ಮುಂದಿನ ಆದೇಶದವರೆಗೆ ಪಂಜಾಬ್ನಲ್ಲಿ ಯಾವುದೇ ಮರವನ್ನು ತನ್ನ ಪೂರ್ವಾನುಮತಿಯಿಲ್ಲದೆ ಕಡಿಯಬಾರದು ಎಂದು ಡಿಸೆಂಬರ್ 24ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ [ಪ್ರಣೀತ್ ಕೌರ್ ಮತ್ತು ಪಂಜಾಬ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಮೊಹಾಲಿ ಜಿಲ್ಲೆಯಲ್ಲಿ 251 ಮರಗಳ ಹನನ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸಂಜೀವ್ ಬೆರ್ರಿ ಅವರಿದ್ದ ಪೀಠ ಈ ಆದೇಶ ಹೊರಡಿಸಿತು.
“ಮುಂದಿನ ವಿಚಾರಣೆಯವರೆಗೆ, ನ್ಯಾಯಾಲಯದ ಅನುಮತಿ ಇಲ್ಲದೆ ಪಂಜಾಬ್ ರಾಜ್ಯದಲ್ಲಿ ಯಾವುದೇ ವಯಸ್ಸಿನ ಅಥವಾ ಯಾವುದೇ ಜಾತಿಯ ಮರ ಕಡಿಯುವುದನ್ನು ನಿಷೇಧಿಸಲಾಗಿದೆ,” ಎಂದು ನ್ಯಾಯಾಲಯ ತಿಳಿಸಿದೆ.
ಪಂಜಾಬ್ನಲ್ಲಿ ಅರಣ್ಯ ಭಾಗ ರಾಜ್ಯದ ಭೌಗೋಳಿಕ ಪ್ರದೇಶದ ಕೇವಲ ಶೇ 3.67ರಷ್ಟಿದೆ. ಇದು ರಾಜಸ್ಥಾನದ ಅರಣ್ಯ ಪ್ರದೇಶಕ್ಕಿಂತಲೂ ಕಡಿಮೆ. ಅಲ್ಲಿ ಅರಣ್ಯ ಭಾಗ ಶೇಕಡಾ 4.8 ರಷ್ಟಿದೆ ಎಂದು ಅರ್ಜಿದಾರರು ವಿವರಿಸಿದ ಹಿನ್ನೆಲಯಲ್ಲಿ ಪೀಠ ಈ ವಿಚಾರವಾಗಿ ಮಧ್ಯಪ್ರವೇಶಿಸಿತು.
"ಪಂಜಾಬ್ ರಾಜ್ಯದ ಕಾರ್ಯಕಾರಿ ಅಧಿಕಾರಿಗಳು ಗಂಭೀರವಾಗಿಲ್ಲ ಅಥವಾ ಸನ್ನಿಹಿತವಾಗುತ್ತಿರುವ ಪರಿಸರ ವಿಕೋಪದ ಬಗ್ಗೆ ಅವರಿಗೆ ಅರಿವಿಲ್ಲ ಎಂದು ತೋರುತ್ತದೆ " ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಲಭ್ಯವಿರುವ ಅಂಕಿ-ಅಂಶಗಳನ್ನು ಪರಿಗಣಿಸಿ, ಪರಿಸ್ಥಿತಿಯನ್ನು ಸರಿಪಡಿಸಲು ತೀವ್ರ ಪರಿಹಾರ ಕ್ರಮ ಅಗತ್ಯ ಎಂದು ಪೀಠ ಹೇಳಿತು.
ಮೊಹಾಲಿಯ ಎಸ್ಎಎಸ್ ನಗರದ ವಿವಿಧೆಡೆ ವೃತ್ತಗಳನ್ನು ನಿರ್ಮಿಸಲು 251 ಮರಗಳನ್ನು ಕಡಿಯಬೇಕೆಂದು ಟೆಂಡರ್ ಪ್ರಕಟಿಸಲಾಗಿದೆ ಎಂದು ಅರ್ಜಿದಾರರು ದೂರಿದ್ದರು. ಈ ಹಿನ್ನೆಲೆಯಲ್ಲಿ, ನ್ಯಾಯಾಲಯ ತಕ್ಷಣವೇ ಮರ ಕಡಿತಕ್ಕೆ ತಡೆ ನೀಡಿದ್ದು, ಮೊಹಾಲಿಯಲ್ಲಾಗಲಿ ಅಥವಾ ಪಂಜಾಬ್ನ ಇತರ ಯಾವುದೇ ಭಾಗದಲ್ಲಾಗಲಿ ಮರಗಳ ಹನನ ತಕ್ಷಣ ನಿಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಲು ಸರ್ಕಾರದ ವಕೀಲರಿಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜನವರಿ 19ರಂದು ನಡೆಯಲಿದೆ.
[ಆದೇಶದ ಪ್ರತಿ]