Udhayanidhi Stalin
Udhayanidhi Stalin 
ಸುದ್ದಿಗಳು

ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ಸ್ಟಾಲಿನ್ ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ

Bar & Bench

ಸನಾತನ ಧರ್ಮಕ್ಕೆ ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಶುಕ್ರವಾರ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರಿನ ವಿ ಪರಮೇಶ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯದ ನ್ಯಾಯಾಧೀಶರಾದ ಜೆ ಪ್ರೀತ್‌ ಅವರು ಈ ಕುರಿತಾದ ಆದೇಶ ಮಾಡಿದ್ದಾರೆ.

ತಮಿಳುನಾಡಿನ ಯುವ ಜನ ಕ್ಷೇಮಾಭಿವೃದ್ಧಿ, ಕ್ರೀಡೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್‌, ತಮಿಳುನಾಡಿನ ಬರಹಗಾರ ಎಸ್‌ ವೆಂಕಟೇಶ್‌, ತಮಿಳುನಾಡಿನ ಪ್ರಗತಿಪರ ಬರಹಗಾರರು ಮತ್ತು ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಮಧುಕರ್‌ ರಾಮಲಿಂಗಂ ಮತ್ತು ಸಂಘದ ಕಾರ್ಯದರ್ಶಿ ಆದವನ್‌ ಡಿಚನ್ಯ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 153, 298, 500 ಜೊತೆಗೆ 34ರ ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಕಚೇರಿಗೆ ನಿರ್ದೇಶಿಸಲಾಗಿದೆ. ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿ, ಮಾರ್ಚ್‌ 4ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಪ್ರಕರಣದ ಹಿನ್ನೆಲೆ: 2023ರ ಸೆಪ್ಟೆಂಬರ್‌ 4ರಂದು ಚೆನ್ನೈನ ತೇನಂಪೇಟೆಯಲ್ಲಿ ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಸನಾತನ ಧರ್ಮವನ್ನು ಡೆಂಗ್ಯು, ಮಲೇರಿಯಾ ಹಾಗೂ ಕೊರೊನಾಕ್ಕೆ ಹೋಲಿಕೆ ಮಾಡಿ ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಹೇಳಿದ್ದರು. ಈ ಸುದ್ದಿಯನ್ನು ವಿಜಯ ತರಂಗ ಕನ್ನಡ ಪತ್ರಿಕೆ ಪ್ರಕಟಿಸಿತ್ತು. ಇದನ್ನು ಆಧರಿಸಿ ಪರಮೇಶ ಅವರು ಖಾಸಗಿ ದೂರು ದಾಖಲಿಸಿದ್ದರು. ದೂರುದಾರರ ಪರವಾಗಿ ವಕೀಲ ಧರ್ಮಪಾಲ ವಾದ ಮಂಡಿಸಿದ್ದರು.