ಅಪರಾಧಿಗಳ ಶಾಶ್ವತ ಅವಧಿಪೂರ್ವ ಬಿಡುಗಡೆಗಾಗಿ ನೀತಿ ಅಳವಡಿಸಿಕೊಂಡಿರುವ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಪರಾಧಿ ಅಥವಾ ಅವನ ಕುಟುಂಬ ಅರ್ಜಿ ಸಲ್ಲಿಸಿದೆ ಇದ್ದಾಗಲೂ ಅವರ ಶಿಕ್ಷೆಯನ್ನು ಕಡಿಮೆ ಮಾಡಲು ಬದ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೇಶಿಸಿದೆ [ಜಾಮೀನು ನೀಡುವ ಸಂಬಂಧ ಅಳವಡಿಸಿಕೊಂಡ ನೀತಿ ಕುರಿತಾದ ಸ್ವಯಂಪ್ರೇರಿತ ಪ್ರಕರಣ]
ಪರಿಹಾರ ನೀತಿ ಅಸ್ತಿತ್ವದಲ್ಲಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಲ್ಲಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಅವಧಿಪೂರ್ವ ಬಿಡುಗಡೆ ಪರಿಹಾರ ನೀಡಲಾಗುತ್ತದೆ ಎಂಬುದು ತಾರತಮ್ಯ ಮತ್ತು ಮನಸೋಇಚ್ಛೆಯ ವಿಚಾರವಾಗುತ್ತದೆ. ಇದು ಸಂವಿಧಾನದ ಉಲ14 ನೇ ವಿಧಿಯ ಉಲ್ಯಾಗಲಿದೆ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.
ಜೊತೆಗೆ ಸೆಕ್ಷನ್ 432(1) ರ ಅಡಿಯಲ್ಲಿನ ಅಧಿಕಾರವನ್ನು ನ್ಯಾಯಯುತ ಮತ್ತು ಸಮಂಜಸವಾದ ರೀತಿಯಲ್ಲಿ ಚಲಾಯಿಸಬೇಕು. ಆದ್ದರಿಂದ, ಶಾಶ್ವತ ಅವಧಿಪೂರ್ವ ಬಿಡುಗಡೆಗಾಗಿ ಪ್ರಕರಣಗಳ ಪರಿಗಣನೆ ನೀತಿ ಅಳವಡಿಸಿಕೊಂಡಿರುವ ಸರ್ಕಾರಗಳು ಪ್ರತಿಯೊಬ್ಬ ಅರ್ಹ ಅಪರಾಧಿಯ ಪ್ರಕರಣ ಪರಿಗಣಿಸುವುದು ಅವುಗಳ ಹೊಣೆಗಾರಿಕೆಯಾಗಿರುತ್ತದೆ ಎಂದು ಅದು ಹೇಳಿದೆ.
ಅವಧಿಪೂರ್ವ ಬಿಡುಗಡೆ ನೀತಿ ಹೊಂದಿಲ್ಲದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎರಡು ತಿಂಗಳೊಳಗೆ ನೀತಿ ರೂಪಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.
ಜಾಮೀನು ನೀಡುವ ಸಂಬಂಧ ಅಳವಡಿಸಿಕೊಂಡ ನೀತಿ ಕುರಿತಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ. ಇಂದಿನ ವಿಚಾರಣೆ ವೇಳೆ ನ್ಯಾಯಾಲಯ ರಾಜ್ಯ ಸರ್ಕಾರಗಳ ಅವಧಿಪೂರ್ವ ಬಿಡುಗಡೆ ನೀತಿ, ಅರ್ಜಿ ಸಲ್ಲಿಸದ ಅಪರಾಧಿಗೂ ಬಿಡುಗಡೆ, ಅವಧಿಪೂರ್ವ ಬಿಡುಗಡೆಗೆ ಷರತ್ತು ಅನ್ವಯವೇ ಎಂಬ ವಿಚಾರಗಳನ್ನು ಪರಿಗಣಿಸಿತು.
