ಸುದ್ದಿಗಳು

[ಬೆಟ್ಟಿಂಗ್‌ ಪ್ರಕರಣ] ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಶ್ನಿಸಿ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಪಪ್ಪಿ ಅವರ ಬಂಧನ ಅಕ್ರಮ ಎಂದು ಘೋಷಿಸಬೇಕು ಎಂದು ಕೋರಿ ಅವರ ಪತ್ನಿ ಆರ್‌ ಡಿ ಚೈತ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ ಐ ಅರುಣ್‌ ಅವರು ಆದೇಶ ಕಾಯ್ದಿರಿಸಿದ್ದಾರೆ.

Bar & Bench

ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್‌ ಪಪ್ಪಿ ಅವರನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಬಂಧಿಸುವ ದಿನ ಅವರ ವಿರುದ್ಧ ಯಾವುದೇ ಎಫ್‌ಐಆರ್‌ ಬಾಕಿ ಇರಲಿಲ್ಲ. ಅದಾಗ್ಯೂ, ಕಾನೂನು ಮೀರಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಹಿರಿಯ ವಕೀಲ ಸಿದ್ಧಾರ್ಥ್‌ ದವೆ ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಬಲವಾಗಿ ವಾದಿಸಿದರು.

ಪಪ್ಪಿ ಅವರ ಬಂಧನ ಅಕ್ರಮ ಎಂದು ಘೋಷಿಸಬೇಕು ಎಂದು ಕೋರಿ ಅವರ ಪತ್ನಿ ಆರ್‌ ಡಿ ಚೈತ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ವೀರೇಂದ್ರ ಪ್ರತಿನಿಧಿಸಿದ್ದ ದವೆ ಅವರು “ಇ ಡಿಯು ಎಲ್ಲವನ್ನು ಅಪರಾಧ ಪ್ರಕ್ರಿಯೆಗೆ ಬಳಕೆ ಮಾಡಲಾಗದು. ಷೆಡ್ಯೂಲ್/ಪ್ರೆಡಿಕೇಟ್‌ ಅಪರಾಧ ಆಧರಿಸಿ ತನಿಖೆ ನಡೆಸಬೇಕು. ಕನಕಪುರದ ಹಾರೋಹಳ್ಳಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಪ್ರೆಡಿಕೇಟ್‌ ಅಪರಾಧಕ್ಕೆ ಮುಂದ ಮಾಡಲಾಗುತ್ತಿದೆ. ವಾಸ್ತವದಲ್ಲಿ ಆ ಪ್ರಕರಣದಲ್ಲಿ ಪಪ್ಪಿ ಅವರು ಆರೋಪಿ ಅಲ್ಲ” ಎಂದರು.

“ಜುಲೈನಲ್ಲಿ ಇ ಡಿಯು ಪಪ್ಪಿ ವಿರುದ್ಧ ದಾಖಲಿಸಿರುವ ಇಸಿಐಆರ್‌ನಲ್ಲಿ ನಾಲ್ಕು ಎಫ್‌ಐಆರ್‌ ಉಲ್ಲೇಖಿಸಿತ್ತು. ಪಪ್ಪಿ ವಿರುದ್ಧ ಎಫ್‌ಐಆರ್‌ ದಾಖಲಾಗದೇ ಇರುವುದರಿಂದ ಅದನ್ನು ಹೇಗೆ ಅವರ ವಿರುದ್ಧ ಬಳಕೆ ಮಾಡಲಾಗುತ್ತದೆ? ಬಂಧಿಸುವಾಗ ನಂಬಲರ್ಹ ಕಾರಣಗಳನ್ನೇ ಇ ಡಿ ನೀಡಿಲ್ಲ. ಪಂಕಜ್‌ ಬನ್ಸಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಿ, ಬಂಧನಕ್ಕೆ ಸೂಕ್ತ ಕಾರಣಗಳನ್ನು ನೀಡಲಾಗಿಲ್ಲ. ಹಾಗೆಂದು ಇ ಡಿ ತನಿಖೆ ನಡೆಸಬಾರದು ಎಂದು ಹೇಳುತ್ತಿಲ್ಲ. ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿ, ಪಿಎಂಎಲ್‌ಎ ಸೆಕ್ಷನ್‌ 50ರ ಅಡಿ ನೋಟಿಸ್‌ ನೀಡಿ, ಪಪ್ಪಿ ಪ್ರತಿಕ್ರಿಯೆ ದಾಖಲಿಸಿಕೊಂಡು ಇ ಡಿಯು ಕಾನೂನಿನ ಪ್ರಕಾರ ಮುಂದುವರಿಯಬೇಕಿತ್ತು. ಆದರೆ, ಇಲ್ಲಿ ಅದ್ಯಾವುದನ್ನೂ ಮಾಡದ ತನಿಖಾ ಸಂಸ್ಥೆಯು ಸ್ವೇಚ್ಛೆಯಿಂದ ನಡೆದುಕೊಂಡಿದೆ” ಎಂದು ಆಕ್ಷೇಪಿಸಿದರು.

