ಸುದ್ದಿಗಳು

ಆಸ್ಪತ್ರೆಯ ಕೋಣೆಯಲ್ಲಿ ಕಪ್ಪನ್ ಪ್ರಾಣಿಯಂತೆ ಬಂಧಿ: ಸಿಜೆಐಗೆ ಬರೆದ ಪತ್ರದಲ್ಲಿ ಪತ್ರಕರ್ತನ ಪತ್ನಿ ಅಳಲು

Bar & Bench

ಯುಎಪಿಎ ಕಾಯಿದೆಯಡಿ ಬಂಧಿತರಾಗಿ ಜೈಲುವಾಸ ಅನುಭವಿಸುತ್ತಿರುವ ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಅವರನ್ನು ಮಥುರಾದ ಆಸ್ಪತ್ರೆಯ ಮಂಚವೊಂದಕ್ಕೆ ಪ್ರಾಣಿಯಂತೆ ಕಟ್ಟಿಹಾಕಲಾಗಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರಿಗೆ ಬರೆದ ಪತ್ರದಲ್ಲಿ ಕಪ್ಪನ್‌ ಪತ್ನಿ ರೈಹಾಂತ್‌ ತಿಳಿಸಿದ್ದಾರೆ.

ಕೂಡಲೇ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಮತ್ತು ಆಸ್ಪತ್ರೆಯಿಂದ ಕಪ್ಪನ್‌ ಅವರನ್ನು ಬಿಡುಗಡೆ ಮಾಡಿ ಬಂಧನ ಅವಧಿ ಮುಗಿಯುವವರೆಗೂ ಅವರನ್ನು ಮಥುರಾ ಜೈಲಿಗೆ ಕಳಿಸುವಂತೆ ವಕೀಲ ವಿಲ್ಸ್‌ ಮ್ಯಾಥ್ಯೂ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೋರಿದ್ದಾರೆ.

ಜೈಲಿನ ಸ್ನಾನಗೃಹದಲ್ಲಿ ಬಿದ್ದಿದ್ದ ಕಪ್ಪನ್ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಮಥುರಾ ಕೆ ಎಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪತ್ರಕರ್ತನ ಪತ್ನಿ ಅಳಲು ತೋಡಿಕೊಂಡಿದ್ದಾರೆ.

“ ಕಪ್ಪನ್‌ ಅವರನ್ನು ಮಥುರಾದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಣಿಯಂತೆ ಕಟ್ಟಿ ಹಾಕಿದ್ದಾರೆ. ಅವರಿಗೆ ನಡೆದಾಡಲು ಆಗುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ಅವರು ಆಹಾರ ಸ್ವೀಕರಿಸುತ್ತಲೂ ಇಲ್ಲ ಶೌಚಾಲಯಕ್ಕೆ ಹೋಗುತ್ತಲೂ ಇಲ್ಲ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅವರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ” ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ಪರವಾಗಿಯೂ ವಕೀಲ ಮ್ಯಾಥ್ಯೂ ಅವರು ವಾದ ಮಂಡಿಸುತ್ತಿದ್ದಾರೆ. ಹೇಬಿಯಸ್ ಕಾರ್ಪಸ್ ಮನವಿಯನ್ನು ಮಾರ್ಚ್ 9 ರಂದೇ ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಬೇಕಿತ್ತು. ಆದರೆ ಇನ್ನೂ ಅದನ್ನು ವಿಚಾರಣೆಗೆ ಪಟ್ಟಿ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.