ರಾಜ್ಯಸಭೆ
ರಾಜ್ಯಸಭೆ 
ಸುದ್ದಿಗಳು

ಜನಪ್ರತಿನಿಧಿಗಳ ಒತ್ತಡದಿಂದಾಗಿ ಪೊಲೀಸರು ಕೆಲವೊಮ್ಮೆ ಕಾನೂನು ಜಾರಿಗೊಳಿಸುವುದಿಲ್ಲ ಎಂಬುದು ಗೊತ್ತು: ಸುಪ್ರೀಂಕೋರ್ಟ್

Bar & Bench

ಜನಪ್ರತಿನಿಧಿಗಳ ಒತ್ತಡದಿಂದಾಗಿ ಪೊಲೀಸರು ಕೆಲವೊಮ್ಮೆ ಕಾನೂನು ಜಾರಿಗೊಳಿಸದ ಕಾರಣಕ್ಕೆ ಸಂಸತ್ ಸದಸ್ಯರು ಮತ್ತು ವಿಧಾನಸಭೆ ಸದಸ್ಯರ (ಸಂಸದರು ಮತ್ತು ಶಾಸಕರು) ವಿರುದ್ಧ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಕೋರಿ 2016ರಲ್ಲಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಹುತೇಕ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ನೆರವು ಕೇಳುತ್ತಿವೆ ಎಂದು ವಿಚಾರಣೆಯ ವೇಳೆ, ನ್ಯಾಯಾಲಯವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ ‘ಧನಸಹಾಯ ಮಾಡಲು ತೊಂದರೆ ಇಲ್ಲ’ ಎಂದು ಹೇಳಿದರು.

"ಸಂಬಂಧಪಟ್ಟ ಸಚಿವಾಲಯಗಳಿಗೆ ಸಲ್ಲಿಸಲು ಹೈಕೋರ್ಟ್‌ಗಳು ತಮ್ಮ ಶಿಫಾರಸು ಮತ್ತು ಕ್ರಿಯಾ ಯೋಜನೆಗಳನ್ನು ಸಲ್ಲಿಸಬೇಕಿರುವುದರಿಂದ ಪ್ರಕರಣವನ್ನು ಒಂದು ವಾರ ಅಥವಾ ಹತ್ತು ದಿನಗಳವರೆಗೆ ಮುಂದೂಡುತ್ತಿದ್ದೇವೆ."
ಸುಪ್ರೀಂ ಕೋರ್ಟ್

ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಂಸದರ ವಿರುದ್ಧ ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ಕ್ರಿಯಾ ಯೋಜನೆ ರೂಪಿಸುವಂತೆ ಸೆಪ್ಟೆಂಬರ್ 16ರಂದು ನ್ಯಾಯಾಲಯ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿತ್ತು. ಅಮಿಕಸ್ ಕ್ಯೂರಿಯಾಗಿರುವ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರಿಗೆ ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಸಲ್ಲಿಸುವಂತೆ ನ್ಯಾಯಾಲಯಗಳಿಗೆ ಸೂಚಿಸಲಾಗಿದೆ.

ಮಾರ್ಚ್ 2020 ರ ವೇಳೆಗೆ ಸಂಸದರು ಮತ್ತು ಶಾಸಕರ ವಿರುದ್ಧ 4,442 ಪ್ರಕರಣಗಳು ಬಾಕಿ ಉಳಿದಿವೆ ಎಂದು ಹನ್ಸಾರಿಯಾ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ವಿವಿಧ ಹೈಕೋರ್ಟ್‌ಗಳಿಂದ ಮಾಹಿತಿ ಪಡೆದ ನಂತರ ಸಂಗ್ರಹಿಸಲಾದ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಕರಣಗಳ ಸಂಖ್ಯೆ ಇದೀಗ 4,859ಕ್ಕೆ ಏರಿಕೆಯಾಗಿದೆ.

ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ವರದಿಯಲ್ಲಿ, "ಸಂಸದರು / ಶಾಸಕರಿಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಸಂಬಂಧ ದೇಶದೆಲ್ಲೆಡೆ ಯಾವುದೇ ಏಕರೂಪತೆಯಿಲ್ಲ" ಎಂದು ಹನ್ಸಾರಿಯಾ ಗಮನಸೆಳೆದಿದ್ದರು.