎ ಎಸ್‌ ಬೋಪಣ್ಣ ಅವರಿದ್ದ ವಿಭಾಗೀಯ ಪೀಠವು ಆದೇಶ ಮಾಡಿದೆ.

“ಪಾಂಡೆ ಸಮಿತಿಯ ವರದಿಯನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ನೀಟ್‌ ಪಿಜಿ ಮತ್ತು ಯುಜಿಗಾಗಿ ಕೌನ್ಸೆಲಿಂಗ್ ಅನ್ನು ಕಚೇರಿ ಜ್ಞಾಪನ ಪತ್ರದ ಅನ್ವಯ ನೀಡಲಾದ ಅಧಿಸೂಚನೆಗೆ ಅನುಗುಣವಾಗಿ ನಡೆಸಲಾಗುತ್ತದೆ. ಇಡಬ್ಲ್ಯೂಎಸ್‌ ಗುರುತಿಸಲು ಉಲ್ಲೇಖಿಸಲಾದ ಮಾನದಂಡಗಳನ್ನು ನೀಟ್‌ ಪಿಜಿ ಮತ್ತು ಯುಜಿಗಾಗಿ ಬಳಸಲಾಗುತ್ತದೆ. ಪಾಂಡೆ ಸಮಿತಿಯ ವರದಿಯು ಆಕ್ಷೇಪಾರ್ಹವಾದ ವಿಷಯದ ಅಂತಿಮ ಸಿಂಧುತ್ವಕ್ಕೆ ಒಳಪಟ್ಟಿರುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಹಿಂದುಳಿದ ವರ್ಗಗಳಿಗೆ ಶೇ. 27 ರಷ್ಟು ಮೀಸಲಾತಿ ಕಲ್ಪಿಸುವುದನ್ನೂ ನ್ಯಾಯಾಲಯವು ಎತ್ತಿ ಹಿಡಿದಿದೆ. ಇಡಬ್ಲ್ಯೂಎಸ್‌ ನಿರ್ಧರಿಸಲು ಬಳಸಲಾಗುವ ಸಿಂಧುತ್ವದ ಕುರಿತು ಕಳೆದ ವರ್ಷದ ಮಾರ್ಚ್‌ನಲ್ಲಿ ಪೀಠವು ಸುದೀರ್ಘವಾಗಿ ವಿಚಾರಣೆ ನಡೆಸಿತ್ತು.

“ಯಾವುದೇ ಪರಿಷ್ಕೃತ ಮಾನದಂಡಗಳನ್ನು ಭವಿಷ್ಯದಲ್ಲಿ ಅನ್ವಯಿಸುವಂತೆ ಮಾಡಬೇಕು ಮತ್ತು ಪ್ರಸ್ತುತ ಪ್ರವೇಶಾತಿಯನ್ನು ಈಗಿನ ಮಾನದಂಡಗಳ ಪ್ರಕಾರ ನಡೆಸಬೇಕು ಎಂದು ಹಿಂದಿನ ವಿಚಾರಣೆಯ ವೇಳೆ, ಕೇಂದ್ರ ಸರ್ಕಾರವು ಮನವಿ ಮಾಡಿತ್ತು. ಒಬಿಸಿ ಮೀಸಲಾತಿ ಮತ್ತು ಇಡಬ್ಲ್ಯೂಎಸ್‌ ನಿರ್ಧರಿಸಲು ₹8 ಲಕ್ಷ ಆದಾಯದ ಮಾನದಂಡ ವಿಧಿಸಿರುವುದನ್ನು ಸರ್ಕಾರ ಸಮರ್ಥಿಸಿತ್ತು.

ನ್ಯಾಯಾಲಯ ನಿರ್ದಿಷ್ಟವಾಗಿ ಪರಿಶೀಲಿಸುತ್ತಿರುವ ಅಂಶಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿಗಾಗಿ ಇಡಬ್ಲ್ಯೂಎಸ್‌ ಅಡಿ ₹8 ಲಕ್ಷ ವಾರ್ಷಿಕ ಆದಾಯವನ್ನು ಮಿತಿಯಾಗಿ ಬಳಸುವ ಸಾಧ್ಯತೆಯೂ ಒಂದಾಗಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅರವಿಂದ ದಾತಾರ್ ಅವರು, ಆರ್ಥಿಕ ಮೀಸಲಾತಿ ಕುರಿತ ಸಿನ್ಹೋ ಆಯೋಗದ ವರದಿಯನ್ನು ತಿರಸ್ಕರಿಸಲು ಕೇಂದ್ರ ಸರ್ಕಾರ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದಿದ್ದರು. ವಾರ್ಷಿಕ ಆದಾಯದ ಮಿತಿಯನ್ನು ರೂ 2.5 ಲಕ್ಷಕ್ಕೆ ಇಳಿಸಬೇಕು ಎಂದು ವಾದಿಸಿದ್ದರು.

