CJI NV Ramana hima Kohli and Surya Kant and sedition.
CJI NV Ramana hima Kohli and Surya Kant and sedition.  
ಸುದ್ದಿಗಳು

ವಿಸ್ತೃತ ಪೀಠಕ್ಕೆ ಉಲ್ಲೇಖಿಸುವುದಾದರೆ ದೇಶದ್ರೋಹ ಕಾನೂನಿಗೆ ತಡೆ ನೀಡಿ: ಸುಪ್ರೀಂ ಕೋರ್ಟ್‌ಗೆ ಅರ್ಜಿದಾರರು

Bar & Bench

ದೇಶದ್ರೋಹವನ್ನು ಅಪರಾಧವೆಂದು ಪರಿಗಣಿಸುವ ಐಪಿಸಿ 124 ಎ ಸೆಕ್ಷನ್‌ನ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣವನ್ನು ಐದು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸಿದರೆ, ಆಗ ಸೆಕ್ಷನ್‌ಗೆ ಸುಪ್ರೀಂ ಕೋರ್ಟ್‌ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. [ಎಸ್‌ ಜಿ ವೊಂಬತ್ಕೆರೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇದಾರ್ ನಾಥ್ ಸಿಂಗ್ ತೀರ್ಪಿನಲ್ಲಿ ನೀಡಿರುವ ಅನುಪಾತದ ಸ್ಥಿತಿಯನ್ನು ಮರುಪರಿಶೀಲಿಸುವ ಸಂದರ್ಭದಲ್ಲಿ ಮತ್ತು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸುವಾಗ 124 ಎ ಸೆಕ್ಷನ್‌ ಜಾರಿಯಾಗುವುದನ್ನು ತಡೆಯಬೇಕು ಎಂದು ಕೋರಲಾಗಿದೆ. ಸೆಕ್ಷನ್ 124 ಎಗೆ ಸಂಬಂಧಿಸಿದ ಸಿಂಧುತ್ವವನ್ನು 1962ರಲ್ಲಿ ಎತ್ತಿಹಿಡಿದಿದ್ದ ಕೇದಾರ್ ನಾಥ್ ಸಿಂಗ್ ತೀರ್ಪನ್ನು ಸುಪ್ರೀಂ ಕೋರ್ಟ್‌ನ 5 ನ್ಯಾಯಮೂರ್ತಿಗಳ ಪೀಠ ನೀಡಿತ್ತು.

ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಪ್ರಸ್ತುತ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಕೇದಾರ್ ನಾಥ್ ಸಿಂಗ್ ತೀರ್ಪಿನ ದೃಷ್ಟಿಯಿಂದ ಪ್ರಕರಣವನ್ನು ಐವರು ಸದಸ್ಯರ ನ್ಯಾಯಪೀಠಕ್ಕೆ ಉಲ್ಲೇಖಿಸುವ ಅಗತ್ಯವಿದೆಯೇ ಎಂಬ ಅಂಶವನ್ನು ನ್ಯಾಯಾಲಯ ಪರಿಶೀಲಿಸುತ್ತಿದೆ. ಈ ಹಿಂದಿನ ವಿಚಾರಣೆ ವೇಳೆ ಕಾಯಿದೆಯ ಸಿಂಧುತ್ವವನ್ನು ಸಮರ್ಥಿಸಿ ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದ್ದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಇಂದು ಮಧ್ಯಾಹ್ನ 2 ಗಂಟೆಗೆ ಉಲ್ಲೇಖದ ವಿಷಯವನ್ನು ಪರಿಗಣಿಸಲಿದ್ದು, ಕಕ್ಷಿದಾರರು ಈ ಸಂಬಂಧ ಅಂತಿಮ ವಾದ ಮಂಡಿಸಲಿದ್ದಾರೆ.

ಕಾನೂನಿಗೆ ತಡೆ ನೀಡುವಂತೆ ಕೋರಿರುವ ಅರ್ಜಿದಾರರು “ಭಾರತದಂತಹ ಮುಕ್ತ ಪ್ರಜಾಪ್ರಭುತ್ವ ಗಣರಾಜ್ಯದಲ್ಲಿ ಭಾರೀ ಸಾರ್ವಜನಿಕ ಹಿತಾಸಕ್ತಿ ಮತ್ತು ಹಿತದೃಷ್ಟಿಯಿಂದ ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು. ತಕ್ಷಣವೇ ಸೆಕ್ಷನ್‌ 124 ಎಯನ್ನು ತಡೆಹಿಡಿದು ಮಧ್ಯಂತರ ಕ್ರಮವಾಗಿ ಬಾಕಿ ಉಳಿದ ವಿಚಾರಣೆ, ತನಿಖೆಗಳಿಗೆ ತಡೆ ನೀಡಬೇಕು” ಎಂದು ಪ್ರಾರ್ಥಿಸಿದ್ದಾರೆ.