Sudarshan TV
Sudarshan TV 
ಸುದ್ದಿಗಳು

ಯುಪಿಎಸ್‌ಸಿ ಜಿಹಾದ್ ಪ್ರಕರಣದ ವಿಚಾರಣೆ ನೇರ ಪ್ರಸಾರ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸುದರ್ಶನ್ ಟಿವಿ

Bar & Bench

ಮುಸ್ಲಿಮ್ ಸಮುದಾಯವರು ಹೇಗೆ ನಾಗರಿಕ ಸೇವೆಗೆ ನುಸುಳುತ್ತಿದ್ದಾರೆ ಎಂಬ ಕುರಿತ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದಿಂದಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿವಾದಿಯ ಸ್ಥಾನದಲ್ಲಿ ನಿಂತಿರುವ ವಿವಾದಿತ ಸುದರ್ಶನ್ ಟಿವಿಯು ಪ್ರಕರಣದ ವಿಚಾರಣೆಯನ್ನು ನೇರ ಪ್ರಸಾರ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಸುದರ್ಶನ್ ಟಿವಿಯ ಲಕ್ಷಾಂತರ ಮತ್ತು ಕೋಟ್ಯಂತರ ನೋಡುಗರು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವ ಕಾನೂನು ಪ್ರಕ್ರಿಯೆಯ ನೇರ ಪ್ರಸಾರ ನೋಡಲು ಬಯಸಿದ್ದಾರೆ. “ವಾದಿ-ಪ್ರತಿವಾದಿಗಳು ಎತ್ತುವ ಅಂಶಗಳನ್ನು ಆಲಿಸಲು ನೋಡುಗರು ಬಯಸಿದ್ದಾರೆ” ಎಂದಿದೆ.

“ಅಧಿಕೃತ ಸಂಸ್ಥೆಯಾದ ಗೌರವಾನ್ವಿತ ನ್ಯಾಯಾಲಯವು ಸದರಿ ಪ್ರಕರಣದ ವಿಚಾರಣೆಯನ್ನು ವಿಶ್ವದಾದ್ಯಂತ ನೋಡಲು ಅನುಕೂಲವಾಗುವ ರೀತಿಯಲ್ಲಿ ಆಡಿಯೊ-ವಿಡಿಯೋವನ್ನೊಳಗೊಂಡ ನೇರಪ್ರಸಾರ ಮಾಡುವುದು ಒಳಿತು.”
ಸುದರ್ಶನ್ ಟಿವಿ ಮನವಿ

ಸ್ವಪ್ನಿಲ್ ತ್ರಿಪಾಠಿ ವರ್ಸಸ್ ಭಾರತೀಯ ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ನೇರ ಪ್ರಸಾರಕ್ಕೆ ಅನುಮತಿಸಲಾಗಿತ್ತು ಎಂದು ತನ್ನ ವಾದಕ್ಕೆ ಪೂರಕವಾಗಿ ವಿಚಾರ ಪ್ರಸ್ತಾಪಿಸಿರುವ ಸುದರ್ಶನ್ ಟಿವಿಯ ವಕೀಲ ವಿಷ್ಣು ಶಂಕರ್ ಜೈನ್ ಅವರು “ನಮ್ಮ ನ್ಯಾಯಿಕ ವ್ಯವಸ್ಥೆಯು ಮುಕ್ತ ನ್ಯಾಯ ವ್ಯವಸ್ಥೆಗೆ ಹೆಸರಾಗಿದೆ” ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಸುದರ್ಶನ್ ಟಿವಿಯ ಪ್ರಧಾನ ಸಂಪಾದಕ ಮತ್ತು ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದ ನಿರೂಪಕ ಸುರೇಶ ಚವ್ಹಾಣ್ಕೆ ಅವರು ನ್ಯಾಯಾಲಯದ ವಿಚಾರಣೆಯನ್ನು ನೇರ ಪ್ರಸಾರ ಮಾಡಲು ಅಗತ್ಯವಾದ ಎಲ್ಲಾ ತಾಂತ್ರಿಕ ನೆರವು ಕಲ್ಪಿಸಲು ಸಿದ್ಧವಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಸೂರ್ಯನ ರಶ್ಮಿ ಅತ್ಯುತ್ತಮವಾದ ಸೋಂಕು ನಿವಾರಕವಾಗಿದೆ. ಪ್ರಕರಣದ ವಿಚಾರಣೆಯನ್ನು ನೇರ ಪ್ರಸಾರ ಮಾಡುವುದು ಮುಕ್ತ ನ್ಯಾಯಾಲಯದ ಮತ್ತೊಂದು ಹಂತವಾಗಿದ್ದು, ನ್ಯಾಯಾಲಯದ ವಿಚಾರಣೆ ಮತ್ತು ವಸ್ತುಸ್ಥಿತಿಯಿಂದ ಹೆಚ್ಚಿನ ಜನರಿಗೆ ಮಾಹಿತಿ ತಲುಪಿಸಿದಂತಾಗುತ್ತದೆ. ಇದರಿಂದ ನ್ಯಾಯಾಂಗ ವ್ಯವಸ್ಥೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಾಗುತ್ತದೆ.”
ಸುದರ್ಶನ್ ಟಿವಿ ಮನವಿಯಲ್ಲಿ ಉಲ್ಲೇಖ

ಮುಸ್ಲಿಮರು ನಾಗರಿಕ ಸೇವೆಗೆ ನುಸುಳುತ್ತಿದ್ದಾರೆ ಎಂದು ಹೇಳುವ ವಿವಾದಿತ ಕಾರ್ಯಕ್ರಮ ಪ್ರಸಾರ ಮಾಡುವ ಮೂಲಕ ಸುದರ್ಶನ್ ಟಿವಿಯು “ದೇಶಕ್ಕೆ ಅಪಚಾರ ಎಸಗುತ್ತಿದೆ” ಎಂದಿದ್ದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಕೆ ಎಂ ಜೋಸೆಫ್ ಮತ್ತು ಇಂದೂ ಮಲ್ಹೋತ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸೆಪ್ಟೆಂಬರ್ 16ರಂದು ಕಾರ್ಯಕ್ರಮ ಪ್ರಸಾರಕ್ಕೆ ತಡೆ ವಿಧಿಸಿತ್ತು.