Roopa, Rohini & Karnataka HC 
ಸುದ್ದಿಗಳು

ಸಿಡಿಆರ್‌ ಕೋರಿಕೆ ಅಪ್ರಸ್ತುತ, ಅನಗತ್ಯ; ರೋಹಿಣಿ ಸಿಂಧೂರಿ ಸಿಡಿಆರ್‌ ಕೋರಿದ್ದ ರೂಪಾ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

"ರೂಪಾ ಸಲ್ಲಿಸಿರುವ ಹಾಲಿ ಅರ್ಜಿಯು ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತೊಂದು ತಂತ್ರವಾಗಿದೆ. ಸಿಡಿಆರ್‌ ಹಾಜರುಪಡಿಸುವ ನೆಪದಲ್ಲಿ ರೂಪಾ ಅವರು ವಿಚಾರಣೆಯನ್ನು ವಿಳಂಬಗೊಳಿಸಿದ್ದಾರೆ" ಎಂದು ನ್ಯಾಯಾಲಯವು ತೀವ್ರ ಅಸಮಾಧಾನ ದಾಖಲಿಸಿದೆ.

Siddesh M S

ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಿರ್ದಿಷ್ಟ ಮೊಬೈಲ್‌ ಸಂಖ್ಯೆಯ ಕರೆ ದತ್ತಾಂಶ ದಾಖಲೆ (ಸಿಡಿಆರ್‌) ಕೋರಿರುವುದು ಅಪ್ರಸ್ತುತ ಮತ್ತು ಅನಗತ್ಯ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು, ಈ ಸಂಬಂಧ ರೂಪಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ, ರೂಪಾ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಆಕ್ಷೇಪಾರ್ಹವಾದ ಫೇಸ್‌ಬುಕ್‌ ಪೋಸ್ಟ್‌ ಹಿನ್ನೆಲೆಯಲ್ಲಿ ರೋಹಿಣಿ ಅವರು ರೂಪಾ ವಿರುದ್ಧ ಹೂಡಿರುವ ಮಾನಹಾನಿ ದಾವೆಯ ಭಾಗವಾಗಿ ನಿರ್ದಿಷ್ಟ ಮೊಬೈಲ್‌ ಸಂಖ್ಯೆಯ ಸಿಡಿಆರ್‌ ಹಾಜರುಪಡಿಸಲು ಟೆಲಿಕಾಂ ಕಂಪನಿಗಳಿಗೆ ಆದೇಶಿಸಬೇಕು ಎಂದು ಕೋರಿ ರೂಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠವು ವಜಾಗೊಳಿಸಿದ್ದು, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮಾಡಿರುವ ಆದೇಶವನ್ನು ಎತ್ತಿ ಹಿಡಿದಿದೆ.

"ಸಿಡಿಆರ್‌ ಪಡೆಯಲು ನಿರ್ದೇಶನ ಕೋರಿ ರೂಪಾ ಸಲ್ಲಿಸಿರುವ ಹಾಲಿ ಅರ್ಜಿಯು ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತೊಂದು ತಂತ್ರವಾಗಿದೆ. ಸಿಡಿಆರ್‌ ಹಾಜರುಪಡಿಸುವ ನೆಪದಲ್ಲಿ ರೂಪಾ ಅವರು ವಿಚಾರಣೆಯನ್ನು ವಿಳಂಬಗೊಳಿಸಿದ್ದಾರೆ" ಎಂದು ನ್ಯಾಯಾಲಯವು ತೀವ್ರ ಅಸಮಾಧಾನ ದಾಖಲಿಸಿದೆ.

"ರೂಪಾ ಅವರು ಸಿಡಿಆರ್‌ ಹಾಜರುಪಡಿಸಲು ನಿರ್ದೇಶನ ಕೋರಿರುವುದು ದೋಷಪೂರಿತವಾಗಿದ್ದು, ಬಾಕಿ ಇರುವ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ರೋಹಿಣಿ ಅವರ ಬಗ್ಗೆ ರೂಪಾ ಆಕ್ಷೇಪಾರ್ಹವಾದ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿರುವುದು, ಐಪಿಎಸ್‌ ಅಧಿಕಾರಿಯೊಬ್ಬರ ದುರ್ಮರಣಕ್ಕೆ ರೋಹಿಣಿ ಕಾರಣ ಎಂದಿರುವುದು, ರೋಹಿಣಿ ಅವರ ಆಕ್ಷೇಪಾರ್ಹವಾದ ಚಿತ್ರಗಳನ್ನು ಸಾರ್ವಜನಿಕಗೊಳಿಸುವ ಮೂಲಕ ಅವರನ್ನು ಕೆಟ್ಟದಾಗಿ ಬಿಂಬಿಸಿರುವ ಆರೋಪವಿದೆ. ಇದು ಮಾನಹಾನಿಯ ವ್ಯಾಪ್ತಿಗೆ ಬರಲಿದೆ" ಎಂದು ನ್ಯಾಯಾಲಯ ಹೇಳಿದೆ.

