ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದ ಕಾರಣಕ್ಕಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿವು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೊಗ್ನೆ ಅವರೆದುರು ಶುಕ್ರವಾರ ಪ್ರಕರಣ ಬಂದಾಗ ಅವರು ಡಿಸೆಂಬರ್ 9 ರಂದು ಪಟ್ಟಿ ಮಾಡಲು ಆದೇಶಿಸಿದರು.
ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ವೈಭವ್ ಚೌರಾಸಿಯಾ ಅವರು ಸೆ. 11ರಂದು ನೀಡಿದ್ದ ಆದೇಶ ಪ್ರಶ್ನಿಸಿ ವಿಕಾಸ್ ತ್ರಿಪಾಠಿ ಅವರು ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
ಸೋನಿಯಾ ಅವರು 1983ರಲ್ಲಷ್ಟೇ ಭಾರತೀಯ ಪೌರತ್ವ ಪಡೆದರಾದರೂ, 1980ರಲ್ಲಿಯೇ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು ಎಂಬುದು ಅರ್ಜಿದಾರ ತ್ರಿಪಾಠಿ ಅವರ ಆಕ್ಷೇಪವಾಗಿತ್ತು. ಸೋನಿಯಾ ಅವರ ಹೆಸರನ್ನು 1980ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಯಿತು. ಆದರೆ 1982ರಲ್ಲಿ ತೆಗೆದುಹಾಕಲಾಯಿತು. ನಂತರ 1983ರಲ್ಲಿ ಮತ್ತೆ ಸೇರ್ಪಡೆ ಮಾಡಲಾಯಿತು. 1980ರಲ್ಲಿ ಮತದಾರರ ಪಟ್ಟಿಗೆ ಅವರ ಹೆಸರು ಸೇರ್ಪಡೆ ಮಾಡುವುದಕ್ಕಾಗಿ ಕೆಲವು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದ್ದು ಸಂಜ್ಞೇಯ ಅಪರಾಧ ಎಸಗಲಾಗಿದೆ ಎಂದು ಅವರು ಆಪಾದಿಸಿದ್ದರು. ಆದ್ದರಿಂದ, ಎಫ್ಐಆರ್ ದಾಖಲಿಸಲು ಆದೇಶ ನೀಡುವಂತೆ ಅವರು ಕೋರಿದ್ದರು.
ಅರ್ಜಿ ತಿರಸ್ಕರಿಸಿದ್ದ ನ್ಯಾ. ಚೌರಾಸಿಯಾ ಅವರು ನ್ಯಾಯಾಲಯ ಇಂತಹ ಪ್ರಕರಣಗಳ ವಿಚಾರಣೆಗೆ ಮುಂದಾದರೆ ಅದು ಸಾಂವಿಧಾನಿಕ ಪ್ರಾಧಿಕಾರಗಳಿಗೆ ಸ್ಪಷ್ಟವಾಗಿ ವಹಿಸಿಕೊಡಲಾದ ಅಧಿಕಾರದ ಅನಗತ್ಯ ಉಲ್ಲಂಘನೆಯಾಗಲಿದ್ದು ಸಂವಿಧಾನದ 329ನೇ ವಿಧಿಯ ಉಲ್ಲಂಘಿಸುತ್ತದೆ ಎಂದಿದ್ದರು.