Prime Minister Narendra Modi
Prime Minister Narendra Modi 
ಸುದ್ದಿಗಳು

[ಸಂವಿಧಾನ ದಿನ] ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೆಲವರಿಂದ ದೇಶದ ಅಭಿವೃದ್ಧಿಗೆ ತಡೆ: ಪ್ರಧಾನಿ ನರೇಂದ್ರ ಮೋದಿ

Bar & Bench

“ದೇಶದ ಆಶೋತ್ತರಗಳನ್ನು ಅರ್ಥೈಸಿಕೊಳ್ಳದೇ ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಷ್ಟ್ರದ ಅಭಿವೃದ್ಧಿಗೆ ತಡೆಯೊಡ್ಡುತ್ತಿದ್ದಾರೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಸುಪ್ರೀಂ ಕೋರ್ಟ್‌ ರೆಜಿಸ್ಟ್ರಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ದೇಶದ ಅಭಿವೃದ್ಧಿಗೆ ತಡೆಯೊಡ್ಡಲು ಪರಿಸರ ಕಾಳಜಿಯನ್ನು ಎತ್ತಲಾಗುತ್ತಿದೆ. ಭಾರತೀಯರಾದ ನಾವು ಮರ, ಗಿಡಗಳಲ್ಲಿ ದೇವರನ್ನು ಕಾಣುತ್ತೇವೆ. ಭೂಮಿ ತಾಯಿಯನ್ನೂ ದೇವರು ಎಂದು ಪರಿಗಣಿಸುತ್ತೇವೆ. ಇಂಥ ದೇಶಕ್ಕೆ ಪರಿಸರ ಸಂರಕ್ಷಣೆ ಹೆಸರಿನಲ್ಲಿ ಉಪನ್ಯಾಸ ನೀಡಲಾಗುತ್ತದೆ… ಬೇಸರದ ಸಂಗತಿ ಎಂದರೆ ನಮ್ಮ ದೇಶದಲ್ಲೂ ಅಂತಹ ಜನರಿದ್ದಾರೆ. ದೇಶದ ಆಶೋತ್ತರಗಳನ್ನು ಅರ್ಥೈಸಿಕೊಳ್ಳದೇ ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಷ್ಟ್ರದ ಅಭಿವೃದ್ಧಿಗೆ ತಡೆಯೊಡ್ಡುತ್ತಿದ್ದಾರೆ” ಎಂದು ವಿಷಾದಿಸಿದರು.

“ನರ್ಮದಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸುವ ಕನಸನ್ನು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಕಂಡಿದ್ದರು. ಪಂಡಿತ್‌ ಜವಹರಲಾಲ್‌ ನೆಹರೂ ಅವರು ಅದಕ್ಕೆ ಶಂಕು ಸ್ಥಾಪನೆ ನಡೆಸಿದ್ದರು. ಅದೂ ಪರಿಸರ ಮಾಲಿನ್ಯ ಕಾಳಜಿಯ ಸುಳಿಯಲ್ಲಿ ಸಿಲುಕಿಕೊಂಡಿತ್ತು” ಎಂದು ಮೋದಿ ನೆನೆದರು.

“ವಸಹಾತುಶಾಹಿ ಮನಸ್ಥಿತಿಯಿಂದಾಗಿ ಯುವ ಭಾರತದ ಆಶೋತ್ತರಗಳು ಮತ್ತು ಕನಸುಗಳಿಗೆ ಅಡ್ಡಿ ಉಂಟಾಗಿದೆ. ಈ ವಸಹಾತುಶಾಹಿ ಮನಸ್ಥಿತಿಯನ್ನು ನಾಶಪಡಿಸಬೇಕಿದ್ದು, ಅದಕ್ಕಾಗಿ ಭಾರತೀಯ ಸಂವಿಧಾನವನ್ನು ಆಧರಿಸಬೇಕಿದೆ” ಎಂದರು.

“ನ್ಯಾಯಾಂಗ ಮತ್ತು ಕಾರ್ಯಾಂಗಗಳೆರಡೂ ಒಂದೇ ಮೂಲದಿಂದ ಬಂದಿವೆ. ಹಾಗಾಗಿ ಅವು ಅವಳಿಗಳು. ನಮ್ಮ ಚರ್ಚೆಗಳಲ್ಲಿ ನಾವು ಅಧಿಕಾರದ ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತೇವೆ. ಇದು ಪ್ರಮುಖವಾದ ಪರಿಕಲ್ಪನೆ. ಈ ನಿಟ್ಟಿನಲ್ಲಿ ನಾವು ಒಗ್ಗೂಡಿ ಪರಿಹಾರಾತ್ಮಕವಾಗಿ ಮುಂದಡಿಯಿಡಬೇಕು. ಅಧಿಕಾರದ ಪ್ರತ್ಯೇಕತೆಯ ವಿಚಾರದಲ್ಲಿ ನಾವೆಲ್ಲರೂ ಸಾಮೂಹಿಕ ಜವಾಬ್ದಾರಿಯಿಂದ ಒಗ್ಗೂಡಿ ಕೆಲಸ ಮಾಡಬೇಕು, ಮುಂದಿನ ಹಾದಿಯನ್ನು ನಿರ್ಧರಿಸಿಕೊಳ್ಳಬೇಕು” ಎಂದರು.