A1
A1
ಸುದ್ದಿಗಳು

ಶ್ರದ್ಧಾ ಹತ್ಯೆ ತನಿಖೆ ಸಿಬಿಐಗೆ ವರ್ಗಾಯಿಸಲು ಕೋರಿದ್ದ ಪಿಐಎಲ್ ವಜಾಗೊಳಿಸಿದ ದೆಹಲಿ ಹೈಕೋರ್ಟ್; ಅರ್ಜಿದಾರರಿಗೆ ದಂಡ

Bar & Bench

ಲಿವ್‌-ಇನ್ ಸಂಗಾತಿಯಿಂದ ಭೀಕರವಾಗಿ ಹತ್ಯೆಗೀಡಾಗಿದ್ದ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ [ಜೋಶಿನಿ ತುಲಿ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಪೊಲೀಸರು ತನಿಖೆ ನಡೆಸುತ್ತಿದ್ದು ತಾನು ಅದರ ಮೇಲ್ವಿಚಾರಣೆ ಮಾಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ  ಹೇಳಿದೆ. ಇದರೊಂದಿಗೆ ದಂಡದೊಂದಿಗೆ ಅರ್ಜಿಯನ್ನು ವಜಾಗೊಳಿಸಿತು.

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡವು ಪ್ರಕರಣದ ತನಿಖೆ ನಡೆಸುತ್ತಿದ್ದುಈಗಾಗಲೇ ಶೇ 80ರಷ್ಟು ತನಿಖೆ ಪೂರ್ಣಗೊಂಡಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಕೇಂದ್ರ ಸರ್ಕಾರವೂ ಪಿಐಎಲ್ ಅನ್ನು ವಿರೋಧಿಸಿ , ಈ ಮೂಲಕ ಖಾಸಗಿ ವ್ಯಕ್ತಿಗಳು ತನಿಖೆ ನಡೆಸಬೇಕಾದ ವಿಧಾನದ ಕುರಿತು ನಿರ್ದೇಶನ ನೀಡುವಂತಿಲ್ಲ ಎಂದು ಹೇಳಿತು.

ಇದುವರೆಗೆ ದೆಹಲಿ ಪೊಲೀಸರು ತಾವು ಕೈಗೊಂಡ ತನಿಖೆಯ ಪ್ರತಿಯೊಂದು ವಿವರಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಬಹಿರಂಗಪಡಿಸಿದ್ದಾರೆ. ಇದಕ್ಕೆ ಕಾನೂನಿನ ಪ್ರಕಾರ ಅನುಮತಿ ಇಲ್ಲ ಎಂದು ನ್ಯಾಯವಾದಿ ಜೋಶಿನಿ ತುಲಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಸಾಕ್ಷ್ಯ ಸಂಗ್ರಹಿಸಲಾದ ಸ್ಥಳದಲ್ಲಿ ಮಾಧ್ಯಮಗಳು ಮತ್ತು ಇತರೆ ಸಾರ್ವಜನಿಕ ವ್ಯಕ್ತಿಗಳು ಇದ್ದುದರಿಂದ ಅದು ಸಾಕ್ಷ್ಯ ಮತ್ತು ಸಾಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ. ತಾನು ನ್ಯಾಯಾಲಯದಲ್ಲಿ ಕೋರಿರುವ ಪರಿಹಾರ ಆರೋಪಿಗಳು, ದೂರುದಾರರು ಮತ್ತು ದೆಹಲಿಯ ನಾಗರಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆಯೇ ಹೊರತು ಯಾವುದೇ ಇತರ ವ್ಯಕ್ತಿ, ಸಂಘ ಸಂಸ್ಥೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಘಟನೆ ಸುಮಾರು 6 ತಿಂಗಳ ಹಿಂದೆ ನಡೆದಿದ್ದು ನಂತರ ಮೃತಳ ದೇಹದ ಭಾಗಗಳನ್ನು ವಿವಿಧ ಸ್ಥಳಗಳಲ್ಲಿ ಬಿಸಾಡಿರುವುದರಿಂದ ಸಿಬ್ಬಂದಿ ಮತ್ತು ತಾಂತ್ರಿಕ ಸಲಕರಣೆಗಳ ಕೊರತೆಯಿಂದಾಗಿ ಮೆಹ್ರೌಲಿ ಪೊಲೀಸ್ ಠಾಣೆ ತನಿಖೆ ನಡೆಸಲು ಸಜ್ಜಾಗಿರಲಿಲ್ಲ. ಆರೋಪಿಯನ್ನು ತನಿಖೆ ನಡೆಸುವ ಸಲುವಾಗಿ ಐದು ಬೇರೆ ಬೇರೆ ರಾಜ್ಯಗಳಿಗೆ ಕರೆದೊಯ್ಯುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ. ಹೀಗಾಗಿ ಪ್ರಕರಣ ಅಂತರ ರಾಜ್ಯ ವ್ಯಾಪ್ತಿ ಹೊಂದಿದ್ದು ದೆಹಲಿ ಪೊಲೀಸರ ಪ್ರಾದೇಶಿಕ ವ್ಯಾಪ್ತಿ ಮೀರಿದೆ ಎಂದು ಅರ್ಜಿದಾರರು ವಿವರಿಸಿದ್ದರು.  

ಬಂಬಲ್‌ ಡೇಟಿಂಗ್‌ ಅಪ್ಲಿಕೇಷನ್‌ ಮೂಲಕ  ಭೇಟಿಯಾದ ಅಫ್ತಾಬ್‌- ಶ್ರದ್ಧಾ ಜೋಡಿ ಸಹ ಜೀವನ (ಲಿವ್‌ ಇನ್‌) ನಡೆಸುತ್ತಿತ್ತು. ಅವರು ಮುಂಬೈ ನಗರದವರಾಗಿದ್ದು ಈ ವರ್ಷದ ಮೊದಲ ಭಾಗದಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು.

ಪೊಲೀಸರ ಪ್ರಕಾರ, ಈ ವರ್ಷ ಮೇ 18 ರಂದು ಮೆಹ್ರೌಲಿಯ ಬಾಡಿಗೆ ಫ್ಲಾಟ್‌ನಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಆರೋಪಿ ಸಂತ್ರಸ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ ನಂತರ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿ ಸಂಗ್ರಹಿಸಿದ್ದ. ಕೊಲೆ ನಡೆದ ಹದಿನೆಂಟು ದಿನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಆ ತುಂಡುಗಳನ್ನು ಎಸೆದು ಬಂದಿದ್ದ.