ಸುದ್ದಿಗಳು

ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ರಾಜ್ಯಗಳಿಗೆ ಅಧಿಕಾರವಿದೆ: ಸುಪ್ರೀಂಗೆ ಕೇಂದ್ರ

Bar & Bench

ಕೆಲ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಯಹೂದಿಗಳು ಮತ್ತು ಬಹಾಯಿ ಅನುಯಾಯಿಗಳನ್ನು ಆಯಾ ರಾಜ್ಯ ಸರ್ಕಾರ ಅಲ್ಪಸಂಖ್ಯಾತರು ಎಂದು ಘೋಷಿಸಬಹುದು ಎಂಬುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ (ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).

ಲಡಾಖ್, ಮಿಜೋರಾಂ, ಲಕ್ಷದ್ವೀಪ, ಕಾಶ್ಮೀರ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ಅರುಣಾಚಲದಂತಹ ಅಲ್ಪಸಂಖ್ಯಾತರಿರುವ ಸ್ಥಳಗಳಲ್ಲಿ ತಾವು ಇಚ್ಛಿಸಿದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಂತಹ ಸಮುದಾಯಗಳು ಮಾಡಿರುವ ಆರೋಪ ಸರಿಯಲ್ಲ. ರಾಜ್ಯ ಸರ್ಕಾರಗಳು ಕೂಡ ತಮ್ಮ ರಾಜ್ಯದೊಳಗಿನ ನಿರ್ದಿಷ್ಟ ಧಾರ್ಮಿಕ ಅಥವಾ ಭಾಷಾ ಸಮುದಾಯವನ್ನು ಅಲ್ಪಸಂಖ್ಯಾತ ಎಂದು ಘೋಷಿಸಬಹುದು ಎಂಬುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

ವಕೀಲ ಮತ್ತು ಬಿಜೆಪಿ ಮುಖಂಡ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಲಡಾಖ್, ಮಿಜೋರಾಂ, ಲಕ್ಷದ್ವೀಪ, ಕಾಶ್ಮೀರ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ಅರುಣಾಚಲದಂತಹ ಸ್ಥಳಗಳಲ್ಲಿ ತಾವು ಇಚ್ಛಿಸಿದ ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಬಹಾಯಿಗಳು, ಯೆಹೂದಿಗಳು ಸ್ಥಾಪಿಸಿ, ನಿರ್ವಹಿಸಬಹುದು ಎಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಭಾಷಾವಾರು ಅಥವಾ ಧಾರ್ಮಿಕ ಸಮುದಾಯಗಳನ್ನು 'ಅಲ್ಪಸಂಖ್ಯಾತರು' ಎಂದು ಘೋಷಿಸಲು ರಾಜ್ಯ ಸರ್ಕಾರಗಳಿಗೆ ಇರುವ ಅಧಿಕಾರವನ್ನು 1992ರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕಾಯಿದೆ ಕಸಿದುಕೊಳ್ಳಲಾಗದು. ಕಾಯಿದೆ ಅನಿಯಂತ್ರಿತ ಅಥವಾ ತರ್ಕಾತೀತವಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.