Rakul Preet
Rakul Preet 
ಸುದ್ದಿಗಳು

ನಟಿ ರಕುಲ್ ವಿರುದ್ಧ ಆಧಾರ ರಹಿತ ಆರೋಪ: ಮಾಧ್ಯಮಗಳು ಮಾರ್ಗಸೂಚಿಗಳನ್ನು ಪಾಲಿಸುವ ಭರವಸೆ ಇದೆ ಎಂದ ದೆಹಲಿ ಹೈಕೋರ್ಟ್

Bar & Bench

ರಿಯಾ ಚಕ್ರವರ್ತಿ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಕುಲ್ ಪ್ರೀತ್ ಅವರ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಮಾಧ್ಯಮ ಸಂಸ್ಥೆಗಳು ಸಂಯಮದಿಂದ ವರ್ತಿಸುತ್ತವೆ ಮತ್ತು ಕಾರ್ಯಕ್ರಮ ಸಂಹಿತೆ ಮತ್ತಿತರ ಮಾರ್ಗಸೂಚಿಗಳನ್ನು ಪಾಲಿಸುತ್ತವೆ ಎಂಬ ಆಶಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಗುರುವಾರ ಈ ಆದೇಶ ನೀಡಿದೆ. ಈ ಸಂಬಂಧ ಕೇಂದ್ರ ಸರ್ಕಾರ, ಪ್ರಸಾರ್ ಭಾರತಿ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್‌ಗೆ ನೋಟಿಸ್ ಜಾರಿಗೊಳಿಸಿದೆ ಮತ್ತು ಮಧ್ಯಂತರ ಕ್ರಮದ ರೂಪದಲ್ಲಿ ಯಾವುದೇ ಮಧ್ಯಂತರ ನಿರ್ದೇಶನ ನೀಡುವುದೂ ಸೇರಿದಂತೆ ಈ ಸಂಸ್ಥೆಗಳು ರಕುಲ್ ಪ್ರೀತ್ ಅವರ ಅರ್ಜಿಯಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.

“ರಿಯಾ ಚಕ್ರವರ್ತಿ ಮಾದಕ ವಸ್ತು ಪ್ರಕರಣದಲ್ಲಿ ಎನ್‌ಸಿಬಿ ಎದುರು ರಕುಲ್ ಪ್ರೀತ್ ಹೆಸರನ್ನು ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ಮಾಧ್ಯಮ ಸಂಸ್ಥೆಗಳು ಮತ್ತು ಟಿವಿ ಚಾನೆಲ್‌ಗಳು ಮಾನಹಾನಿಕರ ಮತ್ತು ಉದ್ದೇಶಪೂರ್ವಕ ಸುಳ್ಳು ವರದಿಗಳನ್ನು ಪ್ರಸಾರ ಮಾಡಿದ್ದಾರೆ ಎಂಬುದಾಗಿ ರಕುಲ್ ಪರ ವಕೀಲ ಅಮನ್ ಹಿಂಗೋರನಿ ತಿಳಿಸಿದರು.

“ನಾನು ಒಂದು ವಾಹಿನಿ ಕುರಿತು ಹೇಳುತ್ತಿಲ್ಲ. ನಾನು ಹೇಳುತ್ತಿರುವುದು ಯುಕ್ತ ವರದಿಗಾರಿಕೆ ಕುರಿತಂತೆ. ಹೇಳಿಕೆ ಹಿಂಪಡೆದಿರುವುದನ್ನು ವರದಿಗಳು ತೋರಿಸುವುದಿಲ್ಲ”
ನಟಿ ರಕುಲ್ ಪರ ವಕೀಲ ಅಮನ್ ಹಿಂಗೋರನಿ

ಸುಳ್ಳು ವರದಿಗಳ ಪರಿಣಾಮವಾಗಿ, ಈಗಾಗಲೇ ಮಾಡಿಕೊಂಡ ಚಿತ್ರೀಕರಣ ಒಪ್ಪಂದಗಳಿಂದ ರಕುಲ್ ಪ್ರೀತ್ ಅವರನ್ನು ಕೈಬಿಡಲಾಗುತ್ತಿದೆ. ಚಲನಚಿತ್ರಗಳಲ್ಲಿ ರಕುಲ್ ಧೂಮಪಾನ, ಮದ್ಯಪಾನ ಮಾಡಿರುವಂತಹ ಸನ್ನಿವೇಶಗಳನ್ನು ಕೆಲ ಚಾನೆಲ್ಲುಗಳು ಉದ್ದೇಶಪೂರ್ವಕವಾಗಿ ತೋರಿಸಿದವು. ರಿಯಾ ಚಕ್ರವರ್ತಿ ಜೊತೆ ನಂಟು ಇದೆ ಎಂದು ತೋರಿಸಲು ಫೋಟೊಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದರು.

ತಪ್ಪುಮಾಡುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ಮತ್ತು ಸ್ವಯಂ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ, ಪ್ರಸಾರ ಭಾರತಿ, ಭಾರತೀಯ ಪತ್ರಿಕಾ ಮಂಡಳಿ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್‌ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಅವರು ಕೋರಿದರು.

ಮಧ್ಯಂತರ ಪರಿಹಾರ ರೂಪದಲ್ಲಿ ರಿಯಾ ಚಕ್ರವರ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಕುಲ್ ಪ್ರೀತ್ ವಿರುದ್ಧ ಯಾವುದೇ ಸುದ್ದಿ ಪ್ರಸಾರ/ ಪ್ರಕಟಣೆ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು.

ರಕುಲ್ ಪ್ರೀತ್ ಯಾವುದೇ ನಿರ್ದಿಷ್ಟ ಟಿವಿ ಚಾನೆಲ್ ಅಥವಾ ಮೀಡಿಯಾ ಹೌಸ್ ಅನ್ನು ಉಲ್ಲೇಖಿಸದಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಚಾವ್ಲಾ ದುರದೃಷ್ಟವಶಾತ್, ಮಾಧ್ಯಮಗಳು ಈ ದಿನಗಳಲ್ಲಿ ಅಂಕೆಯಿಲ್ಲದಂತಾಗಿವೆ. ಆದರೆ ಏನು ತಾನೇ ಮಾಡಲು ಸಾಧ್ಯ’ ಎಂದು ಹೇಳಿದರು.

ಮಾಧ್ಯಮಗಳನ್ನು ತಮಾಷೆ ಮಾಡಲು ಸಾಧ್ಯವಿಲ್ಲ ಎಂಬ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರ ಮಾತುಗಳನ್ನು ಒಪ್ಪಿದ ನ್ಯಾಯಾಲಯ ವ್ಯಕ್ತಿಯ ಖ್ಯಾತಿಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಮಾಧ್ಯಮಗಳು ‘ಒಂದು ರೀತಿಯ ಸಂಯಮ’ ತೋರಬೇಕು ಎಂದು ಅಭಿಪ್ರಾಯಪಟ್ಟಿತು.

ವಿಚಾರಣೆಯ ಸಮಯದಲ್ಲಿ, ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್‌ನ ವಕೀಲ ರಾಹುಲ್ ಭಾಟಿಯಾ, ಮಾಧ್ಯಮಗಳು ಸ್ವಯಂ-ನಿಯಂತ್ರಕ ಸಂಸ್ಥೆಗಳಾಗಿದ್ದು, ದೂರು ನಿರ್ವಹಣಾ ವ್ಯವಸ್ಥೆ ಹೊಂದಿವೆ ಎಂದು ಮಾಹಿತಿ ನೀಡಿದರು.