Satyajit Ray and Delhi HC
Satyajit Ray and Delhi HC 
ಸುದ್ದಿಗಳು

ಸತ್ಯಜಿತ್ ರೇ ಅವರೇ ʼನಾಯಕ್ʼ ಚಿತ್ರದ ಮೊದಲ ಹಕ್ಕುದಾರ: ಕಾದಂಬರಿ ಮಾಡುವ ಹಕ್ಕು ಅವರೊಂದಿಗೆ ಇದೆ ಎಂದ ದೆಹಲಿ ಹೈಕೋರ್ಟ್

Bar & Bench

ದಶಕಗಳ ಹಿಂದೆ ಅಂದರೆ 1966ರಲ್ಲಿ ತೆರೆಕಂಡಿದ್ದ ‘ನಾಯಕ್ʼ ಬಂಗಾಳಿ ಚಲನಚಿತ್ರದ ಮೊದಲ ಹಕ್ಕುಸ್ವಾಮ್ಯ ಒಡೆಯ, ಚಿತ್ರಕ್ಕೆ ಚಿತ್ರಕತೆ ಬರೆದ ಸಿನಿಜಗತ್ತಿನ ದಂತಕತೆ ಸತ್ಯಜಿತ್‌ ರೇ ಅವರೇ ಆಗಿದ್ದಾರೆ ಎಂದು ದೆಹಲಿ ಹೈಕೋರ್ಟ್‌ ಮಂಗಳವಾರ ಹೇಳಿದೆ.

ಹೀಗಾಗಿ ಅವರಿಗೆ ಮಾತ್ರ ಚಿತ್ರಕತೆಯನ್ನು ಕಾದಂಬರಿ ರೂಪಕ್ಕೆ ತರುವ ಹಕ್ಕಿದ್ದು ಅವರು ತೀರಿಕೊಂಡಿರುವುದರಿಂದ ಅವರ ಮಗ ಮತ್ತು ಯಾರು ಹಕ್ಕು ಹೊಂದಿದ್ದಾರೋ ಅವರು ಈ ಹಕ್ಕನ್ನು ಚಲಾಯಿಸಬಹುದು ಎಂದು ನ್ಯಾ. ಸಿ ಹರಿಶಂಕರ್‌ ತೀರ್ಪಿನಲ್ಲಿ ತಿಳಿಸಿದ್ದಾರೆ.

ಆದ್ದರಿಂದ ನಾಯಕ್‌ ಚಿತ್ರಕತೆಯ ಕಾದಂಬರಿ ರೂಪ ಪ್ರಕಟಿಸದಂತೆ ಪ್ರಕಾಶನ ಸಂಸ್ಥೆ ಹಾರ್ಪರ್‌ಕಾಲಿನ್ಸ್‌ಗೆ ತಡೆ ನೀಡುವಂತೆ ಚಲನಚಿತ್ರ ನಿರ್ಮಾಣ ಸಂಸ್ಥೆ ಆರ್‌ಡಿಬಿ ಅಂಡ್‌ ಕಂಪನಿ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ನಾಯಕ್ ಚಿತ್ರದ ಚಿತ್ರಕಥೆಯನ್ನು ಬರೆಯಲು ಮತ್ತು ಅದನ್ನು ನಿರ್ದೇಶಿಸಲು ತಾನು ಸತ್ಯಜಿತ್‌ ರೇ ಅವರನ್ನು ನಿಯೋಜಿಸಿಕೊಂಡಿದ್ದಾಗಿ ಆರ್‌ಡಿಬಿ ಅಂಡ್‌ ಕಂಪೆನಿ ಹೈಕೋರ್ಟ್‌ ಮೊರೆ ಹೋಗಿತ್ತು. 2018ರ ಸುಮಾರಿಗೆ, ಭಾಸ್ಕರ್ ಚಟ್ಟೋಪಾಧ್ಯಾಯ ಅವರು ಚಿತ್ರಕಥೆಯನ್ನು ಕಾದಂಬರಿ ಮಾಡಿದ್ದು ಕಾದಂಬರಿಯನ್ನು ಹಾರ್ಪರ್‌ ಕಾಲಿನ್ಸ್ ಪ್ರಕಾಶನ ಸಂಸ್ಥೆ ಮೇ 5, 2018 ರಂದು ಪ್ರಕಟಿಸಿತ್ತು.

ಭಾಸ್ಕರ್ ಚಟ್ಟೋಪಾಧ್ಯಾಯ ಅವರ ಚಿತ್ರಕಥೆಯ ಕಾದಂಬರಿ ಮತ್ತು ಹಾರ್ಪರ್‌ ಕಾಲಿನ್ಸ್ನ ಕಾದಂಬರಿಯ ಪ್ರಕಟಣೆಯು ಹಕ್ಕುಸ್ವಾಮ್ಯ ಕಾಯಿದೆಯ ಸೆಕ್ಷನ್ 51ರ ಅರ್ಥದಲ್ಲಿ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ ಎಂದು ಆರ್‌ಡಿಬಿ ಅಂಡ್‌ ಕಂಪನಿ ವಾದಿಸಿತ್ತು.

ವಾದ ಆಲಿಸಿದ ನ್ಯಾ. ಹರಿ ಶಂಕರ್ “ಹಕ್ಕುಸ್ವಾಮ್ಯ ಕಾಯಿದೆಯ ಸೆಕ್ಷನ್ 17ರ ಪ್ರಕಾರ ನಾಯಕ್  ಚಿತ್ರಕಥೆಯ ಲೇಖಕರಾಗಿರುವ ಸತ್ಯಜಿತ್‌ ರೇ ಅವರೇ ಈ ಚಿತ್ರದ ಹಕ್ಕುಸ್ವಾಮ್ಯದ ಮೊದಲ ಒಡೆಯರಾಗಿದ್ದಾರೆ. ಹಾಗಾಗಿ ನಾಯಕ್ ಚಿತ್ರದ ಚಿತ್ರಕಥೆಯಲ್ಲಿ ನಿರ್ಮಾಪಕರು ಹಕ್ಕುಸ್ವಾಮ್ಯ ಹೊಂದಿದ್ದಾರೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಈ ಚರ್ಚೆಗಳಿಂದ 'ನಾಯಕ್' ಚಿತ್ರದ ಚಿತ್ರಕಥೆಯನ್ನು ಕಾದಂಬರಿ ಮಾಡದಂತೆ ಹಾರ್ಪರ್‌ ಕಾಲಿನ್ಸ್‌ಗೆ ತಡೆ ನೀಡಲು ಆರ್‌ಡಿಬಿ ಅಂಡ್‌ ಕಂಪನಿಗೆ ಯಾವುದೇ ಹಕ್ಕಿಲ್ಲ” ಎಂದು ಪೀಠ ನುಡಿಯಿತು.