ಇ ಡಿ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಪಪ್ಪಿ ಬಂಧನಕ್ಕೂ ಮುನ್ನ ಆರು ನಂಬಲರ್ಹ ಕಾರಣಗಳನ್ನು ನೀಡಲಾಗಿದೆ. ಆಕ್ಷೇಪಣೆಯಲ್ಲಿ ವೀರೇಂದ್ರ ಪಪ್ಪಿ ಪಾತ್ರದ ಬಗ್ಗೆ ಸಾಕಷ್ಟು ವಿವರವಾಗಿ ಹೇಳಲಾಗಿದೆ. ವಿಸ್ತೃತ ತನಿಖೆಯ ಬಳಿಕ ಅವರನ್ನು ಬಂಧಿಸಲಾಗಿದೆ. ಭಾರತದಲ್ಲಿ ಹಣ ಸಂಗ್ರಹಿಸಿ ಅದನ್ನು ವಿದೇಶಕ್ಕೆ ಕ್ಯಾಸಿನೋ ಆರಂಭಿಸಲು ರವಾನಿಸಿರುವುದು ಅಪರಾಧ ಪ್ರಕ್ರಿಯೆಯಾಗಿದೆ” ಎಂದರು.

ಇನ್ನು ನ್ಯಾಯಾಲಯ ಎತ್ತಿದ ನಿರ್ದಿಷ್ಟ ಪ್ರಶ್ನೆಗೆ ಕಾಮತ್‌ ಅವರು “ಹಾರೋಹಳ್ಳಿ ಠಾಣೆಯಲ್ಲಿ ದೂರುದಾರ ಸುನೀಲ್‌ ಅವರು ಬೆಟ್ಟಿಂಗ್‌ ದಂಧೆ ಮತ್ತು ಅದರ ಸುತ್ತಲಿನ ಘಟನೆಗಳನ್ನು ಸವಿವರವಾಗಿ ದಾಖಲಿಸಿದ್ದಾರೆ. ಅದು 30 ಸಾವಿರ ರೂಪಾಯಿ ವಂಚನೆ ಪ್ರಕರಣವಾದರೂ ತನಿಖಾಧಿಕಾರಿಯೂ ಕೇವಲ 30 ಸಾವಿರ ರೂಪಾಯಿಗೆ ಸೀಮಿತವಾಗಿ ತನಿಖೆ ನಡೆಸುವುದಿಲ್ಲ. ಅದರ ಸುತ್ತಲಿನ ಘಟನೆಗಳನ್ನೂ ನೋಡುತ್ತಾರೆ. ಇದರಲ್ಲಿ ಫೋನ್‌ ಪೇನಲ್ಲಿ ನಡೆಸಿರುವ ಹಣ ವರ್ಗಾವಣೆಯು ತನಿಖೆಗೆ ವ್ಯಾಪ್ತಿಗೆ ಬಂದಿದೆ. ಹೀಗಾಗಿ, ಹಾರೋಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಲ್ಲಿಸಿರುವುದು, ಅದನ್ನು ಸಕ್ಷಮ ನ್ಯಾಯಾಲಯ ಒಪ್ಪದಿರುವುದು ವಿಚಾರವೇ ಅಲ್ಲ. ಇ ಡಿ ತನಿಖೆ ಮುಂದುವರಿಸಲು ಒಂದು ಪ್ರೆಡಿಕೇಟ್‌ ಅಪರಾಧ (ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಸಾಕು” ಎಂದರು. ಇದನ್ನು ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿತು.