Veena Thaikkandiyil, Karnataka High Court
Veena Thaikkandiyil, Karnataka High Court  Veena Thaikkandiyil image source: Linkedin
ಸುದ್ದಿಗಳು

ಎಸ್‌ಎಫ್‌ಐಒ ತನಿಖೆ: ಕೇರಳ ಸಿಎಂ ಪುತ್ರಿಯ ಒಡೆತನದ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌

Bar & Bench

ಕೇಂದ್ರ ಸರ್ಕಾರವು ತಾನು ನಿರ್ದೇಶಕಿಯಾಗಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎಕ್ಸಾಲಾಜಿಕ್‌ ಸಲ್ಯೂಷನ್ಸ್‌ ವಿರುದ್ಧ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ ವೀಣಾ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ. ಹೀಗಾಗಿ, ವೀಣಾ ಅವರ ಸಂಸ್ಥೆಯ ವಿರುದ್ಧದ ತನಿಖೆ ಮುಂದುವರಿಯಲಿದೆ.

ಎಸ್‌ಎಫ್‌ಐಒ 2024ರ ಜನವರಿ 31ರಂದು ಹೊರಡಿಸಿರುವ ಆದೇಶ ವಜಾ ಮಾಡುವಂತೆ ಕೋರಲಾಗಿರುವ ಅರ್ಜಿಯ ವಿಚಾರಣೆಯನ್ನು ಮಾರ್ಚ್‌ 12ರಂದು ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.

“ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶ ಮಾಡಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ವಾದ-ಪ್ರತಿವಾದ ಆಲಿಸಿದ್ದ ಪೀಠವು ಫೆಬ್ರವರಿ 12ರಂದು‌ ಆದೇಶ ಪ್ರಕಟಿಸುವವರೆಗೆ ಎಕ್ಸಾಲಾಜಿಕ್ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಎಸ್‌ಎಫ್‌ಐಒಗೆ ಮೌಖಿಕವಾಗಿ ನಿರ್ದೇಶಿಸಿತ್ತು.

ಇದಕ್ಕೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರು ಪ್ರಕರಣವು ಪ್ರಾಥಮಿಕ ಹಂತದಲ್ಲಿದ್ದು, ಎಕ್ಸಾಲಾಜಿಕ್‌ ಕಡೆಯಿಂದ ಕೆಲವು ದಾಖಲೆಗಳನ್ನು ಕೇಳಲಾಗಿದೆ. ಆದರೆ, ಬಲವಂತದ ಕ್ರಮಕೈಗೊಳ್ಳಬಾರದು ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಬೇಡಿ ಎಂದು ಪೀಠಕ್ಕೆ ಮನವಿ ಮಾಡಿದ್ದರು.

ಎಸ್‌ಎಫ್‌ಐಒ ಕೇಳಿರುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕಂಪೆನಿಯ ವಕೀಲರಿಗೆ ಪೀಠ ಸೂಚಿಸಿತು. ಫೆಬ್ರವರಿ 15ರ ಒಳಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅದರೊಳಗೆ ಎಸ್‌ಎಫ್‌ಐಒ ಕೇಳಿರುವ ದಾಖಲೆ ಸಲ್ಲಿಸಲಾಗುವುದು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಅರವಿಂದ್‌ ದಾತಾರ್‌ ಪೀಠಕ್ಕೆ ವಿವರಿಸಿದ್ದರು.