ರಾಜ್ಯ ಸರ್ಕಾರ ಎಲ್ಲಾ ಜೀವಾವಧಿ ಶಿಕ್ಷೆಗೊಳಗಾದ ಮತ್ತು ಅವಧಿಪೂರ್ವ ಬಿಡುಗಡೆಗೆ ಅರ್ಹರಾಗಿರುವ ಉಳಿದ ಅಪರಾಧಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಅದು ತಿಳಿಸಿತು. ಈ ಪಟ್ಟಿಯನ್ನು ಜೈಲು ಅಧೀಕ್ಷಕರು ಆಗಾಗ್ಗೆ ಸರ್ಕಾರಕ್ಕೆ ಕಳುಹಿಸುತ್ತಿರಬೇಕು. ಇದರಿಂದ ಅಂತಹ ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಪ್ರಕರಣವನ್ನು ಪರಿಗಣಿಸಲು ಸಾಧ್ಯವಾಗುತ್ತದೆ ಎಂದಿತು.
ಅವಧಿಪೂರ್ವ ಬಿಡುಗಡೆ ನೀಡುವಾಗ ಸಮಂಜಸವಾದ ಷರತ್ತುಗಳನ್ನು ವಿಧಿಸಬಹುದಾದರೂ ಅಂತಹ ಷರತ್ತುಗಳು "ಪಾಲಿಸಲು ಸಾಧ್ಯವಾಗುವಂತೆ" ಇರಬೇಕು ಎಂದು ಪೀಠ ಸ್ಪಷ್ಟಪಡಿಸಿತು.
ಇದಲ್ಲದೆ, ಅವಧಿಪೂರ್ವ ಬಿಡುಗಡೆ ರದ್ದುಗೊಳಿಸುವ ಆದೇಶವನ್ನು ಹೊರಡಿಸಿದರೆ, ಅದಕ್ಕೆ ಸಂಕ್ಷಿಪ್ತ ಕಾರಣಗಳನ್ನು ದಾಖಲಿಸಬೇಕು ಎಂದ ಅದು ರದ್ದತಿಗೆ ಕಾರಣಗಳನ್ನು ತಿಳಿಸುವ ಶೋಕಾಸ್ ನೋಟಿಸ್ ಅನ್ನು ಅಪರಾಧಿಗೆ ನೀಡಬೇಕು ಮತ್ತು ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ಒದಗಿಸಬೇಕು ಎಂದಿತು.
ಶಿಕ್ಷೆಯಿಂದ ಮುಕ್ತಿ ಪಡೆಯುವ ಅಥವಾ ಶಿಕ್ಷೆ ಮುಂದುವರೆಸುವ ಬಗ್ಗೆ ಸರ್ಕಾರ ತಾನು ಹೊರಡಿಸುವ ಆದೇಶವನ್ನು ಅಪರಾಧಿಗೆ ತಿಳಿಸಬೇಕು ಎಂದು ಅದು ಹೇಳಿತು.
ಅಪರಾಧಿಗಳು ಅವಧಿಪೂರ್ವ ಬಿಡುಗಡೆಗೆ ಯಾವಾಗ ಅರ್ಹರಾಗುತ್ತಾರೆ ಎಂಬುದರ ದಾಖಲೆ ನಿರ್ವಹಿಸುವಂತೆ ನ್ಯಾಯಾಲಯವು ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಮಾಹಿತಿಯನ್ನು ನೈಜ-ಸಮಯದ ಆಧಾರದ ಮೇಲೆ ಅಪ್ಲೋಡ್ ಮಾಡಬಹುದಾದ ಜಾಲತಾಣ ರಚಿಸುವಂತೆ ರಾಜ್ಯ ಕಾನೂನು ಸೇವೆಗಳ ಅಧಿಕಾರಿಗಳಿಗೆ ಅದು ನಿರ್ದೇಶಿಸಿತು.