ಸುದ್ದಿಗಳು

ಸ್ಯಾಂಡಲ್‌ವುಡ್ ಮಾದಕವಸ್ತು ಪ್ರಕರಣ: ಇಂದು ಮತ್ತು ನಾಳೆ ನಟಿಯರ ಜಾಮೀನು ಅರ್ಜಿ ವಿಚಾರಣೆ

Bar & Bench

ಸ್ಯಾಂಡಲ್‌ವುಡ್ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಬೇಕೆಂದು ಕೋರಿ ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ಕ್ರಮವಾಗಿ ಅ. ಅ. 22 ಮತ್ತು 23ರಂದು ನಡೆಯಲಿದೆ.

ಸಂಜನಾ ಗಲ್ರಾನಿ ಕಳೆದ 50 ದಿನಗಳಿಂದ ಪೊಲೀಸರ ವಶದಲ್ಲಿದ್ದಾರೆ ಎಂದಿದ್ದ ಆರೋಪಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ವಿಶೇಷ ಅಭಿಯೋಜಕರು ಮತ್ತಷ್ಟು ಕಾಲಾವಕಾಶ ಕೋರಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೈಕೋರ್ಟ್‌ ಗುರುವಾರಕ್ಕೆ ವಿಚಾರಣೆ ಮುಂದೂಡಿತ್ತು.

ರಾಗಿಣಿ ಅವರಿಂದ ಮಾದಕವಸ್ತುವನ್ನು ವಶಪಡಿಸಿಕೊಂಡಿರಲಿಲ್ಲ ಮತ್ತು ಅವರು ಮಾದಕವಸ್ತು ಬಳಸುತ್ತಿರಲಿಲ್ಲ ಹೀಗಾಗಿ ಅವರನ್ನು ಆಪಾದಿತರನ್ನಾಗಿ ಮಾಡಲು ಸಾಧ್ಯ ಇಲ್ಲ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತಿದೆ. ರಾಗಿಣಿ ಅವರ ಪರವಾಗಿ ವಕೀಲ ಕಲ್ಯಾಣ್ ಕೃಷ್ಣ ವಾದ ಮಂಡಿಸಲಿದ್ದಾರೆ.

ಮತ್ತೊಬ್ಬ ಆರೋಪಿ ರಾಜಕಾರಣಿ ಜೀವರಾಜ್‌ ಆಳ್ವ ಅವರ ಪುತ್ರ ಆದಿತ್ಯ ಆಳ್ವ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಿಸಿಬಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು ಪ್ರಕರಣದ ವಿಚಾರಣೆ ನ. ನವೆಂಬರ್ 13ರಂದು ನಡೆಯಲಿದೆ. ಆಳ್ವ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಮತ್ತು ಅಜಯ್‌ ಕಡ್ಕೋಳ್‌ ಹಾಜರಾಗಲಿದ್ದಾರೆ.

ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲಾಗಿದ್ದ ಸ್ವಯಂಪ್ರೇರಿತ ಮೊಕದ್ದಮೆ ಆಧಾರದಲ್ಲಿ ಇಬ್ಬರೂ ನಟಿಯರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ನಂತರ ಆದಿತ್ಯ ಆಳ್ವ ತಲೆಮರಿಸಿಕೊಂಡಿದ್ದರು.