ಮುಂದುವರಿದು, "ರೋಹಿಣಿ ಅವರ ಮೊಬೈಲ್‌ ಸಂಖ್ಯೆಯ ಎರಡು ವರ್ಷಗಳ ಅವಧಿಯ ಸಿಡಿಆರ್‌ ಕೇಳಿರುವುದಕ್ಕೂ ರೂಪಾ ಅವರು ಮಾಡಿರುವ ಫೇಸ್‌ಬುಕ್‌ ಪೋಸ್ಟ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಿಡಿಆರ್‌ ಹಾಜರುಪಡಿಸಲು ರೂಪಾ ನಿರ್ದೇಶನ ಕೋರಿರುವುದು ಹಿರಿಯ ವಕೀಲರು ಹೇಳಿರುವಂತೆ ವಿಚಾರಣೆಯ ಹಾದಿ ತಪ್ಪಿಸುವ ಕ್ರಮವಾಗಿದೆ. ಒಂದೊಮ್ಮೆ ರೋಹಿಣಿ ಅವರು ಮುನೀಶ್‌ ಮೌದ್ಗಿಲ್‌ (ರೂಪಾ ಪತಿ) ಅವರ ಜೊತೆ ಸಂಪರ್ಕದಲ್ಲಿದ್ದರು ಎಂದುಕೊಂಡರೂ ಮುನೀಶ್‌ ಅವರ ದಾಖಲೆಗಳನ್ನು ಹಾಜರುಪಡಿಸಿ, ಅವರನ್ನು ಡಿಫೆನ್ಸ್‌ ಸಾಕ್ಷಿಯಾಗಿ ವಿಚಾರಣೆಗೆ ರೂಪಾ ಒಳಪಡಿಸುವುದನ್ನು ಯಾರೂ ತಡೆಯುತ್ತಿಲ್ಲ ಎಂಬ ವಾದದಲ್ಲಿ ಬಲವಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರೋಹಿಣಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು "ರೂಪಾ ಅವರು ರೋಹಿಣಿ ವಿರುದ್ಧ ಫೇಸ್‌ಬುಕ್‌ನಲ್ಲಿ ಹಲವು ಮಾನಹಾನಿ ಪೋಸ್ಟ್‌ಗಳನ್ನು ಹಾಕಿದ್ದನ್ನು ಆಧರಿಸಿ ಖಾಸಗಿ ದೂರು ದಾಖಲಿಸಲಾಗಿದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ರೂಪಾ ಅವರು ಪದೇಪದೇ ವಿಚಾರಣೆಯನ್ನು ವಿಳಂಬಗೊಳಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರೋಹಿಣಿ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ರೂಪಾಗೆ ಅವಕಾಶ ನಿರಾಕರಿಸಿತ್ತು. ಅಂತಿಮವಾಗಿ ರೂಪಾಗೆ 10 ಸಾವಿರ ರೂಪಾಯಿ ದಂಡ ವಿಧಿಸಿ, ರೋಹಿಣಿ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ಕೊನೆಯ ಒಂದು ಅವಕಾಶವನ್ನು ಹೈಕೋರ್ಟ್‌ನ ಸಮನ್ವಯ ಪೀಠ ನೀಡಿತ್ತು. ಹಾಲಿ ದಾವೆಯು ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತೊಂದು ಪ್ರಯತ್ನವಾಗಿದ್ದು, ಕಾನೂನಿನ ಪರಿಣಾಮ ಎದುರಿಸುವುದರಿಂದ ತಪ್ಪಿಸಿಕೊಳ್ಳಲು ರೂಪಾ ಈ ಯತ್ನ ಮಾಡಿದ್ದಾರೆ" ಎಂದಿದ್ದರು.

"ವ್ಯಕ್ತಿಯೊಬ್ಬರ ಸಿಡಿಆರ್‌ ನೀಡಲು ನಿರ್ದೇಶನ ಕೋರುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಲಿದೆ. ಸಿಡಿಆರ್‌ನಲ್ಲಿ ಕರೆಯ ಮೆಟಾಡೇಟಾ ಇರುತ್ತದೆಯೇ ವಿನಾ ಸಂಭಾಷಣೆಯ ವಿವರ ಇರುವುದಿಲ್ಲ. ತನ್ನ ಪತಿ ಮುನೀಶ್‌ಗೆ ರೋಹಿಣಿ ಕರೆ ಮಾಡಿದ್ದರು ಎಂಬುದನ್ನು ಪತ್ತೆ ಮಾಡುವುದು ರೂಪಾ ಅವರ ಸೀಮಿತ ಗುರಿಯಾಗಿದೆ ಎನಿಸುತ್ತದೆ. ಇದಕ್ಕೆ ಬದಲಾಗಿ ರೂಪಾ ಅವರು ತನ್ನ ಪತಿ ಮುನೀಶ್‌ ಅವರ ಸಿಡಿಆರ್‌ ಪಡೆದು, ಅವರನ್ನೇ ತನ್ನ ಡಿಫೆನ್ಸ್‌ ಸಾಕ್ಷಿಯನ್ನಾಗಿ ಪರಿಶೀಲನೆಗೆ ಒಳಪಡಿಸುವುದು ಉತ್ತಮ. ರೂಪಾ ಈಗ ಕೋರುತ್ತಿರುವ ಸಿಡಿಆರ್‌ ಮತ್ತು ಆಕೆ ಫೇಸ್‌ಬುಕ್‌ನಲ್ಲಿ ರೋಹಿಣಿ ವಿರುದ್ಧ ಆರೋಪಿಸಿದ್ದ ಪೋಸ್ಟ್‌ಗಳಿಗೂ ಯಾವುದೇ ಸಂಬಂಧವಿಲ್ಲ" ಎಂದು ವಾದಿಸಿದ್ದರು.

ರೂಪಾ ಪರ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು "ಪಾಟೀ ಸವಾಲಿನ ವೇಳೆ ದೂರುದಾರೆಯು (ರೋಹಿಣಿ ಸಿಂಧೂರಿ) ಮುನೀಶ್‌ ಮೌದ್ಗಿಲ್‌ (ರೂಪಾ ಪತಿ) ಅವರ ಜೊತೆ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಮುನೀಶ್‌ ಫೋನ್‌ ನಂಬರ್‌ ತನಗೆ ತಿಳಿದಿಲ್ಲ ಎಂದು ರೋಹಿಣಿ ಹೇಳಿದ್ದಾರೆ. ಹೀಗಾಗಿ, ರೋಹಿಣಿ ಸಿಂಧೂರಿ ಅವರ ಸುಳ್ಳನ್ನು ಜಾಹೀರುಪಡಿಸಲು ಸಿಡಿಆರ್‌ ಹಾಜರುಪಡಿಸಲು ನಿರ್ದೇಶಿಸುವುದು ಅಗತ್ಯ. ರೋಹಿಣಿ ಅವರು ನಿರಂತರವಾಗಿ ತನ್ನ ಪತಿ ಮನೀಶ್‌ ಮೌದ್ಗಿಲ್‌ ಜೊತೆ ಸಂಪರ್ಕದಲ್ಲಿದ್ದರು ಎಂಬುದನ್ನು ತೋರಿಸಲು ಸಿಡಿಆರ್‌ ಅಗತ್ಯವಾಗಿದೆ. ಈ ಸಿಡಿಆರ್‌ ಅನ್ನು ನಿರ್ದಿಷ್ಟ ಸಮಯದ ನಂತರ ಟೆಲಿಕಾಂ ಕಂಪನಿಗಳು ಡಿಲೀಟ್‌ ಮಾಡುವುದರಿಂದ ಅದನ್ನು ಸಂಗ್ರಹಿಸಿಡಲು ನಿರ್ದೇಶಿಸಬೇಕು" ಎಂದು ಕೋರಿದ್ದರು.

"ತಮ್ಮನ್ನು ಸಮರ್ಥಿಸಿಕೊಳ್ಳಲು ರೂಪಾ ಅವರಿಗೆ ಸಿಡಿಆರ್‌ ಅತ್ಯಂತ ಮುಖ್ಯ. ಹಾಲಿ ದಾವೆ ಹೂಡುವವರೆಗೂ ರೋಹಿಣಿ ಅವರು ಮುನೀಶ್‌ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಸಿಡಿಆರ್‌ ಕರೆ ದಾಖಲೆಯನ್ನಲ್ಲದೇ ಎಲ್ಲಿಂದ ಕರೆ ಮಾಡಲಾಗಿದೆ ಎಂಬುದನ್ನೂ ತೋರಿಸಲಿದೆ. ಇವರೆಡನ್ನೂ ತುಲನೆ ಮಾಡಿ ನೋಡಿದಾಗ ನಿರಂತರವಾಗಿ ಯಾವ ಸ್ಥಳದಿಂದ ಆ ಸಂಖ್ಯೆ ಕರೆ ಬಂದಿದೆ ಎಂಬುದು ಬಹಿರಂಗವಾಗಲಿದೆ. ನ್ಯಾಯಯುತ ವಿಚಾರಣೆಯ ದೃಷ್ಟಿಯಿಂದ ಸಿಡಿಆರ್‌ ಪಡೆಯಲು ನಿರ್ದೇಶಿಸಬೇಕು. ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರೂಪಾ ಅವರ ಅರ್ಜಿ ವಜಾ ಮಾಡುವಾಗ ಸಿಡಿಆರ್‌ ಪ್ರಸ್ತುತವಲ್ಲ ಎಂದಿದೆ. ಆದರೆ, ಅದು ಹಾಲಿ ಪ್ರಕರಣಕ್ಕೆ ಏಕೆ ಅಗತ್ಯವಿಲ್ಲ ಎಂಬುದನ್ನು ಹೇಳಿಲ್ಲ" ಎಂದು ಆಕ್ಷೇಪಿಸಿದ್ದರು. 

Roopa Moudgil Vs Rohini Sindhuri.pdf
Preview