ಸುದ್ದಿಗಳು

ಸಾಬರಮತಿ ಆಶ್ರಮ ಅಬಾಧಿತ, ಸುತ್ತಣ ಭೂಮಿಯನ್ನಷ್ಟೇ ಮಾರ್ಪಡಿಸಲಾಗುವುದು: ಗುಜರಾತ್ ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ವಿವರಣೆ

Bar & Bench

ಸಾಬರಮತಿ ಆಶ್ರಮದ ಮರು ಅಭಿವೃದ್ಧಿ ಪ್ರಶ್ನಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್‌ ಗುರುವಾರ ವಿಲೇವಾರಿ ಮಾಡಿದೆ.

ಅರ್ಜಿದಾರರು ಪ್ರಶ್ನಿಸಿರುವ ಆಶ್ರಮವನ್ನು ಮರು ಅಭಿವೃದ್ಧಿ ಮಾಡುವ ಸರ್ಕಾರದ ಆದೇಶವು ಮಹಾತ್ಮ ಗಾಂಧಿ ಅವರ ಚರಿತ್ರೆ ಮತ್ತು ಅವರ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಸಂರಕ್ಷಿಸುವ ಉದ್ದೇಶ ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಪ್ರಸ್ತಾವಿತ ಯೋಜನೆಯಿಂದ ಆಶ್ರಮಕ್ಕೆ ತೊಂದರೆಯಾಗದು. ಆಶ್ರಮದ ಸುತ್ತಲಿನ 55 ಎಕರೆ ಭೂಮಿಯನ್ನು ಮಾತ್ರ ಪುನರಾಭಿವೃದ್ಧಿ ಮಾಡಲಾಗುತ್ತದೆ ಎಂಬ ಗುಜರಾತ್‌ ಸರ್ಕಾರದ ವಾದವನ್ನು ನ್ಯಾಯಾಲಯ ಪರಿಗಣಿಸಿತು. ಸಾಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್‌ನ ಪ್ರತಿನಿಧಿಗಳನ್ನು ಆಶ್ರಮದ ಮರು ಅಭಿವೃದ್ಧಿ ಯೋಜನೆಯ ಉಸ್ತುವಾರಿ ಸಮಿತಿಯು ಒಳಗೊಂಡಿರವುದರಿಂದ ಅರ್ಜಿದಾರರು ಹೇಳಿರುವಂತೆ ಏಕಪಕ್ಷೀಯ ನಿರ್ಧಾರಗಳ ಆತಂಕ ಎದುರಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ಬೇರೆ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸುವಂತೆ ತಿಳಿಸಿದ ಪೀಠ ಪ್ರಕರಣವನ್ನು ವಿಲೇವಾರಿ ಮಾಡಿತು. ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಕಮಲ್‌ ತ್ರಿವೇದಿ ವಾದಿಸಿದರು.