ಸುದ್ದಿಗಳು

ಲೋಕಪಾಲ್‌ನಿಂದ ಹೈಕೋರ್ಟ್ ನ್ಯಾಯಮೂರ್ತಿಗಳ ವಿಚಾರಣೆ ಪ್ರಕರಣ: ಅಮಿಕಸ್ ಕ್ಯೂರಿಯಾಗಿ ರಂಜಿತ್ ಕುಮಾರ್ ನೇಮಿಸಿದ ಸುಪ್ರೀಂ

ರಂಜಿತ್ ಅವರನ್ನು ಅಮಿಕಸ್ ಆಗಿ ನೇಮಿಸಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಸೂರ್ಯ ಕಾಂತ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ ಆದೇಶ ಹೊರಡಿಸಿತು.

Bar & Bench

ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ- 2013ರ ಅಡಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ತಾನು ದೂರುಗಳನ್ನು ಸ್ವೀಕರಿಸಬಹುದು ಎಂದು ಲೋಕಪಾಲ್ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವ ಅಮಿಕಸ್‌ ಕ್ಯೂರಿಯನ್ನಾಗಿ ಮಾಜಿ ಸಾಲಿಸಿಟರ್‌ ಜನರಲ್‌ ರಂಜಿತ್‌  ಕುಮಾರ್‌ ಅವರನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನೇಮಕ ಮಾಡಿದೆ.

ರಂಜಿತ್ ಅವರನ್ನು ಅಮಿಕಸ್ ಆಗಿ ನೇಮಿಸಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಸೂರ್ಯ ಕಾಂತ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ ಆದೇಶ ಹೊರಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 15ರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ಫೆಬ್ರವರಿ 20ರಂದು ನಡೆದಿದ್ದ ವಿಚಾರಣೆ ವೇಳೆ ಲೋಕಪಾಲ್‌ ಆದೇಶಕ್ಕೆ ತಡೆ ನೀಡಿದ್ದ ಪೀಠ ಈ ಬಗೆಯ ತೀರ್ಪು ತೀರಾ ವಿಚಲಿತಗೊಳಿಸುವಂತಹ ಸಂಗತಿ ಎಂದು ತಿಳಿಸಿತ್ತು. ಜೊತೆಗೆ ಕೇಂದ್ರ ಸರ್ಕಾರ ಮತ್ತು ಲೋಕಪಾಲ್‌ ರಿಜಿಸ್ಟ್ರಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.

ಜನವರಿ 27 ರಂದು ಲೋಕಪಾಲ್ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದ್ದ ಸುಪ್ರೀಂ ಕೋರ್ಟ್‌ ಪ್ರಕರಣ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ್ದು ಎಂದಿತ್ತು.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ಮತ್ತೊಬ್ಬ ಹೈಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧ ಸಲ್ಲಿಸಲಾಗಿದ್ದ ಎರಡು ದೂರುಗಳನ್ನು ಆಲಿಸಿದ್ದ ಲೋಕಪಾಲ್ ಜನವರಿ 27ರಂದು ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧದ ದೂರನ್ನು ವಿಚಾರಣೆಗೆ ಪರಿಗಣಿಸುವುದಾಗಿ ತೀರ್ಪು ನೀಡಿತ್ತು. ತನ್ನ ತೀರ್ಪು ಪ್ರಕಟಿಸುವ ಮುನ್ನ ಲೋಕಪಾಲ್ ಸಂಬಂಧ ಪಟ್ಟ ನ್ಯಾಯಮೂರ್ತಿ ಮತ್ತು ಹೈಕೋರ್ಟ್ ಹೆಸರನ್ನು ಮಸುಕುಮಾಡಿತ್ತು.

ಈ ಆದೇಶದ ಮೂಲಕ ನಾವು ಅಂತಿಮವಾಗಿ ಸಮಸ್ಯೆಯೊಂದರ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬಂದಿದ್ದೇವೆ - ಸಂಸತ್ತಿನ ಕಾಯಿದೆಯಿಂದ ಸ್ಥಾಪಿತವಾದ ಹೈಕೋರ್ಟ್‌ನ ನ್ಯಾಯಮೂರ್ತಿಗಳು 2013ರ ಕಾಯಿದೆಯ ಸೆಕ್ಷನ್ 14ರ ವ್ಯಾಪ್ತಿಗೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಸಕಾರಾತ್ಮಕವಾಗಿದೆ. ಆದರೆ, ನಾವು ಆರೋಪಗಳ ಅರ್ಹತೆಯನ್ನು ಪರಿಶೀಲಿಸಿಲ್ಲ" ಎಂದು ಲೋಕಪಾಲ್ ತೀರ್ಪು ವಿವರಿಸಿತ್ತು. ಅದರಂತೆ ಲೋಕಪಾಲ್‌ಗೆ ಸಲ್ಲಿಕೆಯಾಗಿದ್ದ ದೂರುಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ವರ್ಗಾಯಿಸಲಾಗಿತ್ತು.

ಜನವರಿ 27 ರಂದು, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಲೋಕಪಾಲ್ ಪೂರ್ಣ ಪೀಠ, ಹೈಕೋರ್ಟ್ ನ್ಯಾಯಮೂರ್ತಿಗಳು 'ಸಾರ್ವಜನಿಕ ಸೇವಕ' ಎಂಬ ವ್ಯಾಖ್ಯಾನದಡಿ ಬರುತ್ತಾರೆ. ಅಲ್ಲದೆ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ- 2013 ನ್ಯಾಯಮೂರ್ತಿಗಳನ್ನು ತನ್ನ ವ್ಯಾಪ್ತಿಯಿಂದ ಹೊರಗಿಡುವುದಿಲ್ಲ ಎಂದು ತೀರ್ಪು ನೀಡಿತ್ತು.

ಆದರೆ, ಲೋಕಪಾಲ್ ಈ ವಿಷಯದ ಬಗ್ಗೆ ಮಾರ್ಗದರ್ಶನಕ್ಕಾಗಿ ಮೊದಲು ಸಿಜೆಐ ಅವರನ್ನು ಸಂಪರ್ಕಿಸಲು ನಿರ್ಧರಿಸಿತ್ತು.  ಹೀಗಾಗಿ ದೂರುಗಳಿಗೆ ಸಂಬಂಧಿಸದಂತೆ ಕೈಗೊಳ್ಳಬೇಕಾದ ಕ್ರಮವನ್ನು ಮುಂದೂಡಿತ್ತು.

ಅದರಂತೆ, ಲೋಕಪಾಲ್ ತನ್ನ ತೀರ್ಪನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೊದಲು ನ್ಯಾಯಮೂರ್ತಿಗಳ ಮತ್ತು ಹೈಕೋರ್ಟ್‌ನ ಹೆಸರನ್ನು ಮಸಕುಗೊಳಿಸಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ನಂತರ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿತ್ತು.

ಇಂದಿನ ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್‌ ಸಿಬಲ್‌, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು.