Justice Vikram Nath, Justice S Khanna, Justice SK Kaul, Justice A S Oka, Justice JK  Maheshwari
Justice Vikram Nath, Justice S Khanna, Justice SK Kaul, Justice A S Oka, Justice JK Maheshwari 
ಸುದ್ದಿಗಳು

ಡಿಎಸ್‌ಪಿಇ ಕಾಯಿದೆಯ ಸೆಕ್ಷನ್ 6ಎ ರದ್ದತಿ: 2014ರ ತೀರ್ಪು ಪೂರ್ವಾನ್ವಯವಾಗುತ್ತದೆ ಎಂದ ಸುಪ್ರೀಂ ಕೋರ್ಟ್‌

Bar & Bench

ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯಿದೆ- 1946ರ (ಡಿಎಸ್‌ಪಿಇ ಕಾಯಿದೆ) ಸೆಕ್ಷನ್ 6ಎ ಅನ್ನು ರದ್ದುಗೊಳಿಸಿ ಸುಬ್ರಮಣಿಯನ್ ಸ್ವಾಮಿ ಮತ್ತು ಸಿಬಿಐ ನಿರ್ದೇಶಕರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪು ಪೂರ್ವಾನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ [ಸಿಬಿಐ ಮತ್ತು ಆರ್‌ ಆರ್‌ ಕಿಶೋರ್‌ ನಡುವಣ ಪ್ರಕರಣ].

ಜಂಟಿ ಕಾರ್ಯದರ್ಶಿ ಹುದ್ದೆಯಿಂದ ಮೇಲ್ಪಟ್ಟ ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧದ ಸಿಬಿಐ ತನಿಖೆಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯುವುದನ್ನು ಸೆಕ್ಷನ್ 6ಎ ಕಡ್ಡಾಯಗೊಳಿಸಿತ್ತು. ಆದರೆ ಸೆಕ್ಷನ್ 6ಎ (1), ಪ್ರಜೆಗಳಿಗೆ ಸಮಾನತೆಯ ಹಕ್ಕನ್ನು ಒದಗಿಸುವ 14ನೇ ವಿಧಿಯ ಉಲ್ಲಂಘಿಸುತ್ತದೆ ಎಂದು ಸುಬ್ರಮಣಿಯನ್ ಸ್ವಾಮಿ  ಮತ್ತು ಸಿಬಿಐ ನಿರ್ದೇಶಕ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ನೀಡಲಾದ ತೀರ್ಪಿನಲ್ಲಿ ಹೇಳಿದ್ದ ಸುಪ್ರೀಂ ಕೋರ್ಟ್‌ ಅದನ್ನು ರದ್ದುಗೊಳಿಸಿತು. ಆ ತೀರ್ಪಿನಲ್ಲಿ ಸ್ಥಾನಮಾನ ಮತ್ತು ಶ್ರೇಣಿಯ ಆಧಾರದ ಮೇಲೆ ಅಧಿಕಾರಿಗಳ ನಡುವೆ ತಾರತಮ್ಯ ಇರಬಾರದು ಎಂದು ತಿಳಿಸಲಾಗಿತ್ತು.

ಆದರೂ ಸಿಬಿಐ ಇದಾಗಲೇ ತನಿಖೆ ನಡೆಸುತ್ತಿರುವ ಪ್ರಕರಣಗಳಿಗೆ ತೀರ್ಪು ಅನ್ವಯವಾಗುತ್ತದೆಯೇ ಎಂಬುದನ್ನು 2014ರ ಆದೇಶ ಸ್ಪಷ್ಟಪಡಿಸಿರಲಿಲ್ಲ. ಇದನ್ನು ಪರಿಶೀಲಿಸುವ ಸಲುವಾಗಿ ಸಾಂವಿಧಾನಿಕ ಪೀಠ ರಚಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್ ನಾಥ್ ಹಾಗೂ ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಈಗ ಈ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದ್ದು 2014ರ ತೀರ್ಪು ಪೂರ್ವಾನ್ವಯವಾಗುತ್ತದೆ ಎಂದಿದೆ. ಸೆಕ್ಷನ್ 6ಎ ಎಂದಿಗೂ ಜಾರಿಯಲ್ಲಿರಲಿಲ್ಲ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆದರೆ ಯಾವುದೇ ಪ್ರಕರಣ ಅಥವಾ ಅರ್ಹತೆ ಆಧಾರದ ಮೇಲೆ ಪ್ರಕರಣವನ್ನು ನಿರ್ಧರಿಸಿಲ್ಲ ಎಂಬುದಾಗಿಯೂ ಅದು ಹೇಳಿದೆ. "ಸುಬ್ರಮಣಿಯನ್ ಸ್ವಾಮಿ ಪ್ರಕರಣದ ತೀರ್ಪು ಪೂರ್ವಾನ್ವಯವಾಗುತ್ತದೆ. ನಾವು ಬೇರೆ ಪ್ರಕರಣಗಳ ತೀರ್ಪು ನೀಡಿಲ್ಲ ಅಥವಾ ಆಯಾ ಪೀಠಗಳು ಆಲಿಸುವ ಅರ್ಹತೆಯ ಮೇಲಿನ ಮೇಲ್ಮನವಿಗಳನ್ನು ಆಲಿಸಿಲ್ಲ" ಎಂದು ಪೀಠ ವಿವರಿಸಿದೆ. ಪ್ರಕರಣದ ಸಂಬಂಧ ಕಳೆದ ವರ್ಷ ನವೆಂಬರ್ 3ರಂದು ತೀರ್ಪು ಕಾಯ್ದಿರಿಸಲಾಗಿತ್ತು.