Bombay High Court, Rakhi Sawant 
ಸುದ್ದಿಗಳು

ರೂಪದರ್ಶಿಯ ಘನತೆಗೆ ಧಕ್ಕೆ ತಂದ ಆರೋಪ: ನಾಳೆಯವರೆಗೆ ರಾಖಿ ಸಾವಂತ್‌ಗೆ ಇಲ್ಲ ಬಂಧನ ಭೀತಿ

ನಾಳೆಯವರೆಗೆ ರಾಖಿ ಸಾವಂತ್ ಅವರನ್ನು ಬಂಧಿಸುವಂತಿಲ್ಲ: ಘನತೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಆದೇಶ

Bar & Bench

ರೂಪದರ್ಶಿ, ನಟಿ ರಾಖಿ ಸಾವಂತ್‌ ವಿರುದ್ಧ ಮತ್ತೊಬ್ಬ ನಟಿ ಹಾಗೂ ರೂಪದರ್ಶಿ ಶೆರ್ಲಿನ್‌ ಛೋಪ್ರಾ ದಾಖಲಿಸಿದ್ದ ಮಾನನಷ್ಟ ಮತ್ತು ಘನತೆಗೆ ಧಕ್ಕೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಸೋಮವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

ರಾಖಿ ತನ್ನ ಆಕ್ಷೇಪಾರ್ಹ ಛಾಯಾಚಿತ್ರ ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಶೆರ್ಲಿನ್‌ ಅವರು ರಾಖಿ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಾವಂತ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಮನವಿಗೆ  ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.

ಪ್ರಕರಣದ ತನಿಖಾಧಿಕಾರಿ (ಐಒ) ಇಂದು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ತಿಳಿಸಿದ ನ್ಯಾ. ಎಂ ಎಸ್‌ ಕಾರ್ಣಿಕ್‌ ಅವರಿದ್ದ ಏಕಸದಸ್ಯ ಪೀಠ  ನಾಳೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.

ತನಿಖಾಧಿಕಾರಿಯ ಸಮ್ಮುಖದಲ್ಲೇ ವಾದ ಆಲಿಸುವುದಾಗಿ ನ್ಯಾ. ಕಾರ್ಣಿಕ್‌ ಹೇಳಿದಾಗ ರಾಖಿ ಪರ ವಕೀಲರು ತಮ್ಮ ಕಕ್ಷಿದಾರೆಯನ್ನು ಬಂಧಿಸದಂತೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು. ಆಗ ನ್ಯಾಯಮೂರ್ತಿಗಳು “ಆಕೆಯನ್ನು ನಾಳೆಯವರೆಗೆ ಬಂಧಿಸಬೇಡಿʼ ಎಂದು ಆದೇಶಿಸಿದರು.  

ಐಪಿಸಿ ಸೆಕ್ಷನ್ 354(ಎ) (ಮಹಿಳೆಯರ ಮೇಲಿನ ದೌರ್ಜನ್ಯ), 500 (ಮಾನನಷ್ಟ), 504 (ಕ್ರಿಮಿನಲ್‌ ಬೆದರಿಕೆ), 509 (ಮಹಿಳೆಗೆ ಅಪಮಾನಿಸುವ ರೀತಿಯ ವರ್ತನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ  ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 (ಎ) ಅಡಿಯಲ್ಲಿ ರಾಖಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.