ಸ್ಥಾನಿಕ ವೈದ್ಯರನ್ನು ಪ್ರತಿನಿಧಿಸಿದ್ದ ವಕೀಲೆ ಅರ್ಚನಾ ಪಾಠಕ್ ದವೆ, ಇಡಬ್ಲ್ಯೂಎಸ್ ಮಾನದಂಡ ಕುರಿತು ನಂತರ ನಿರ್ಧರಿಸಬಹುದಾಗಿದ್ದು ತಕ್ಷಣ ಕೌನ್ಸೆಲಿಂಗ್‌ ಪ್ರಾರಂಭಕ್ಕೆ ಆದ್ಯತೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. "3ನೇ ವರ್ಷದ ಸ್ಥಾನಿಕ ವೈದ್ಯರು ಇನ್ನು 4 ತಿಂಗಳಲ್ಲಿ ಉತ್ತೀರ್ಣರಾಗಲಿರುವ ಕಾರಣ ಕೌನ್ಸೆಲಿಂಗ್ ಅನ್ನು ತಕ್ಷಣವೇ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಕೇವಲ 33% ಉದ್ಯೋಗಿಗಳು ಮಾತ್ರ ಉಳಿಯುತ್ತಾರೆ. ಕೋವಿಡ್‌ ಮೂರನೇ ಅಲೆ ಹಿನ್ನೆಲೆಯಲ್ಲಿ ನಮಗೆ ವೈದ್ಯರ ಅಗತ್ಯವಿದೆ. 8 ಲಕ್ಷ ಅಥವಾ 5 ಲಕ್ಷ ಮಿತಿ ಕುರಿತು ನಂತರ ತೀರ್ಮಾನ ಮಾಡಬಹುದು," ಎಂದು ವಾದಿಸಿದ್ದರು. ಈ ವಾದಕ್ಕೆ ಮೆಚ್ಚುಗೆ ಸೂಚಿಸಿದ ನ್ಯಾಯಾಲಯ ಇದರಿಂದ ವೈದ್ಯರಿಗೆ ಮಾತ್ರವಲ್ಲ ಜನರಿಗೂ ಅನುಕೂಲವಾಗಲಿದೆ ಎಂದಿತ್ತು.

ಕೇಂದ್ರ ಸರ್ಕಾರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ₹ 8 ಲಕ್ಷ ಆದಾಯದ ಮಾನದಂಡವನ್ನು ಸಮರ್ಥಿಸಿಕೊಳ್ಳುತ್ತಾ ಆರ್ಥಿಕ ಹಿನ್ನಡೆಯನ್ನು ನಿರ್ಧರಿಸಲು ಯಾವುದೇ ನಿಶ್ಚಿತ ಸೂತ್ರವಿಲ್ಲ. ಬಡತನವನ್ನು ಯಾವುದೇ ಸೂಚ್ಯಂಕ ಪತ್ತೆ ಮಾಡಲಾಗದು” ಎಂದಿದ್ದರು. ಇಡಬ್ಲ್ಯೂಎಸ್ ಕುರಿತ ನಿರ್ಧರಣವು ಹೆಚ್ಚು ಒಳಗೊಳ್ಳುವಿಕೆಯಿಂದ ತೊಂದರೆ ಎದುರಿಸುವುದಿಲ್ಲ ಎಂದ್ದಿದ್ದ ಅವರು ಈ ಪ್ರಕ್ರಿಯೆಯು ಬಡವರು ಯಾರು ಎಂದು ನಿರ್ಧರಿಸುವುದಕ್ಕಾಗಿ ಇರುವಂತಹುದಲ್ಲ ಎಂದಿದ್ದರು.

"ಬಡವರು ಯಾರು ಎಂಬುದನ್ನು ನಾವು ಪತ್ತೆ ಹಚ್ಚುತ್ತಿಲ್ಲ. ಬಳಸಿದ ಪದ ʼಆರ್ಥಿಕವಾಗಿ ದುರ್ಬಲʼ ಎಂಬುದಾಗಿದೆ. ಇದು ಬಡತನ ರೇಖೆಗಿಂತ (ಬಿಪಿಎಲ್) ಕೆಳಗೆ ಇರಬೇಕಾಗಿಲ್ಲ, ಅದು ಬಡತನ ರೇಖೆಗಿಂತ ಸ್ವಲ್ಪ ಮೇಲಿರಬಹುದು" ಎಂದು ಅವರು ಹೇಳಿದ್ದರು.

ನಾವು ಇಡಬ್ಲ್ಯೂಎಸ್‌ ಬಗ್ಗೆ ಗಮನಹರಿಸಿದ್ದೇವೆಯೇ ವಿನಾ ಬಡವರ ಬಗ್ಗೆ ಅಲ್ಲ. ಆದಾಯ ತೆರಿಗೆ ಮಿತಿಯನ್ನು ರೂಪಿಸುವಾಗಲೂ, ಸರ್ಕಾರ ಒಳಗೊಳ್ಳುವಿಕೆ ಕುರಿತು ಒಲವು ತೋರುತ್ತದೆ. ಉಳಿತಾಯ ಮಾಡಿದ್ದಾರೆ ಎಂದು ಭಾವಿಸುವವರನ್ನು ಕೂಡ ಇದು ಒಳಗೊಳ್ಳುತ್ತದೆ” ಎಂದು ಎಸ್‌ಜಿ ವಾದಿಸಿದ್ದರು.