ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್ 
ಸುದ್ದಿಗಳು

ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಕೆ ವಿಳಂಬವಾಗುತ್ತಿರುವುದಕ್ಕೆ ಕಾರಣ ಕೇಳಿದ ಕರ್ನಾಟಕ ಹೈಕೋರ್ಟ್

Bar & Bench

1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾದ ಪ್ರಕರಣಗಳಿಗೆ ಚಾರ್ಜ್‌ಶೀಟ್‌ ಸಲ್ಲಿಸುವಲ್ಲಿ "ಭಾರಿ" ವಿಳಂಬವಾಗುತ್ತಿರುವುದಕ್ಕೆ ಕಾರಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಕೆಳಗಿನಂತೆ ಆದೇಶ ನೀಡಿದೆ.

“ಕಾಯ್ದೆಯಲ್ಲಿ 60 ದಿನದೊಳಗೆ ಆರೋಪಪಟ್ಟಿ ದಾಖಲಿಸಬೇಕು ಎಂದು ಹೇಳಲಾಗಿದೆ. 2015ರಿಂದ 2019ರವರೆಗೆ 35,091 ಪ್ರಕರಣಗಳಲ್ಲಿ 6,400 ಪ್ರಕರಣಗಳಲ್ಲಿ ಮಾತ್ರ ಚಾರ್ಜ್‌ಶೀಟ್‌ ದಾಖಲಿಸಲಾಗಿದೆ. ವಿಳಂಬಕ್ಕೆ ಕಾರಣಗಳೇನು ಎಂಬ ಕುರಿತು ತನಿಖಾಧಿಕಾರಿಗಳು ವಿವರಣೆ ನೀಡುವುದು ಕಾಯ್ದೆಯಡಿ ಕಡ್ಡಾಯವಾಗಿದ್ದು ಇದನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಜೊತೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಳಂಬ ನಡೆದಿರುವುದೇಕೆ ಎಂಬ ಬಗ್ಗೆ ಅದು ಚರ್ಚಿಸಬೇಕು”
ಕರ್ನಾಟಕ ಹೈಕೋರ್ಟ್

ವಿಚಾರಣೆ ವೇಳೆ, ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲೆ ಜಯ್ನಾ ಕೊಠಾರಿ, ಸಂತ್ರಸ್ತರಿಗೆ ನೀಡಲಾಗುವ ಪರಿಹಾರದ ಬಗ್ಗೆ ಮಾಹಿತಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.

ಕಾಯ್ದೆಯಡಿ ಅಪರಾಧ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಬಾಕಿ ಇರುವುದು ಮತ್ತೊಂದು ಆತಂಕದ ಸಂಗತಿ ಎಂದು ನ್ಯಾಯಪೀಠ ತಿಳಿಸಿದೆ.

ಸಾಕಷ್ಟು ಸಂಖ್ಯೆಯ ವಿಶೇಷ ನ್ಯಾಯಾಲಯಗಳನ್ನು ನೇಮಿಸದಿರುವುದು ಇದಕ್ಕೆ ಕಾರಣ ಎಂದು ಕೋರ್ಟಿನ ಗಮನ ಸೆಳೆಯಲಾಯಿತು. ಆಗ, ಎಸ್‌ಸಿ/ ಎಸ್‌ಟಿ ಕಾಯ್ದೆಯಡಿ ಇನ್ನೂ ಒಂಬತ್ತು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಸ್ಮರಿಸಿದ ನ್ಯಾಯಾಲಯ ಈ ಬಗ್ಗೆ ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶನ ನೀಡಿತು.

"ಶಿಕ್ಷೆಯ ಪ್ರಮಾಣ ಏಕೆ ಕಡಿಮೆಯಾಗಿದೆ ಎಂಬುದು ಬಹಳ ಸಂಕೀರ್ಣವಾದ ವಿಷಯವಾಗಿದೆ. ಕಾಯ್ದೆಯಡಿ ಪ್ರಕರಣಗಳ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಈ ಸಮಸ್ಯೆಯನ್ನು ನಿಭಾಯಿಸಬಹುದು."
ಕರ್ನಾಟಕ ಹೈಕೋರ್ಟ್

ರಾಜ್ಯ ಸರ್ಕಾರ ಕಾಯ್ದೆಯಡಿ ನೇಮಕಗೊಂಡಿರುವ ತನಿಖಾಧಿಕಾರಿಗಳು ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳಿಗೆ ನಿಯಮಿತ ತರಬೇತಿ ನೀಡುವ ಮೂಲಕ ತನಿಖೆ ವಿಳಂಬ ಮತ್ತು ಹೆಚ್ಚಿನ ಸಂಖ್ಯೆಯ ಖುಲಾಸೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ. ಅಲ್ಲದೆ ಈಗಾಗಲೇ ನಡೆಸಿದ ತರಬೇತಿ ಕಾರ್ಯಕ್ರಮಗಳ ವಿವರವನ್ನು ರಾಜ್ಯ ಸರ್ಕಾರ ದಾಖಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಎಸ್‌ಸಿ/ ಎಸ್‌ಟಿ ನಿಯಮಗಳ ಅಡಿಯಲ್ಲಿ ರಚಿಸಲಾದ ಜಿಲ್ಲಾಮಟ್ಟದ ವಿಚಕ್ಷಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸಭೆಗಳನ್ನು ನಿಯಮಿತವಾಗಿ ನಡೆಸುತ್ತಿಲ್ಲ ಮತ್ತು ಉಪವಿಭಾಗ ಮಟ್ಟದ ವಿಚಕ್ಷಣಾ ಮತ್ತು ಮೇಲ್ವಿಚಾರಣಾ ಸಮಿತಿಗಳಿಗೆ ಸಂಬಂಧಿಸಿದಂತೆ ಇದೇ ಪರಿಸ್ಥಿತಿ ಇದೆ ಎಂಬುದನ್ನು ನ್ಯಾಯಾಲಯ ಗಮನಿಸಿದ್ದು ಈ ಎರಡೂ ಸಮಿತಿಗಳು ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.

"…ಸಂವಿಧಾನ ಅಂಗೀಕಾರವಾಗಿ ಹಲವು ವರ್ಷಗಳು ಕಳೆದ ಬಳಿಕವೂ, 1989ರಲ್ಲಿ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂದ ನಂತರವೂ, ಅನೇಕ ದೌರ್ಜನ್ಯ ಪ್ರಕರಣಗಳು ದೇಶಾದ್ಯಂತ ನಡೆಯುತ್ತಿವೆ. ಆದ್ದರಿಂದ ದೌರ್ಜನ್ಯ ತಡೆ ಕಾಯ್ದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮ ನಿಬಂಧನೆಗಳನ್ನು ಜಾರಿಗೆ ತರುವುದು ಅತ್ಯಗತ್ಯವಾಗಿದೆ. ಕಾಯ್ದೆಯಡಿ ಸಂಪೂರ್ಣವಾಗಿ ವ್ಯವಸ್ಥೆ ಸಜ್ಜಾಗಿದೆ. ಈಗಿರುವ ಪ್ರಶ್ನೆ ಎಂದರೆ ಒದಗಿಸಲಾಗಿದೆ.

ಆದ್ದರಿಂದ, ದೌರ್ಜನ್ಯ ಕಾಯ್ದೆ ಮತ್ತು ಹೇಳಿದ ನಿಯಮಗಳ ನಿಬಂಧನೆಗಳನ್ನು ಜಾರಿಗೆ ತರಲು ರಾಜ್ಯಕ್ಕೆ ಹೆಚ್ಚು ಅಗತ್ಯವಾಗಿದೆ. ಕಾಯ್ದೆಯಡಿ ಆಡಳಿತ ವ್ಯವಸ್ಥೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಆದರೆ ಅದನ್ನು ಸಕ್ರಿಯಗೊಳಿಸುವುದಷ್ಟೇ ಪ್ರಶ್ನೆಯಾಗಿ ಉಳಿದಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.