Justice Anand Pathak
Justice Anand Pathak  
ಸುದ್ದಿಗಳು

ಸಸಿ ನೆಟ್ಟು ಆರೈಕೆ ಮಾಡುವಂತೆ ಷರತ್ತು ವಿಧಿಸಿ ಕೊಲೆ ಯತ್ನ ಪ್ರಕರಣದ ಆರೋಪಿಗೆ ಜಾಮೀನು ನೀಡಿದ ಮಧ್ಯಪ್ರದೇಶ ಹೈಕೋರ್ಟ್

Bar & Bench

ಹತ್ತು ಸಸಿಗಳನ್ನು ನೆಟ್ಟು ಅವುಗಳ ಆರೈಕೆ ಮಾಡಬೇಕು ಎಂದು ಕೊಲೆ ಯತ್ನ ಪ್ರಕರಣವೊಂದರ ಆರೋಪಿಗೆ ಷರತ್ತು ವಿಧಿಸಿ ಮಧ್ಯಪ್ರದೇಶ ಹೈಕೋರ್ಟ್‌ ಗ್ವಾಲಿಯರ್ ಪೀಠ ಇತ್ತೀಚೆಗೆ ಜಾಮೀನು ನೀಡಿದೆ. [ರಿಂಕು ಶರ್ಮಾ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಸೃಷ್ಟಿಕಾರ್ಯ ಮತ್ತು ನಿಸರ್ಗದೊಡನೆ ಸಾಮರಸ್ಯ ಸಾಧಿಸುವ ಮೂಲಕ ಹಿಂಸೆ ಮತ್ತು ದುಷ್ಟತನವನ್ನು ಹೋಗಲಾಡಿಸಲು ಪರೀಕ್ಷಾರ್ಥವಾಗಿ ಈ ನಿರ್ದೇಶನ ನೀಡಲಾಗಿದೆ ಎಂದು ನ್ಯಾ. ಆನಂದ್‌ ಪಾಠಕ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಅರ್ಜಿದಾರರ ಕಾರ್ಯ ಮರ ನೆಡುವುದಕ್ಕೆ ಮಾತ್ರ ಸ್ಥಗಿತಗೊಳ್ಳುವುದಿಲ್ಲ ಬದಲಿಗೆ ಅವುಗಳನ್ನು ಪೋಷಿಸಿ ಕಾಳಜಿ ಮಾಡುವವರೆಗೆ ಮುಂದುವರೆಯುತ್ತದೆ. ಇದರಲ್ಲಿ ಯಾವುದೇ ಲೋಪ ಕಂಡುಬಂದರೆ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯ ಎಚ್ಚರಿಸಿತು.

ಅರ್ಜಿದಾರ ವಿಚಾರಣಾ ನ್ಯಾಯಾಲಯ ಕಟ್ಟಡದ ಎದುರು ನೆಟ್ಟ ಸಸಿಗಳ ಛಾಯಾಚಿತ್ರಗಳನ್ನು 30 ದಿನಗಳಲ್ಲಿ ಸಲ್ಲಿಸಬೇಕು. ಈ ಯತ್ನ ಕೇವಲ ಮರ ನೆಡುವ ಪ್ರಶ್ನೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಕಲ್ಪನೆಯೊಂದರ ಸಾಕಾರಕ್ಕೆ ಸಂಬಂಧಿಸಿದೆ ಎಂದು ಪೀಠ ಒತ್ತಿಹೇಳಿತು.

ತಾನು 30 ತಿಂಗಳುಗಳಿಗಿಂತ ಹೆಚ್ಚು ಕಾಲ ಜೈಲುವಾಸವನ್ನು ಪೂರ್ವಭಾವಿ ಬಂಧನವಾಗಿ ಅನುಭವಿಸಿದ್ದರಿಂದ ಜಾಮೀನು ನೀಡಬೇಕೆಂದು ಅರ್ಜಿದಾರ ಕೋರಿದ್ದ. ಅಲ್ಲದೆ ರಾಷ್ಟ್ರೀಯ, ಪರಿಸರಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಮುದಾಯ ಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದ.

ಅರ್ಜಿಯನ್ನು ಪುರಸ್ಕರಿಸಲು ಒಲವು ತೋರಿದ ನ್ಯಾಯಾಲಯ ಅರ್ಜಿದಾರನ ಅಪರಾಧದ ಹಿನ್ನೆಲೆಯನ್ನು ಪರಿಗಣಿಸಿ ಎರಡು ಸಾಲ್ವೆಂಟ್‌ ಶ್ಯೂರಿಟಿಗಳೊಂದಿಗೆ ₹1,00,000 ವೈಯಕ್ತಿಕ ಬಾಂಡ್ ಒದಗಿಸುವಂತೆ ಆರೋಪಿಗೆ ಸೂಚಿಸಿತು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು, ಯಾವುದೇ ರೀತಿಯ ಅಪರಾಧ ಮಾಡಬಾರದು, ಸಾಕ್ಷಿಗಳನ್ನು ಹಾಳು ಮಾಡಬಾರದು, ದೂರುದಾರರನ್ನು ಮುಜುಗರಕ್ಕೀಡುಮಾಡಬಾರದು ಅಥವಾ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಅನುಮತಿ ಇಲ್ಲದೆ ತೊರೆಯಬಾರದು ಎಂದು ಕೂಡ ಷರತ್ತು ವಿಧಿಸಿತು.