ಕೊಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ಗೆ ಮರಣದಂಡನೆ ವಿಧಿಸುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ನಿರ್ವಹಿಸಬಹುದೇ ಎಂಬ ಕುರಿತು ಕಲ್ಕತ್ತಾ ಹೈಕೋರ್ಟ್ ಜನವರಿ 27ರಂದು ನಿರ್ಧರಿಸಲಿದೆ.
ಪ್ರಕರಣವನ್ನು ನ್ಯಾಯಮೂರ್ತಿಗಳಾದ ದೇಬಂಗ್ಶು ಬಸಾಕ್ ಮತ್ತು ಎಂ ಡಿ ಶಬ್ಬರ್ ರಶೀದಿ ಅವರಿದ್ದ ಪೀಠ ವಿಚಾರಣೆ ನಡೆಸಲಿದೆ. ಆರೋಪಿಯನ್ನು ಪ್ರತಿನಿಧಿಸುವ ವಕೀಲರಿಗೆ ಆತನನ್ನು ಭೇಟಿಯಾಗಲು ಹಾಗೂ ವಕಾಲತ್ನಾಮಾ ಪಡೆಯಲು ಅವಕಾಶ ಮಾಡಿಕೊಟ್ಟಿತು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಸೋಮವಾರ ರಾಯ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಆದರೆ ಅಪರಾಧ ಕ್ರೂರ ಮತ್ತು ಪೈಶಾಚಿಕವಾಗಿದ್ದರೂ ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂಬ ವರ್ಗಕ್ಕೆ ಸೇರದೇ ಇರುವುದರಿಂದ ಮರಣ ದಂಡನೆ ವಿಧಿಸಲಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ನಿನ್ನೆ (ಜನವರಿ 21) ರಾಜ್ಯ ಸರ್ಕಾರ ಮರಣ ದಂಡನೆ ವಿಧಿಸುವಂತೆ ಕೋರಿ ಮನವಿ ಸಲ್ಲಿಸುವುದಾಗಿ ತಿಳಿಸಿತು. ಇದಕ್ಕೂ ಮುನ್ನ ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದರು.
ಪ್ರಕರಣ ಅಪರೂಪದಲ್ಲೇ ಅಪರೂಪದ ವರ್ಗಕ್ಕೆ ಸೇರುವುದಿಲ್ಲ ಎಂದು ನ್ಯಾಯಾಲಯ ತೀರ್ಪಿತ್ತಿರುವುದು ತನಗೆ ಆಘಾತ ತಂದಿದೆ. ಇದು ನಿಜಕ್ಕೂ ಅಪರೂಪದಲ್ಲಿಯೇ ಅಪರೂಪದ ಪ್ರಕರಣ ಎಂದು ನನಗೆ ಮನವರಿಕೆಯಾಗಿದೆ. ಅಪರೂಪದ ಪ್ರಕರಣವಲ್ಲ ಎಂಬ ತೀರ್ಮಾನಕ್ಕೆ ತೀರ್ಪು ಹೇಗೆ ಬರಲು ಸಾಧ್ಯ? ಎಂದು ಮಮತಾ ಪ್ರಶ್ನಿಸಿದ್ದರು.
ಕುತೂಹಲಕರ ಸಂಗತಿ ಎಂದರೆ ಕೊಲ್ಕತ್ತಾ ಪೊಲೀಸರಿಂದ ಸಿಬಿಐಗೆ ಕಲ್ಕತ್ತಾ ಹೈಕೋರ್ಟ್ ಪ್ರಕರಣದ ತನಿಖೆಯನ್ನು ವರ್ಗಾಯಿಸಿದ್ದು ಪ್ರಕರಣದ ತನಿಖೆ ಮಾಡಿ, ದಾವೆ ನಡೆಸಿರುವುದು ಸಿಬಿಐ ವಿನಾ ರಾಜ್ಯ ಪೊಲೀಸರಲ್ಲ.