ಕೋರ್ಟ್ ಮಾಸ್ಟರ್ ಸೇವೆ ಖಾಯಂಗೊಳಿಸುವ ಕುರಿತಂತೆ ಜನವರಿ 31, 2023ರೊಳಗೆ ನಿರ್ಧಾರ ಕೈಗೊಳ್ಳುವಂತೆ ಅಲಾಹಾಬಾದ್ ಹೈಕೋರ್ಟ್ನ ಲಖನೌ ಪೀಠಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ. [ರಶ್ಮಿ ಸಿಂಗ್ ಮತ್ತಿತರರು ಹಾಗೂ ಪ್ರಮೋದ್ ಕುಮಾರ್ ಶ್ರೀವಾಸ್ತವ ಇನ್ನಿತರರ ನಡುವಣ ಪ್ರಕರಣ].
ಅಕ್ಟೋಬರ್ 8, 2021ರಂದು, ನ್ಯಾಯಾಂಗ ನಿಂದನೆ ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್ ಎಂಟು ವಾರಗಳಲ್ಲಿ ಸಮಸ್ಯೆ ನಿರ್ಧರಿಸಲು ತನ್ನ ಆಡಳಿತ ವಿಭಾಗಕ್ಕೆ ವಿನಂತಿಸಿತ್ತು ಎಂಬುದನ್ನು ಗಮನಿಸಿದ ನಂತರ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಈ ನಿಟ್ಟಿನಲ್ಲಿ ನಿರ್ದೇಶನ ನೀಡಿತು.
"ಅಂತಹ ಆದೇಶ ಜಾರಿಗೊಳಿಸಿದಾಗ, ಹೈಕೋರ್ಟ್ ಅದನ್ನು ತ್ವರಿತವಾಗಿ ಮಾಡಬೇಕು ಎಂದು ನಿರೀಕ್ಷಿಸುತ್ತೇವೆ. ದುರದೃಷ್ಟವಶಾತ್, ಅರ್ಜಿ ಇನ್ನೂ ಬಾಕಿ ಉಳಿದಿದೆ...” ಎಂದಿರುವ ನ್ಯಾಯಾಲಯ ಪ್ರತಿ-ಅಫಿಡವಿಟ್ ಸಲ್ಲಿಸಲು ಸಮಯಾವಕಾಶ ಕೋರಿ ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಮುಂದೂಡಲು ಬಯಸುತ್ತಿದೆ ಎಂಬುದನ್ನು ಗಮನಿಸಿತು.
2018ರ ಆದೇಶದ ಪ್ರಕಾರ ನ್ಯಾಯಾಲಯದ ವ್ಯವಸ್ಥಾಪಕರ ಹುದ್ದೆಯನ್ನು ಖಾಯಂಗೊಳಿಸುವಂತೆ ಕೋರಿ ವಕೀಲರಾದ ದಿವ್ಯೇಶ್ ಪ್ರತಾಪ್ ಸಿಂಗ್ ಮತ್ತು ವಿಕ್ರಮ್ ಪ್ರತಾಪ್ ಸಿಂಗ್ ಅವರು ಅಲಾಹಾಬಾದ್ ಹೈಕೋರ್ಟ್ಗೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯಿಂದ ಪ್ರಕರಣ ಉದ್ಭವಿಸಿತ್ತು.
ಅರ್ಜಿದಾರರು ಮಾಹಿತಿ ಹಕ್ಕು ಕಾಯಿದೆ (ಆರ್ಟಿಐ ಕಾಯಿದೆ) ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ನ್ಯಾಯಾಂಗ ನಿಂದನೆ ಮೊಕದ್ದಮೆ ಮೂಲಕ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.